Sunday 27 September 2015

ಬೀಸಿತು ಸುಖಸ್ಪರುಶವಾತಂ - ಭಾಗ ೩

ಪೃಥಿವಿಯಾತ್ಮಜೆ ಬಳಿಕ ಚೇತರಿಸಿ, ತನಗಿನ್ನು
ಪಥಮಾವುದೆಂದು ದೆಸೆದೆಸೆಗಳಂ ನೋಡಿ, ಸಲೆ
ಶಿಥಿಲಮಾದವಯವದ, ಧೂಳಿಡಿದ ಮೆಯ್ಯ, ಬಿಡಿಮುಡಿಯ ವಿಕೃತಿಯನೆಣಿಸದೆ
"ಮಿಥಿಲೇಂದ್ರವಂಶದೊಳ್ ಜನಿಸಿ ರಘುಕುಲದ ದಶ
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್
ವ್ಯಥಿಸುವಂತಾಯ್ತಕಟ, ವಿಧಿ"ಯೆಂದು ಹಲುಬಿದಳ್ ಕಲ್ಮರಂ ಮರುಗುವಂತೆ                       - ೧೯.೩೬

ಅಲ್ಲಿನ ಮೃಗಪಕ್ಷಿಗಳ ಉಪಚಾರದಿಂದ ಚೇತರಿಸಿಕೊಂಡು ಸೀತೆಯು ಎಚ್ಚತ್ತಳು. ಹಾಗೆ ಚೇತರಿಸಿಕೊಂಡು ಎದ್ದ ಬಳಿಕ - ತನಗಿನ್ನು ಮುಂದಿನ ದಾರಿ ಯಾವುದೆಂದು ತಿಳಿಯದೆ ದಿಕ್ಕುದಿಕ್ಕುಗಳನ್ನು ನೋಡಿ, ಶಿಥಿಲವಾದ ತನ್ನ ಅವಯವದ ಬಗ್ಗೆಯೂ, ಧೂಳು ಮೆತ್ತಿದ ಮೈಯ ಬಗ್ಗೆಯೂ, ಬಿಡುಮುಡಿಯ ಬಗ್ಗೆಯೂ.. ಆಗ ತಾನಿದ್ದ ಅವಸ್ಥೆಯ ಬಗ್ಗೆ ಅಷ್ಟೇನೂ ಗಮನ ಹರಿಸದೆ - "ಮಿಥಿಲೇಂದ್ರನಿಗೆ ಮಗಳಾಗಿ, ರಘುಕುಲದ ಅರಸ ದಶರಥನ ಸೊಸೆಯಾಗಿ ಬಂದ ನಾನು ಹೀಗೆ ಕಾರಡವಿಯಲ್ಲಿ ವ್ಯಥಿಸುವಂತಾಯ್ತು, ಅಯ್ಯೋ ವಿಧಿಯೇ.." ಎಂದು ಗೋಳಾಡುವ ಪರಿಯನ್ನು ನೋಡಿದರೆ, ಅದನ್ನು ಕಂಡು ಕಲ್ಲು ಕೂಡ ಕರಗುವ ಹಾಗಿತ್ತು.

"ಕೇಣಮಂ ಬಿಟ್ಟಾತ್ಮಘಾತಕದೊಳೀಕ್ಷಣಂ
ಪ್ರಾಣಮಂ ತೊರೆದಪೆನೆನೆ ಬಂದಪುದು ಗರ್ಭದಿಂ
ಭ್ರೂಣಹತ್ಯಾದೋಷಮೇಗೈವೆನಾರ್ಗೊರೆವೆನೆಂದೊಯ್ಯನೆದ್ದು, ಬಳಿಕ
ಏಣಾಕ್ಷಿ ನಡೆದಳಡವಿಯೊಳು ಪಲ ಕಂಟಕ
ಶ್ರೇಣಿಗಳ್ ಸೋಂಕಿ ಮೆಲ್ಲಡಿಗಳಿಂ ಬಸಿವ ನವ
ಶೋಣಿತಂ ನೆಲದೊಳ್ ಪೊನಲ್ವರಿಯಲ್...."                                                   - ೧೯.೩೭

’ಭಯಪಡುತ್ತ ಕೂರುವುದರ ಬದಲು ಈ ಕ್ಷಣದಲ್ಲಿ ತನ್ನನ್ನು ತಾನು ಕೊಂದುಕೊಳ್ಳೋಣವೆಂದರೆ ಅದನ್ನೂ ಮಾಡಬಾರದು. ಹಾಗೆ ಮಾಡಿದರೆ ಭ್ರೂಣಹತ್ಯಾ ದೋಷ ಅಂಟುವುದಲ್ಲವೆ.. ಅಯ್ಯೊ, ಏನು ಮಾಡುವುದು.. ಯಾರಲ್ಲಿ ನನ್ನ ನೋವಿನ ಕಥೆಯನ್ನು ಹೇಳುವುದು..’ ಎಂದುಕೊಂಡು ಸೀತೆ ಅಲ್ಲಿಂದೆದ್ದು ಆ ಕಾಡಿನಲ್ಲಿ ನಡೆಯತೊಡಗಿದಳು. ಕಾಡಿನ ದಾರಿಯಲ್ಲಿ ಆಕೆಯ ಕಾಲಿಗೆ ಹಲಕೆಲವು ತೆರದ ಮುಳ್ಳುಗಳು ಚುಚ್ಚಿ ಮೃದುಪಾದದಿಂದ ಒಸರುವ ಹೊಸರಕ್ತವು ಧಾರೆಧಾರೆಯಾಗಿ ಹರಿಯುತ್ತಿರಲು ಸೀತೆ ಆ ಕಾಡಿನಲ್ಲಿ ಮುನ್ನಡೆದಳು.

ಆ ಹೊತ್ತಿಗೆ ಸರಿಯಾಗಿ ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯರ ಸಮೇತ ಅಲ್ಲಿಗೆ ಬಂದರು. ಅಡವಿಯಲ್ಲಿ ಏಕಾಕಿಯಾಗಿ ದಿಕ್ಕುಗಾಣದೆ ನಡೆದು ರೋದಿಸುತ್ತಿದ್ದ ಸೀತೆಯನ್ನು ಕಂಡು - "ಆರಿವಳ್? ಅದೇತಕೆ ಇರ್ದಪಳ್ ಈ ವನಾಂತರದೊಳ್! ಆರೈವೆನ್ (ಆರಯ್ - ವಿಚಾರಿಸು)" ಎಂದು ನಡೆತಂದು, ಕರುಣದಿಂದ "ಎಲೆ ತಾಯೆ, ನೀನಾವಳೌ? ಕಂಡ ಕುರುಪಾಗಿರ್ಪುದು.. ಘೋರತರ ಗಹನಕೆ ಒರ್ವಳೆ ಬಂದೆ ಎಂತು? ಹೇಳಾ.. ಬೆದರಬೇಡ." ಎಂದು ಸೀತೆಯನ್ನು ಪ್ರಶ್ನಿಸಿದರು. ’ತಾಯೆ, ನೀನಾರು ಎಂದು ತಿಳಿಸು. ನನ್ನ ಹೆಸರು ವಾಲ್ಮೀಕಿ ಎಂದು. ಹೀಗೆ ಅತಿಶೋಕದಲ್ಲಿದ್ದವರನ್ನು ಕಂಡು ಸುಮ್ಮನೆ ಹೋಗಲಾರೆ ನಾನು. ಹೇಳು ತಾಯೆ, ಯಾರು ನೀನು?’ ಎಂದು ಆಕೆಗೆ ಅಭಯವನ್ನಿತ್ತು ನುಡಿದರು.

ಸೀತೆಗಾದರೊ, ಈ ದಟ್ಟ ಕಾಡಿನಲ್ಲಿ ತನ್ನ ದುಃಖವನ್ನು ವಿಚಾರಿಸಲು ಮಹರ್ಷಿಯೊಬ್ಬರು ಸಿಕ್ಕರಲ್ಲ ಎಂದು ಹರುಷವೊತ್ತರಿಸಿದರೂ, ಅದರ ಜೊತೆಗೇ ಆಕೆಯ ಶೋಕವೂ ಇಮ್ಮಡಿಸಿತು. ಆ ಶೋಕದ ಜೊತೆಗೆ ಸ್ವಲ್ಪ ಲಜ್ಜೆಯೂ ಬೆರೆಯಿತು - ಮಹರ್ಷಿಗಳೆದುರು ತನ್ನ ಪರಿಚಯವನ್ನು, ಹೀಗೆ ಈ ಸ್ಥಿತಿಯಲ್ಲಿ ಮಾಡಿಕೊಳ್ಳಬೇಕಾಯಿತಲ್ಲ ಎಂದಿರಬಹುದು. ಗದ್ಗದ ಕಂಠೆಯಾಗಿ "ಸ್ವಾಮಿ, ನಾನು ಸೀತೆ. ಲೋಕಾಪವಾದಕ್ಕೆ ಅಂಜಿ ರವಿಕುಲ ಸಂಭವನಾದ ನನ್ನ ಪತಿಯು ನನ್ನನ್ನು ತ್ಯಜಿಸಿದನು. ಆತನ ಸಹೋದರನಾದ ಸೌಮಿತ್ರಿಯು ನನ್ನನ್ನು ಈ ಕಾಡಿಗೆ ಕರೆದುತಂದು ಇಲ್ಲಿ ಬಿಟ್ಟುಹೋದನು. ಈಗ ನನ್ನ ಗರ್ಭದಲ್ಲಿರುವ ಶಿಶುವಿನ ಸಲುವಾಗಿಯಾದರೂ ನನ್ನ ಜೀವವನ್ನು ನಾನು ಹೊರೆದುಕೊಳ್ಳಬೇಕಿದೆ" ಎಂದು ತನ್ನ ಸಂಗತಿಯನ್ನು ಅರುಹಿ ವಾಲ್ಮೀಕಿ ಮುನಿಯ ಪಾದಕ್ಕೆರಗಿದಳು.

ಅದಕ್ಕೆ ವಾಲ್ಮೀಕಿ ಮಹರ್ಷಿಯು : "ದೇವಿ, ಬಿಡು ಶೋಕಮಂ. ಪುತ್ರಯುಗಮಂ ಪಡೆವೆ, ಭಾವಿಸದಿರಿನ್ನು ಸಂದೇಹಮಂ. ನಮ್ಮಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾನ್ ಓವಿಕೊಂಡಿರ್ಪೆನ್, ಅಂಜದಿರು" ಎಂದು ಸಂತೈಸಿ, ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು.

---------------------------------------------------------------------------------------------------------


ವಾಲ್ಮೀಕಿ ಆಶ್ರಮದಲ್ಲಿ ಸೀತೆಗಾಗಿ ಚಿತ್ರಮಯವಾದ ಪರ್ಣಕುಟೀರವೊಂದು ಸಿದ್ಧವಾಯಿತು. ಸೀತೆಯು ಆ ಪರ್ಣಕುಟೀರದಲ್ಲಿರುತ್ತ, ಆಶ್ರಮದ ಋಷಿಪತ್ನಿಯರ ಮಿತ್ರತ್ವವನ್ನು ಪಡೆದು, ವಾಲ್ಮೀಕಿ ಮುನಿವರರ ಆರೈಕೆಯಲ್ಲಿ, ಪುತ್ರೋದಯದ ಕಾಲಕ್ಕಾಗಿ ಕಾಯುತ್ತಿದ್ದಳು.
ಜಾತಿವೈರಗಳಿಲ್ಲದ ಮೃಗಪಕ್ಷಿಗಳ ಸಮೂಹದಿಂದ, ಋತುಭೇದವಿಲ್ಲದ ಬಳ್ಳಿ-ಮರಗಳಿಂದ, ತಿಳಿಗೊಳಗಳಲ್ಲಿ ಅರಳಿರುವ ಕಮಲದ ಹೂಗಳಿಂದ ಕೂಡಿದ ಆ ಆಶ್ರಮದ ಪರಿಸರವು ತುಂಬ ರಮ್ಯವಾಗಿತ್ತು.
ಅಲ್ಲಿನ ಮುನಿಪತ್ನಿಯರೊಡನೆ ಸ್ನೇಹದಿಂದಿರುತ್ತ ಸೀತೆ ದಿನ ಕಳೆಯುತ್ತಿದ್ದಳು. ಮುನಿವಟುಗಳು ಪರಿಚರ್ಯೆಯನ್ನು ಮಾಡುವರು, ಋಷಿಪತ್ನಿಯರು ಇನಿದಾದ ವಸ್ತುಗಳನ್ನಿತ್ತು ಸೀತೆಯನ್ನು ಸತ್ಕರಿಸುವರು. ವಾಲ್ಮೀಕಿ ಮಹರ್ಷಿಗಳೂ ಸೀತೆಯ ಬಯಕೆಯ ವಸ್ತುಗಳನ್ನು ಸಲಿಸುತ್ತ , ದಿನದಿನಕ್ಕೆ ಆಕೆಯ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಇವರೆಲ್ಲರ ಅಕ್ಕರೆಯ ಆಸರೆಯಲ್ಲಿರುತ್ತ ಸೀತೆಯು ಶ್ರೀರಾಮನನ್ನು ಕುರಿತು ಧ್ಯಾನಿಸುತ್ತ ತನ್ನ ನೋವನ್ನು ಮರೆಯಲು ಪ್ರಯತ್ನಪಡುತ್ತಿದ್ದಳು.

ಹೀಗಿರಲು ಸೀತೆಗೆ ನವಮಾಸಗಳು ತುಂಬಿದವು. ಬಳಿಕ ಒಂದಿರುಳು ಶುಭಲಗ್ನದಲ್ಲಿ ಸೀತೆಯು ಮುದ್ದಾದ ಅವಳಿ ಗಂಡುಮಕ್ಕಳಿಗೆ ಜನ್ಮವಿತ್ತಳು. ಆಶ್ರಮವಾಸಿ ಹೆಂಗಸರು ಈ ವಿಷಯವನ್ನು ವಾಲ್ಮೀಕಿ ಮಹರ್ಷಿಗಳಿಗೆ ಹೋಗಿ ತಿಳಿಸಿದರು. ಅವರು ತವಕದಿಂದ ಸೀತೆಯಿದ್ದಲ್ಲಿಗೆ ಬಂದು, ಮಕ್ಕಳನ್ನು ನೋಡಿ ಸಂತಸಪಟ್ಟು, ಅವರಿಬ್ಬರಿಗೆ ಕುಶ-ಲವ ಎಂಬ ಹೆಸರನ್ನಿಟ್ಟರು. ಆಶ್ರಮವಾಸಿಗಳಿಗೆ ತಮ್ಮ ಆಶ್ರಮದಲ್ಲಿ ಏಕಕಾಲಕ್ಕೆ ಶಶಿ-ರವಿಗಳು ಉದಯಿಸಿದರೊ ಎಂಬಂತೆ ಆ ಮಕ್ಕಳು ಕಂಡರು.

------------------------------------------------------------------------------------------------------------

ಬಾಲದೊಡಿಗೆಗಳೆಲ್ಲಮಂ ತೊಡಿಸಿ ನೋಡುವಂ,
ಬಾಲಲೀಲೆಗಳನಾಡಿಸಿ ಮುದ್ದು ಮಾಡುವಂ,
ಬಾಲಕರ್ಗಿನಿದಾದ ವಸ್ತುವಂ ಕೂಡುವಂ, ತನ್ನ ತೊಡೆಮಡಿಲೊಳಿಟ್ಟು
ಲಾಲಿಸುವನಾವಗಂ ಜಪತಪ ಸಮಾಧಿಗಳ
ಕಾಲಮಂ ಬಗೆಯದೆ; ಮುನೀಶ್ವರಂ ಕುಶಲವರ
ಮೇಲಣಕ್ಕರೊಳಿರ್ದನಾಶ್ರಮದೊಳುತ್ಸವಂ ಪೆರ್ಚಿದುದು ದಿನದಿನದೊಳು                - ೧೯.೪೭

ವಾಲ್ಮೀಕಿ ಮಹರ್ಷಿಯು ಕುಶಲವರಿಗೆ ಅಂದವಾದ ತೊಡಿಗೆಗಳನ್ನು ತೊಡಿಸಿ ನೋಡುವರು, ಮಕ್ಕಳಾಟವನ್ನು ಆಡಿಸಿ ಮುದ್ದು ಮಾಡುವರು, ಅವರಿಗೆ ಇನಿದಾದ ವಸ್ತುಗಳನ್ನಿತ್ತು, ತನ್ನ ತೊಡೆಮಡಿಲಿನೊಳಿಟ್ಟು ಸಲಹುವರು. ಮಕ್ಕಳ ಲಾಲನೆಪಾಲನೆಯಲ್ಲಿ ಅವರು ಎಷ್ಟರ ಮಟ್ಟಿಗೆ ಮೈಮರೆತಿದ್ದರೆಂದರೆ ಒಮ್ಮೊಮ್ಮೆ ತಮ್ಮ ಜಪತಪ ಧ್ಯಾನಗಳ ಸಮಯವನ್ನೂ ಅವರು ಮರೆತೇಬಿಡುವರು. ಈ ರೀತಿಯಾಗಿ, ಮುನೀಶ್ವರರ ಆರೈಕೆಯಲ್ಲಿ ಕುಶಲವರು ಬೆಳೆಯುತ್ತಿರಲು ಆಶ್ರಮದ ಉತ್ಸಾಹವು ದಿನದಿನವೂ ಹೆಚ್ಚುತ್ತಿತ್ತು.

ದಶರಥರಾಜನ ಮಗನ ಅರಮೆಯಲ್ಲಿ ಬೆಳೆಯಬೇಕಾದ ಬಾಲಕರು ಹೀಗೆ ಕಾಂತಾರವಾಸದಲ್ಲಿರಬೇಕಾಯಿತಲ್ಲ ಎಂಬ ಚಿಂತೆ ಸೀತೆಯ ಮನಸಿಗೆ ಎಂದೂ ಬಾರದಿರುವಂತೆ, ಯಾವ ವಿಷಯದಲ್ಲೂ ಮಕ್ಕಳಿಗೆ ಏನೂ ಕೊರತೆಯಾಗದಂತೆ ವಾಲ್ಮೀಕಿ ಮಹರ್ಷಿಗಳು ನೋಡಿಕೊಂಡರು. ಅವರ ಪಾಲನೆಯಲ್ಲಿ ಆ ಮಕ್ಕಳು ಶುಕ್ಲಪಕ್ಷದ ಚಂದಿರನಂತೆ ದಿನದಿನಕೆ ವರ್ಧಿಸಿದರು. ಕುಶಲವರಿಗೆ ಹನ್ನೆರಡು ವರ್ಷಗಳು ತುಂಬಲು, ವಾಲ್ಮೀಕಿ ಮಹರ್ಷಿಗಳು ಮಕ್ಕಳ ಉಪನಯನ ಸಂಸ್ಕಾರವನ್ನು ವೇದೋಕ್ತ ರೀತಿಯಲ್ಲಿ ನಡೆಯಿಸಿದರು.

ಮುಂದೆ, ಮುನೀಶ್ವರರು ಆ ಮಕ್ಕಳಿಗೆ ಸರ್ವಕರ್ಮದ ವಿಧಿಯನ್ನೂ, ಅಖಿಲ ನಿಗಮ ಶಾಸ್ತ್ರದ ಬಗೆಯನ್ನೂ, ಧರ್ಮದ ನೆಲೆಯನ್ನೂ, ನೀತಿ ನಿಶ್ಚಯ ರೀತಿಗಳನ್ನೂ ಸಾಂಗೋಪಾಂಗವಾಗಿ ಬೋಧಿಸಿದರು. ನಂತರ ಆ ಕುಮಾರರಿಗೆ ಧನುರ್ವೇದವನ್ನು ಕಲಿಸಿ, ಉತ್ತಮವಾದ ಧನುಸ್ಸುಗಳನ್ನೂ, (ಅದರಲ್ಲಿನ ಬಾಣಗಳು ಎಂದಿಗೂ ಮುಗಿಯದ) ಅಕ್ಷಯವಾದ ಬತ್ತಳಿಕೆಗಳನ್ನೂ ಉಡುಗೊರೆಯಾಗಿತ್ತರು.

ಆ ನಂತರ ಅವರಿಗೆ ರಾಮಾಯಣವನ್ನು ಮೃದುಮಧುರವಾಗಿ ಹಾಡುವ ರೀತಿಯನ್ನು ಕಲಿಸಿದರು. ಸೀತೆ ನಲಿವಂತೆ, ವಾಲ್ಮೀಕಿ ಮೆಚ್ಚುವ ತೆರದೊಳ್, ಆ ತಪೋವನದ ಮುನಿಗಣಮೈದೆ ಕೊಂಡಾಡಲ್ - ಆ ತರುಣರೀರ್ವರುಂ (ಕುಶ-ಲವರು) ಮಧುರವೀಣೆಗಳ ಮೇಳಾಪದಾಲಾಪಂಗಳ ಗೀತದೊಳ್ - ಸಂಕೀರ್ಣ ಶುದ್ಧ ಸಾಳಗದಿಂ ರಸಾತಿಶಯಮೆನೆ ಪಾಡುವರ್ ದೇವನಗರೀ ನಿಕೇತನ ಶ್ರೀಪತಿಯ ಚಾರಿತ್ರಮಪ್ಪ ರಾಮಾಯಣವನ್ ಅನುದಿನದೊಳು.

ಹೀಗೆ, ಕುಶಲವರು ದೇವಪುರ ನಿವಾಸಿಯಾದ ಶ್ರೀನಿವಾಸನ ಚರಿತ್ರೆಯಾದ ರಾಮಾಯಣ ಮಹಾಕಾವ್ಯವನ್ನು ಅನುದಿನವೂ ಹಾಡಿ ಸೀತೆಯನ್ನೂ, ವಾಲ್ಮೀಕಿ ಮುನೀಶ್ವರರನ್ನೂ, ಆಶ್ರಮವಾಸಿಗಳನ್ನೂ ಸಂತೋಷಪಡಿಸುತ್ತಿದ್ದರು.

------------------------------------------------------------------------------------------------------------

ಇತ್ತ, ಅಯೋಧ್ಯೆಯಲ್ಲಿ, ರಾಮನು ತನ್ನಿಂದಾದ ಬ್ರಹ್ಮಹತ್ಯಾದೋಷದ* ನಿವಾರಣೆಗಾಗಿ ಅಶ್ವಮೇಧಯಾಗವನ್ನು ಮಾಡುವುದೆಂದು ನಿಶ್ಚೈಸಿ, ವಸಿಷ್ಠಾದಿ ಮುನಿಗಳನ್ನು ಕರೆಸಿ ಅವರ ಅನುಮತಿ ಕೇಳಿದನು.
(*ರಾವಣನನ್ನು ಕೊಂದದ್ದರಿಂದ ಉಂಟಾದ ಬ್ರಹ್ಮಹತಿಯ ದೋಷ)
ಅಲ್ಲಿ ನೆರೆದಿದ್ದ ವಾಮದೇವ, ಅತ್ರಿ, ಗಾಲವ, ವಸಿಷ್ಠ, ವಿಶ್ವಾಮಿತ್ರ ಮುಂತಾದ ಮುನಿಗಳು ಅಶ್ವಮೇಧದ ಲಕ್ಷಣವನ್ನು ರಾಮನಿಗೆ ತಿಳಿಸಿ, ಆ ಯಾಗವನ್ನು ಮಾಡಲು ಸಹಧರ್ಮಿಣಿಯೂ ಜೊತೆಯಲ್ಲಿರಬೇಕು ಎಂದು ತಿಳಿಸಿದರು. ಅದಕ್ಕೆ ರಾಮನು ಬಂಗಾರದಿಂದ ನಿರ್ಮಿಸಿದ ಸೀತೆಯ ಪುತ್ಥಳಿಯ ಜೊತೆ ಕುಳಿತು ತಾನು ಆ ಮಹಾಯಜ್ಞವನ್ನು ನಡೆಸುವೆನೆಂದೂ, ಅದಕ್ಕೆ ಮುನಿಗಳೆಲ್ಲರ ಅನುಜ್ಞೆ ಬೇಕೆಂದೂ ಬಿನ್ನವಿಸಿ, ಅವರನ್ನು ಅದಕ್ಕೆ ಒಡಂಬಡಿಸಿದನು.

ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ ತಳೆದು, ರಘುನಾಥಂ ತುರಂಗಮಂ ಪೂಜೆಗೈದು, ಇಳೆಯೊಳ್ ಚಲಿಸಲ್ ಅದರ ಹಣೆಗೆ ತನ್ನ ಅಗ್ಗಳಿಕೆಯಂ ಬರೆದ ಪತ್ರಿಕೆಯನು ಅಳವಡಿಸಿ, ಕೂಡೆ ಮೂರು ಅಕ್ಷೋಹಿಣಿಯ ಮೂಲಬಲಸಹಿತ ವೀರ ಶತ್ರುಘ್ನನಂ ಕಾವಲ್ಗೆ ಕಳುಹಿಬಿಡಲ್ ಆ ಹಯಂ ತಿರುಗುತಿರ್ದುದು ಧರೆಯ ಮೇಲೆ ಅಖಿಲ ದೆಸೆದೆಸೆಯೊಳು.

ಹೀಗೆ, ಶತ್ರುಘ್ನನ ಕಾವಲಿನಲ್ಲಿ, ಮೂರು ಅಕ್ಷೋಹಿಣಿಯ ಬಲವು ತನ್ನ ಹಿಂದಿರಲು, ಆ ಯಾಗದ ಕುದುರೆಯು ಭೂಮಿಯ ಮೇಲೆ ದಿಕ್ಕುದಿಕ್ಕಿನಲ್ಲಿ ಚಲಿಸುತ್ತಿದ್ದಿತು. ಆ ಕುದುರೆ ಹೋದ ಕಡೆಯ ರಾಜ್ಯದ ಅರಸುಗಳೆಲ್ಲ ರಾಮನ ಔನ್ನತ್ಯವನ್ನೊಪ್ಪಿ, ಅಶ್ವದ ಕಾವಲಿಗೆ ಬಂದ ಶತ್ರುಘ್ನನಿಗೆ ಕಾಣಿಕೆಗಳನ್ನಿತ್ತು ನಮಿಸುತ್ತಿದ್ದರು. ರಾಮನನ್ನು ಕೊಂಡಾಡುತ್ತಿದ್ದರು. ಹೀಗಿರಲು ಆ ಕುದುರೆಯು ಮುಂದುವರೆಯುತ್ತ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಸೇರಿದ ಉಪವನದ ಬಳಿಗೆ ಬಂದಿತು.
ಆ ಉಪವನದಲ್ಲಿದ್ದ ಹಸುರು ಹುಲ್ಲುಗಳಿಗೆ ಮನಸೋತು ಯಾಗದ ಕುದುರೆಯು ಆ ಉಪವನವನ್ನು ಹೊಕ್ಕಿತು. ಅದನ್ನು ಆ ತೋಟದ ಕಾವಲಿಗಿದ್ದ ಲವನು ಕಂಡು, ಕುದುರೆಯ ಬಳಿಬಂದು ನೋಡಿದನು.

"ಇದೆತ್ತಣ ಕುದುರೆಯಪ್ಪಾ! ಮಹರ್ಷಿ ವಾಲ್ಮೀಕಿಯು ಸಮುದ್ರರಾಜನ ಆಹ್ವಾನದ ಮೇರೆಗೆ ಅವರ ಲೋಕಕ್ಕೆ ಹೋಗುವ ಮುನ್ನ ಈ ಉಪವನದ ಕಾವಲಿನ ಕೆಲಸವನ್ನು ನನಗೊಪ್ಪಿಸಿ ಹೋಗಿದ್ದಾರೆ. ಆದರೆ ಇದಾವುದೋ ಕುದುರೆ ಈ ತೋಟವನ್ನು ಹೊಕ್ಕು ಇಲ್ಲಿನ ಸಸ್ಯಗಳನ್ನೆಲ್ಲ ಮೇಯ್ದಿತೆಂದು ತಿಳಿಯಿತೆಂದರೆ ಮುನೀಶ್ವರರು ಏನೆಂದಾರು.." ಎಂದು ಅಂಜಿ ಕುದುರೆಯಿದ್ದಲ್ಲಿಗೆ ಬಂದು ನೋಡಿದರೆ ಕುದುರೆಯ ಹಣೆಯ ಮೇಲೊಂದು ಬರಹವಿದೆ.! ಲವನು ಅದನ್ನೋದಲು ತೊಡಗಿದನು:
"ಬುವಿಯಲ್ಲಿ ಕೌಸಲ್ಯೆಯ ಮಗನಾದ ರಾಮನೊಬ್ಬನೇ ವೀರನು. ಆತನ ಯಜ್ಞ ತುರಗವಿದು. ಇದನ್ನು ತಡೆದು ನಿಲ್ಲಿಸಿ ನಿರ್ವಹಿಸಬಲ್ಲ ಸಾಮರ್ಥ್ಯವುಳ್ಳವರು ಯಾರಾದರೂ ಇದನ್ನು ತಡೆಯಲಿ...." ಎಂದು ಮುಂತಾದ ವಿವರವನ್ನುಳ್ಳ ಆ ಲೇಖನವನ್ನೋದಿ ಲವನು ಉರಿದೆದ್ದನು. ಇವರ ಗರ್ವವನ್ನು ಮುರಿಯದಿದ್ದರೆ ನಾನು ಸೀತೆಯ ಮಗನೇ ಅಲ್ಲ ಎಂದು ಕೋಪ ತಳೆದು ನುಡಿದನು.

ತನ್ನ ಉತ್ತರೀಯವನ್ನು ತೆಗೆದು ಅದರಿಂದ ಹತ್ತಿರವಿದ್ದ ಬಾಳೆಯ ಮರವೊಂದಕ್ಕೆ ಕುದುರೆಯನ್ನು ಬಿಗಿದು ಕಟ್ಟಿದನು. "ಬೇಡ ಬೇಡ, ಅರಸುಗಳ ಕುದುರೆಯನ್ನು ಕಟ್ಟಬೇಡ, ಬಿಟ್ಟುಬಿಡು" ಎಂದ ತನ್ನ ಸಹಚರ-ಮುನಿಕುಮಾರರಿಗೆ ಹೆದರಬೇಡಿ ಎಂದು ಅಭಯವನಿತ್ತು ಕುದುರೆಯ ಕಾವಲಿಗೆ ನಿಂತನು.

ಅಷ್ಟರಲ್ಲಿ, ಯಜ್ಞಾಶ್ವವನ್ನು ಹುಡುಕುತ್ತ ಅಲ್ಲಿಗೆ ಬಂದ ಕಾವಲಿನವರು ಬಾಳೆಮರಕ್ಕೆ ಕಟ್ಟಿಹಾಕಲ್ಪಟ್ಟ ಕುದುರೆಯನ್ನು ನೋಡಿದರು. ಅವರು ಲವನನ್ನೂ, ಅಲ್ಲಿದ್ದ ಬಾಲಕರನ್ನೂ ಕುರಿತು "ಯಜ್ಞಾಶ್ವವನ್ನೇಕೆ ಕಟ್ಟಿದಿರಿ.. ಈಗಿಂದೀಗಲೇ ಅದನ್ನು ಬಿಟ್ಟುಬಿಡಿ.." ಎನ್ನುತ್ತ ಗರ್ಜಿಸಿ ನುಡಿದರು. ಲವನು "ಯಾವ ಕಾರಣಕ್ಕೂ ಈ ಅಶ್ವವನ್ನು ಬಿಡುವುದಿಲ್ಲ.  ಅದನ್ನು ಬಿಡಿಸಲು ಉಪಕ್ರಮಿಸುವವರ ಕೈಯನ್ನು ಕಡಿದು ಬಿಸುಡುತ್ತೇನೆ."  ಎಂದು ಹೇಳಿದನು.  ಅದಾಗಿಯೂ ಆ ಸೈನಿಕರು ಕುದುರೆಯ ಕಟ್ಟನ್ನು ಬಿಚ್ಚಲು ಹೋದಾಗ ಲವನು ಅವರ ಮೇಲೆ ಬಾಣದ ಮಳೆಗರೆದು ಅವರ ಕೈಕಾಲುಗಳನ್ನು ಕತ್ತರಿಸಿ ಅವರನ್ನು ಅಲ್ಲಿಂದ ಓಡಿಸಿದನು. ಅವರುಗಳು ಬಂದು, ನಡೆದುದೆಲ್ಲವನ್ನೂ ವಿವರಿಸಿ ಶತ್ರುಘ್ನನಲ್ಲಿ ಮೊರೆಯಿಟ್ಟರು.

Sunday 13 September 2015

ಬಾಹುಬಲಿಯ ನೆನಪು...

ಆದಿನಾಥನ ಮಗನಾದ ಭರತನು ತನ್ನ ಆಯುಧಾಗಾರದಲ್ಲಿ ಉದಿಸಿದ ಚಕ್ರರತ್ನವನ್ನು ಮುಂದಿಟ್ಟುಕೊಂಡು ಇಡೀ ಭೂಮಂಡಲದ ಅರಸರೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ, 'ಚಕ್ರವರ್ತಿ', 'ಚಕ್ರಿಎಂಬ ಬಿರುದನ್ನು ಪಡೆದುತನ್ನ ವಿಜಯಯಾತ್ರೆಯನ್ನು ಮುಗಿಸಿ ಇನ್ನೇನು ರಾಜಧಾನಿಯಾದ ಅಯೋಧ್ಯಾಪುರವನ್ನು ಹುಗಬೇಕುಆಗ ಆ ಚಕ್ರರತ್ನವು ನಗರವನ್ನು ಪ್ರವೇಶಿಸದೆ ಹೊರಗೇ ನಿಂತುಬಿಡುತ್ತದೆ.
ಅದಕ್ಕೆ ಕಾರಣವೇನೆಂದು ಭರತನು ಕೇಳಲುಪುರೋಹಿತನು 'ನಿನ್ನ ತಮ್ಮಂದಿರೇ ನಿನ್ನ ಹಿರಿಮೆಯನ್ನೊಪ್ಪಿ ತಲೆಬಾಗದಿರುವುದರಿಂದ ಹೀಗೆ ಚಕ್ರರತ್ನವು ಊರ ಹೊರಗೇ ನಿಂತಿದೆ. ಮೊದಲು ಅವರು ನಿನಗೆ ಶರಣಾಗುವಂತೆ ಮಾಡುಅವರನ್ನು ನಿಗ್ರಹಿಸುಎಂದು ಸೂಚಿಸುತ್ತಾನೆ. ಭರತನಿಗೆ ಈ ವಿಷಯ ಕೇಳಿ ಅಸಾಧ್ಯ ಕೋಪವುಂಟಾಗುತ್ತದೆ.
ತಾನು ಚಕ್ರವರ್ತಿಯೆಂದು ಅನ್ಯ ರಾಜರೆಲ್ಲರೂ ಒಪ್ಪಿ ತನಗೆ ತಲೆಬಾಗಿದ್ದಾರೆ. ಆದರೆ ಸ್ವತಃ ತನ್ನ ತಮ್ಮಂದಿರೇ ತನ್ನ ಸಾರ್ವಭೌಮತ್ವವನ್ನು ಒಪ್ಪದಿದ್ದರೆ ಹೇಗೆ.!  ಶೀಘ್ರವೇ ತನ್ನ ತಮ್ಮಂದಿರೆಲ್ಲ ಬಂದು ತನಗೆ ತಲೆಬಾಗಬೇಕೆಂದು ಒಂದು ಪತ್ರವನ್ನು ಬರೆಸಿ ಅವರಲ್ಲಿಗಟ್ಟುತ್ತಾನೆ.

ಭರತನ ಇತರ ತಮ್ಮಂದಿರು ಭರತನಿಗೆ ತಲೆಬಾಗಲೊಪ್ಪದೆ, ಅಣ್ಣತಮ್ಮಂದಿರ ನಡುವೆಯೇ ಜಗಳ ತಂದಿಡುವ ತಮ್ಮ ರಾಜ್ಯದ ಮೇಲೆ ವೈರಾಗ್ಯವನ್ನೇ ತಳೆದು ಜಿನದೀಕ್ಷೆಯನ್ನು ಪಡೆಯುತ್ತಾರೆ. 
ಆದರೆ ಭರತನ ಮಲತಮ್ಮನಾದ ಬಾಹುಬಲಿಯು "ಹಿರಿಯಣ್ಣನಿಗೆ ನಮಿಸುವುದು ತಪ್ಪೇನಲ್ಲ. ಆದರೆ, ಹೀಗೆ ಖಡ್ಗವನ್ನು ತಲೆಯ ಮೇಲಿಟ್ಟು 'ನನಗೆ ತಲೆಬಾಗು' ಎಂದು ಹೇಳುವಾಗ ಅಂಥವನಿಗೆ ತಲೆಬಾಗುವುದು ಹೇಡಿತನ. ಬೇಕಿದ್ದರೆ ಭರತ ನನ್ನೊಡನೆ ಕಾದಿ ತನ್ನ ಶಕ್ತಿಯನ್ನು ನಿರೂಪಿಸಿಕೊಳ್ಳಲಿ" ಎಂದು ಉತ್ತರಿಸಿ ಕಳುಹಿಸುತ್ತಾನೆ. ಮುಂದೆ ಭರತ-ಬಾಹುಬಲಿಯರ ನಡುವಿನ ಕಾಳಗಕ್ಕೆ ಸಿದ್ಧತೆಗಳು ಶುರುವಾಗುತ್ತವೆ.

ಆದರೆ, ಮುಂದೆ, ಯುದ್ಧದ ಹೆಸರಿನಲ್ಲಿ ನಡೆಯುವ ರಕ್ತಪಾತವನ್ನು ತಡೆಗಟ್ಟಲೆಂದು, ಕೇವಲ ಭರತ-ಬಾಹುಬಲಿ - ಇವರುಗಳು ಮಾತ್ರ ಒಬ್ಬರೊಡನೊಬ್ಬರು ಕಾದಬೇಕೆಂದು ನಿಶ್ಚಯಿಸುತ್ತಾರೆ. ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ - ಈ ಮೂರರಲ್ಲೂ ಯಾರು ಗೆಲ್ಲುತ್ತಾರೋ ಅವರೇ ವಿಜೇತರೆಂಬ ಮಾತಿಗೆ ಒಪ್ಪುತ್ತಾರೆ.
ಧರ್ಮಯುದ್ಧ ಶುರುವಾಗುತ್ತದೆ. ದೃಷ್ಟಿಯುದ್ಧ, ಜಲಯುದ್ಧಗಳಲ್ಲಿ ಭರತನಿಗೆ ಸೋಲುಂಟಾಗುತ್ತದೆ. ಮಲ್ಲಯುದ್ಧದಲ್ಲಿಯೂ ಬಾಹುಬಲಿಯೇ ಮೇಲುಗೈ ಸಾಧಿಸುತ್ತಾನೆ.  ಒಂದು ಹಂತದಲ್ಲಿ ಬಾಹುಬಲಿಯು ಭರತನನ್ನು ಅನಾಮತ್ತಾಗಿ ಮೇಲಕ್ಕೆತ್ತಿ ಹಿಡಿದರೂ ನೆಲದ ಮೇಲಕ್ಕೆ ಅವನನ್ನು ಅಪ್ಪಳಿಸಿ ಎಸೆಯಲು ಮನಸ್ಸು ಬಾರದೇ ಅಣ್ಣನೆಂಬ ಗೌರವದಿಂದ ಭರತನನ್ನು ಮೆಲ್ಲಗೆ ನೆಲದ ಮೇಲಿಳಿಸುತ್ತಾನೆ. ಅಲ್ಲಿಗೆ ಮಲ್ಲಯುದ್ಧದಲ್ಲಿಯೂ ಬಾಹುಬಲಿಯೇ ಗೆಲ್ಲುತ್ತಾನೆ.

ತನಗೆ ಪರಾಭವವಾದ್ದರಿಂದ - ಅವಮಾನದಿಂದಲೂ ಕೋಪದಿಂದಲೂ ಕೂಡಿದ ಭರತನು ಬಾಹುಬಲಿಯೆಡೆಗೆ ಚಕ್ರವನ್ನು ಪ್ರಯೋಗಿಸುತ್ತಾನೆ. ಆದರೆ ಚಕ್ರವು ಬಾಹುಬಲಿಗೆ ಯಾವ ಹಾನಿಯನ್ನೂ ಮಾಡದೆ, ಅವನಿಗೆ ಪ್ರದಕ್ಷಿಣೆ ಬಂದು, ಅವನ ಬಲಪಕ್ಕದಲ್ಲಿ ಕಾಂತಿಹೀನವಾಗಿ ನಿಲ್ಲುತ್ತದೆ.
ಅಷ್ಟರಲ್ಲಿ ಬಾಹುಬಲಿಗೆ 'ರಾಜ್ಯಕ್ಕಾಗಿ ತನ್ನ ಅಣ್ಣನೊಡನೆಯೇ ತಾನು ಕಾದಿದೆನಲ್ಲ' ಎಂದು ನೆನೆದು ಬಹಳ ವೇದನೆಯಾಗುತ್ತದೆ. ಮೂರೂ ಯುದ್ಧಗಳಲ್ಲಿಯೂ ತಾನೇ ಗೆದ್ದಿದ್ದರೂ ತನ್ನ ರಾಜ್ಯವನ್ನು ಭರತನಿಗೇ ಒಪ್ಪಿಸಿ, ತಾನು ತಪಶ್ಚರ್ಯೆಯಲ್ಲಿ ತೊಡಗಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಅದನ್ನೇ ಭರತನಿಗೂ ವಿನಯದಿಂದ ತಿಳಿಸುತ್ತಾನೆ.
ಅಷ್ಟರಲ್ಲಾಗಲೇ ಭರತನಿಗೂ ತನ್ನ ತಪ್ಪಿನ ಅರಿವಾಗಿರುತ್ತದೆ. ಅವನು ಬಾಹುಬಲಿಯನ್ನು ತಪಸ್ಸಿಗೆ ಹೊರಡಬೇಡವೆಂದು ಪ್ರಾರ್ಥಿಸುತ್ತಾನೆ. ಆದರೆ ಬಾಹುಬಲಿಯ ನಿರ್ಧಾರ ದೃಢವಾಗಿರುತ್ತದೆ. ಅವು ಭರತನಿಗೆ ಹೇಳುತ್ತಾನೆ :-

"ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀಭಟಖಡ್ಗಮಂಡಲೋ
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ"
                                                                        - ಆದಿಪುರಾಣ ೧೪.೧೩೦

'ಅಣ್ಣವೀರಭಟರ ಖಡ್ಗಗಳೆಂಬ ಕಮಲವನದಲ್ಲಿ ವೈಭವದಿಂದ ವಿಹರಿಸುವ ದುಂಬಿಯಾದ ಈ ರಾಜ್ಯಲಕ್ಷ್ಮಿಯು ನಿನ್ನೆದೆಯಲ್ಲಿಯೇ ನಿತ್ಯವೂ ನೆಲೆಸಲಿ. ನಮ್ಮ ತಂದೆಯು ನನಗೆ ಕೊಟ್ಟ ಈ ಭೂಮಿಯನ್ನು ನಿನಗೇ ಕೊಡುತ್ತಿದ್ದೇನೆತೆಗೆದುಕೋ ಅಣ್ಣ. ನೀನು ಬಯಸಿದ ಹೆಣ್ಣಿಗೂ ಮಣ್ಣಿಗೂ ನಾನೂ ಆಶಿಸಿದೆನಾದರೆ ನನ್ನಯ ಕೀರ್ತಿ ಮಾಸದೇ.?'

"ನಾನು ನಿನ್ನ ವಿಷಯದಲ್ಲಿ ತೋರಿದ ಅವಿನಯ ಪ್ರಯುಕ್ತವಾದ ದೋಷವನ್ನು ಇನ್ನು ಮುಂದೆ ತಪಸ್ಸನ್ನಾಚರಿಸುವ ಮೂಲಕ ನಿವಾರಿಸಿಕೊಳ್ಳುತ್ತೇನೆ. ನನ್ನ ಬಗೆಗಿನ ಆಗ್ರಹವನ್ನು ತೊರೆಅಣ್ಣ. ನನ್ನ ದುಶ್ಚೇಷ್ಟೆಯನ್ನು ಕ್ಷಮಿಸು."

ಬಾಹುಬಲಿಯೆಂದಾಕ್ಷಣಎಷ್ಟೋ ಸಾರಿ ಈ "ನೆಲಸುಗೆ ನಿನ್ನ ವಕ್ಷದೊಳೆ...." ಪದ್ಯ ನೆನಪಾಗುತ್ತದೆ.






Saturday 12 September 2015

ಆಗಸವ ನೋಡುತ್ತ…

ಹೀಗೇ ಒಂದ್ಹತ್ತು ನಿಮಿಷಗಳಿಂದ ಆಕಾಶವನ್ನೇ ನೋಡುತ್ತ ಕುಳಿತಿದ್ದೆ. ತೆರೆಯ ಮೇಲಿನ ಚಿತ್ರಗಳಂತೆ ಮೋಡಗಳು ಒಂದರ ಹಿಂದೆ ಒಂದು ಸಾಗುತ್ತಿದ್ದವು. ಕೆಲವು ಅಪ್ಪಟ ಬಿಳಿಯವಾದರೆ ಕೆಲವು ಭಾಗಶಃ ಕಪ್ಪಿನ ಛಾಯೆಯವು…
ಆಗಸದ ಹಿನ್ನೆಲೆಯೂ ವರ್ಣರಂಜಿತವಾಗಿಯೇ ಇತ್ತು. ಸ್ವಲ್ಪ ಬಿಳಿ, ಸ್ವಲ್ಪ ನೀಲಿ, ಕಂಡೂ ಕಾಣದಂತೆ ತಿಳಿ ಹಳದಿಯ ಅಥವಾ ತಿಳಿ ಬಂಗಾರದ ಬಣ್ಣ. ಒಂದು ಕಡೆ ದಟ್ಟ ಕೆಂಪಿನ ಬಣ್ಣ.. ಅದರ ಆಚೀಚೆಗೆ ತಿಳಿ ಕೆಂಪು ಅಥವಾ ಗುಲಾಬಿ! ಅಂತೂ ಆ ವಿವಿಧ ವರ್ಣಗಳು ಹಿನ್ನೆಲೆಯಲ್ಲಿರಲು ಈ ಮೋಡಗಳ ಮೆರವಣಿಗೆ ಸಾಗಿತ್ತು.

ಇಲ್ಲಿ, ನನ್ನ ಮನಸೂ ಏನೇನೋ ಯೋಚಿಸುತ್ತಿತ್ತು. ಓಡುತ್ತಿರುವ ಈ ಮೋಡಗಳಂತೆಯೇ ನನ್ನ ಆಲೋಚನೆಗಳೂ ಕೂಡ ಮೂಡಿ ಮರೆಯಾಗುತ್ತ, ಕ್ಷಣಕ್ಷಣಕ್ಕೂ ಬೇರೆಬೇರೆಯಾಗಿ ತೋರಿದವು.

ಹಾಗೇ ಒಮ್ಮೆ ಆದಿಪುರಾಣದ ನೆನಪಾಯಿತು ನನಗೆ. ಅದರಲ್ಲೂ ಇಂಥದ್ದೇ ಒಂದು ಪ್ರಸಂಗ. ಜೈನ ಅರಸನೊಬ್ಬ ಆಗಸದಲ್ಲಿನ ಮೋಡಗಳನ್ನು ನೋಡುತ್ತಿರುವಾಗ ಅವನಿಗೆ ಗೋಪುರದ ರೂಪದಲ್ಲಿರುವ ಮೋಡವೊಂದು ಕಾಣಿಸುತ್ತದೆ. ಅದನ್ನು ಕಂಡ ಅವನ ಮನಸ್ಸು ಆನಂದದಿಂದ ನಲಿಯುತ್ತದೆ.
ಆಹಾ! ಈ ಸುಂದರ ಮೋಡದ ಚಿತ್ರವನ್ನಾದರೂ ರಚಿಸೋಣವೆಂದುಕೊಂಡು ಆತ ಚಿತ್ರ ಬಿಡಿಸುವ ಸಾಮಗ್ರಿಗಳನ್ನು ತರಲು ಆಳುಗಳಿಗೆ ಹೇಳುತ್ತಾನೆ. ಇನ್ನೇನು ಎಲ್ಲ ಸಾಮಗ್ರಿಗಳೂ ಸಿಕ್ಕು ಆತ ಆ ಮೋಡದ ಚಿತ್ರವನ್ನು ಬಿಡಿಸಲು ತೊಡಗಬೇಕು, ಆಗ ಅವನು ಆಗಸದ ಕಡೆಗೆ ನೋಡಿದರೆ ಅಲ್ಲಿ ಆ ಸುಂದರ ರೂಪದ ಮೋಡವೇ ಇಲ್ಲ!
ಅಷ್ಟರಲ್ಲಾಗಲೇ ಆ ಮೋಡದ ಹಿಂದಿನ ರೂಪವು ಹೋಗಿ ಅದು ಗುರುತು ಹಿಡಿಯಲೂ ಆಗದಂತಾಗಿರುತ್ತದೆ.

ಅಯ್ಯೊ, ಒಂದೆರಡು ಕ್ಷಣಗಳಲ್ಲೇ ಎಂತಹ ಬದಲಾವಣೆ. ಮನೋಹರವಾದ ಗೋಪುರವನ್ನು ಹೋಲುವ ಆ ಮೋಡದ ರೂಪ ಅದೆಷ್ಟು ಬೇಗ ಕರಗಿಹೋಯಿತು. ಎಷ್ಟು ಕ್ಷಣಿಕವದು! - ಅವನಿಗೆ ಈ ವಿಚಾರ ಬೋಧೆಯಾಗುತ್ತದೆ. ನರರ ಬಾಳೂ ಅಂತೆಯೇ ಅನಿತ್ಯವಾದದ್ದು ಎಂಬ ಸತ್ಯ ಅವನಿಗೆ ತೋರುತ್ತದೆ. ಮನಸಿನಲ್ಲಿ ವೈರಾಗ್ಯ ಬೇರೂರುತ್ತದೆ.
ತಕ್ಷಣವೇ ಅವನು ಲೌಕಿಕ ವಿಷಯಗಳ ಬಗ್ಗೆ ನಿರ್ಲಿಪ್ತನಾಗಲು ಬಯಸಿ, ತನ್ನ ಮಗುವಿಗೆ ರಾಜ್ಯದ ಪಟ್ಟ ಕಟ್ಟಿ ತಾನು ಜಿನದೀಕ್ಷೆಯನ್ನು ಪಡೆಯುತ್ತಾನೆ.

ಮಾಮೂಲಾಗಿ ಜೈನಪುರಾಣಗಳಲ್ಲಿ ಯಾರಾದರೂ ಅರಸನಲ್ಲಿ ವೈರಾಗ್ಯ ಮೂಡುವ ಪ್ರಸಂಗದ ವಿವರಣೆ - ಆತನಿಗೆ ತನ್ನ ಕೂದಲಿನಲ್ಲಿ ನೆರೆ ಕಂಡಾಗ ಅವನಿಗೆ ವೈರಾಗ್ಯವುದಿಸಿತು - ಎಂಬಂತಿರುತ್ತದೆ. ತೀರ ಇದೇ ಕಾರಣವು ಬಹುತೇಕ ಎಲ್ಲ ಕತೆಗಳಲ್ಲಿ ಬಂದಾಗ ಅದೊಂದು ರೀತಿಯ ಏಕತಾನತೆ ಎನಿಸುತ್ತದೆ. ಕತೆಯಲ್ಲಿ ಅಂಥ ಸ್ವಾರಸ್ಯವೂ ಇರೋಲ್ಲ.

ಅವುಗಳಿಗೆ ಹೋಲಿಸಿದರೆ ಈ ಮೋಡವನ್ನು ಕಂಡು ವೈರಾಗ್ಯವುದಿಸುವ ಪ್ರಸಂಗ ಸ್ವಲ್ಪ ಭಿನ್ನವಾಗಿಯೂ ಹೊಸದಾಗಿಯೂ ತೋರುತ್ತದೆ.

Wednesday 9 September 2015

"ಉದ್ಭಟಕಾವ್ಯ"ವೆಂಬ "ಶೃಂಗಾರಸಾರ"

ಎಷ್ಟೋ ಸಾರಿ ಹಾಗಾಗುವುದುಂಟು, ತೀರ ಅನಿರೀಕ್ಷಿತವಾಗಿ ಯಾವುದೋ ಅಪರೂಪದ ವಸ್ತುವೊಂದು ನಮ್ಮ ಕೈಗೆ ಸಿಕ್ಕುಬಿಡುತ್ತೆ. ಆ ನಂತರ ಅದೆಷ್ಟೋ ದಿನಗಳವರೆಗೂ ಅದರ ಬಗೆಗಿನ ಸೆಳೆತ... ಅದರ ಗುಂಗಿನಲ್ಲೇ ಕಾಲ ಕಳೆಯುವಂತಾಗುತ್ತದೆ. ಇತ್ತೀಚೆಗೆ ನನಗೂ ಹೀಗೆಯೇ ಆಯಿತು.
ಮೊನ್ನೆ ಒಮ್ಮೆ ರ‍್ಯಾಕಿನಲ್ಲಿದ್ದ ಪುಸ್ತಕಗಳನ್ನು ಜೋಡಿಸುತ್ತಿರುವಾಗ ಅವುಗಳಲ್ಲಿ ಒಂದು ಪುಸ್ತಕ ಕೆಳಗೆ ಬಿತ್ತು. ಕೆಳಮುಖವಾಗಿ ಬಿದ್ದಿದ್ದ ಪುಸ್ತಕವನ್ನೆತ್ತಿಕೊಂಡು, ಅರೆತೆರೆದಿದ್ದ ಅದರ ಪುಟವೊಂದನ್ನು ನೋಡಿದಾಗ ಕೆಲವು ಸೊಗಸಾದ ಪದ್ಯಗಳು ಕಂಡವು. ಆಗಷ್ಟೇ ಪುಸ್ತಕದ ಹೆಸರನ್ನು ನೋಡಿದ್ದು - "ಸೋಮರಾಜನ ಉದ್ಭಟಕಾವ್ಯ".!
ಕಳೆದ ವರ್ಷದ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಖರೀದಿಸಿದ್ದೆ ಇದನ್ನು. ಓದಲು ಮಾತ್ರ ಆವರೆಗೆ ಕಾಲ ಕೂಡಿಬಂದಿರಲಿಲ್ಲ. ಪುಸ್ತಕವನ್ನೇ ನೋಡುತ್ತ ನೋಡುತ್ತ - ಯಾರು ಈ ಸೋಮರಾಜ. ಈ ಉದ್ಭಟನಾರು ಎಂಬ ಕುತೂಹಲ ಮೂಡಿದ್ದರಿಂದ ಓದಲು ಶುರು ಮಾಡಿದೆ. ಆ ಕೃತಿಯ ಪರಿಚಯ ಈ ಲೇಖನದಲ್ಲಿ:

ಕವಿ, ಕಾಲ ವಿಚಾರ:
ಉದ್ಭಟಕಾವ್ಯವನ್ನು ರಚಿಸಿದವನು ಸೋಮರಾಜನೆಂಬ ವೀರಶೈವ* ಕವಿ. ಈತ ಬರಿಯ ಕವಿಯಾಗಿರದೆ ಅರಸನೂ ಆಗಿದ್ದಿರಬೇಕು. ಕೃತಿಯ ಆದಿಯಲ್ಲಿ ತನ್ನ ವಂಶದ ಬಗೆಗೆ ಹೇಳಿಕೊಳ್ಳುವಾಗ ಹಾಗೂ ಕೃತಿಯ ಹಲವು ಕಡೆಗಳಲ್ಲಿ ತನ್ನನ್ನು ಸೋಮರಾಜ, ಸೋಮನೃಪ, ಸೋಮಭೂಮೀಶ್ವರ‍, ಸೋಮರಾಜೇಂದ್ರ ಎಂದು ಕರೆದುಕೊಂಡಿದ್ದಾನೆ. 
ತನ್ನ ವಂಶದ ಹಿರಿಮೆಯನ್ನು ಕವಿ ಹೀಗೆ ಹೇಳಿಕೊಂಡಿದ್ದಾನೆ: "ಚಂದ್ರವಂಶದಲ್ಲಿ ಜನಿಸಿದ ತಿರುಮಲ ಮಹಾರಾಜನ ಮಗ ರಾಯಣ. ಈ ರಾಯಣಭೂಪನ ಮಗ ರಾಜಶ್ರೇಷ್ಠನಾದ ಚಂದ್ರಶೇಖರ ಎಂಬುವವನು. ಆ ಚಂದ್ರಶೇಖರ ರಾಜನ ಮಗನೇ ಸೋಮರಾಜ."
ಈ ಪ್ರವರದಲ್ಲಿ ಬರುವ ವಿವರದಿಂದ ಸೋಮರಾಜನು ಚಂದ್ರವಂಶಕ್ಕೆ ಸೇರಿದ ದೊರೆಯೆಂದು ತಿಳಿದುಬರುತ್ತದೆಯಾದರೂ
, ಇವನು ಹಾಗೂ ಇವನ ಪೂರ್ವಿಕರು ಯಾವ ಪ್ರಾಂತವನ್ನು ಆಳುತ್ತಿದ್ದರೆಂದು ತಿಳಿಯುವುದಿಲ್ಲ. ಆ ಬಗ್ಗೆ ಸೋಮರಾಜನು ಹೆಚ್ಚಿಗೆ ಏನನ್ನೂ ಹೇಳಿಕೊಂಡಿಲ್ಲ. ಆದರೂ ಕೃತಿಯಲ್ಲಿ ಕುಂತಳದೇಶವನ್ನೂ, ಪಂಪಾಕ್ಷೇತ್ರದ ಸೌಂದರ್ಯ, ಮಹಿಮೆಯನ್ನೂ ಕುರಿತು ಮನದುಂಬಿ, ಅತಿ ಪ್ರೀತಿ-ಹೆಮ್ಮೆಯಿಂದ ವರ್ಣಿಸಿರುವುದನ್ನು ನೋಡಿದರೆ ಬಹುಶಃ ತುಂಗಾನದಿಯ ಹತ್ತಿರದ್ದೇ ಯಾವುದಾದರೂ ಪ್ರಾಂತವನ್ನು ಸೋಮದೇವನ ವಂಶದವರು ಆಳುತ್ತಿದ್ದಿರಬೇಕೆಂದು ಊಹಿಸಬಹುದಾಗಿದೆ. ("ಈ ವಂಶದ ಅರಸರು ಎಲ್ಲಿ ರಾಜ್ಯವಾಳುತ್ತಿದ್ದರೋ ತಿಳಿಯದು. ಆದರೆ, ಪಶ್ಚಿಮ ತೀರದಲ್ಲಿ ಆಳುತ್ತಿದ್ದ ವೀರಶೈವ ಮತಾವಲಂಬಿಗಳಾದ ಚೌಟರಾಜರಲ್ಲಿ ತಿರುಮಲರಾಯ, ಚಂದ್ರಶೇಖರ ಎಂಬ ಹೆಸರುಗಳು ದೊರೆಯುತ್ತದೆ" ಎಂದು ಕವಿಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ).

ಇನ್ನು, ಕೃತಿಯ ಪೀಠಿಕೆಯಲ್ಲಿ ಸೋಮರಾಜ ತನ್ನ ಪೂರ್ವಸೂರಿಗಳ ಪೈಕಿ ಹರಿಹರನನ್ನೂ, ಕೆರೆಯ ಪದ್ಮರಸನನ್ನೂ ಪ್ರೀತಿಯಿಂದ ಸ್ಮರಿಸಿದ್ದಾನೆ. ಮೇಲಾಗಿ, ಈ ಕೃತಿಯ ಮೂಲ ಕಥೆಯನ್ನೂ ಹಾಗೂ ಕೃತಿಯ ನಡೆಗೆ ಹೊಂದುವಂತೆ ಸಾಂದರ್ಭಿಕವಾಗಿ ಬರುವ ಇತರೆ ಶಿವಶರಣರ ಕಥೆಗಳಿಗೂ ಕೂಡ ಹರಿಹರ ವಿರಚಿತ ರಗಳೆಗಳೇ ಮೂಲವಿರಬೇಕೆಂದು (ನನಗೆ) ತೋರುತ್ತದೆ. *ಹರಿಹರ ಹಾಗೂ ಅಲ್ಲಮಪ್ರಭುದೇವರ ಪ್ರಭಾವ ಈತನ ಮೇಲೆ ಬಹುವಾಗಿ ಇರುವುದನ್ನು ನೋಡಿದರೆ ಈತನೊಬ್ಬ ವೀರಶೈವ ಕವಿ/ ದೊರೆಯಾಗಿದ್ದಿರಬೇಕೆಂದು ಊಹಿಸಬಹುದು.

ಗುರುವಲ್ಲಮಾಂಕ ನಾಮಸ್ಮರಣಮನೊಂದೊಂದು ನೆವದೊಳ್ ಅಭಿನುತಿಗೈವೆಂ "ವರವಾಣಿ ಸೋಮಭೂಮೀಶ್ವರ, ಭಾಪುರೆ!" ಎಂದು ಸುಜನತತಿ ಕೀರ್ತಿಪಿನಂ. (ಗುರುವಾದ ಅಲ್ಲಮಾಂಕನ ನಾಮವನ್ನು ಸ್ಮರಿಸಿ, ಆಹಾ, ವಾಣಿಯ/ವಿದ್ಯಾಧಿದೇವತೆಯ ವರವನ್ನು ಪಡೆದ ಸೋಮರಾಜನೆ, ಭೇಷ್! ಎಂದು ವಿದ್ವಜ್ಜನ ಕೀರ್ತಿಸುವ ಹಾಗೆ ಈ ಕೃತಿಯನ್ನು ರಚಿಸುವೆನು)
ಸೋಮ ಕವಿ ಅಲ್ಲಮನನ್ನು ಗುರುಸ್ಥಾನದಲ್ಲಿಟ್ಟು ಸ್ಮರಿಸಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಮ ಪ್ರಭುವಿನ ಬಗೆಗೆ ಈತನಿಗೆ ಅಪಾರವಾದ ಭಕ್ತಿಯಿತ್ತೆಂಬುದು ಈತ ತನ್ನ ಕೃತಿಯನ್ನು ಅಲ್ಲಮನಿಗೇ ಅರ್ಪಿಸಿ ರಚಿಸಿರುವುದರಿಂದ ಸ್ಪಷ್ಟವಾಗುತ್ತದೆ. ಅದೂ ಅಲ್ಲದೆ ಪ್ರತಿ ಆಶ್ವಾಸದ ಕೊನೆಯ ಪದ್ಯದಲ್ಲಿಯೂ ಅಲ್ಲಮಪ್ರಿಯ ಲಿಂಗದೇವನನ್ನು ಸ್ಮರಿಸಿದ್ದಾನೆ.

ಒಟ್ಟಾರೆಯಾಗಿ, ಈ ಕೃತಿ ಹಾಗೂ ಸೋಮಕವಿಯ ಪಾಂಡಿತ್ಯವು ಪ್ರಶಂಸಾರ್ಹವಾಗಿದೆ. ಅವನ ನಂತರದ ಕೆಲವು ಕವಿಗಳಿಗೆ ಸೋಮರಾಜನ ಈ ಕೃತಿ ಸ್ಫೂರ್ತಿ ನೀಡಿದೆ (ಷಡಕ್ಷರಿ ಹಾಗೂ ವೃತ್ತವಿಲಾಸರ ಕೆಲವು ಪದ್ಯಗಳು ನೇರವಾಗಿ ಈತನ ಪದ್ಯಗಳನ್ನೇ ಅನುಸರಿಸಿದಂತಿವೆ). ಇನ್ನು, ಪೂರ್ವಕವಿಗಳ ಕಾವ್ಯಗಳ ಬಗೆಗೆ ಸೋಮರಾಜನಿಗಿದ್ದ ಆಳವಾದ ಜ್ಞಾನ ಈ ಕೃತಿಯ ಆದ್ಯಂತವಾಗಿ ಕಂಡುಬರುತ್ತದೆ.

ಕೃತಿಯ ಆದಿಯಲ್ಲಿ ತನ್ನ ಕಾವ್ಯದ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾನೆಯಾದರೂ ಕೃತಿಯ ಕೊನೆಯ ಆಶ್ವಾಸದಲ್ಲಿ ಸೋಮ ಕವಿ ವಿನಯದಿಂದ ಹೀಗೆ ಮನವಿ ಮಾಡಿಕೊಂಡಿದ್ದಾನೆ: "ನಾನೇನೂ ಕವಿಯೂ ಅಲ್ಲ, ಶಾಸ್ತ್ರಜ್ಞಾನಿಯೂ ಅಲ್ಲ, ಮಹಾವಾಗ್ಮಿಯೂ ಅಲ್ಲ. ಶಿವಭಕ್ತರ ಪಾದಕಮಲದ ರಜವೆಂಬ ಪವಿತ್ರ ವಿಭೂತಿಯನ್ನು ಧರಿಸಿ ಈ ಕೃತಿಯನ್ನು ನನಗೆ ತಿಳಿದ ಮಟ್ಟಿಗೆ ನಾನು ಹೇಳಿದ್ದೇನೆ/ರಚಿಸಿದ್ದೇನೆ. ವಿದ್ವಜ್ಜನರು ತಮ್ಮ ಕೋಪತಾಪಗಳನ್ನು ಬದಿಗಿಟ್ಟು ಸಂಪ್ರೀತಿಯಿಂದ ಇದನ್ನು ಆಲಿಸಬೇಕು".

ಕೃತಿಯ ಕೊನೆಯ ವೃತ್ತದಲ್ಲಿ

"ಜನನಾಥೋತ್ತಮ-ಸೋಮರಾಜನುಸಿರ್ದೀ ಕಾವ್ಯಂ ವಲಂ ಶಾಲೀವಾ
ಹನಶಾಕಾಬ್ದಮದೈದೆ ಸಾಸಿರದನೂರ್ಸಂದನಾಲ್ವತ್ತನಾ
ಲ್ಕನೆಯಾರಂಜಿತ ಚಿತ್ರಭಾನುವವರಾಶ್ವೀಜೋಚ್ಛಿತೈಕಾದಶೀ
ವನಜಾರಾತಿತನೂಜವಾಸರದೊಳಾದತ್ತಲ್ಲಮಂಗರ್ಪಿತಂ"

ಎಂದಿರುವುದರಿಂದ, ಈ ಕೃತಿಯು "ಜನನಾಥೋತ್ತಮನಾದ ಈ ಸೋಮರಾಜನು ಹೇಳಿದ ಈ ಕಾವ್ಯವು ಶಾಲೀವಾಹನ ಶಕೆ ೧೧೪೪ (ಕ್ರಿ. ಶ ೧೨೨೨)ರ, ಚಿತ್ರಭಾನು ಸಂವತ್ಸರದ ಆಶ್ವೀಜ ಮಾಸದ ಏಕಾದಶಿಯಂದು, (ಬುಧವಾರ?) ಸಮಾಪ್ತಿಯಾಯಿತು"
ಹಾಗಾಗಿ ಸೋಮರಾಜನ ಕಾಲವನ್ನು ೧೨ನೇ ಶತಮಾನದ ಉತ್ತರಾರ್ಧ - ೧೩ರ ಪೂರ್ವಾರ್ಧ ಎಂದು ಭಾವಿಸಬಹುದು.

ಕೃತಿಯ ಬಗ್ಗೆ:
ಮೂಲತಃ ಸೋಮರಾಜನು ಈ ಕೃತಿಯನ್ನು ಉದ್ಭಟಕಾವ್ಯವೆಂದು ಕರೆಯದೆ "ಶೃಂಗಾರಸಾರ"ವೆಂದೇ ಕರೆದಿದ್ದಾನೆ ("ಶೃಂಗಾರಸಾರಮೆಂದೀ ಮಂಗಳಕೃತಿ-ನಾಮಮೀ ಕೃತಿಗೆ ವಲ್ಲಭನುತ್ತುಂಗವಿರೂಪಾಕ್ಷಂ ಸುಧೆಯಂ ಗೆಲಲೀ ಕೃತಿಯನುಸುರಿದಂ ಸೋಮನೃಪಂ). ಅದಾಗಿಯೂ, ಕಥೆಯು ಉದ್ಭಟರಾಜನ ಕುರಿತಾಗಿ ಇರುವುದರಿಂದ ಕನ್ನಡ ಕಾವ್ಯಲೋಕದಲ್ಲಿ ಇದು ಉದ್ಭಟಕಾವ್ಯವೆಂದೇ ಪರಿಚಿತವಾಗಿದೆ.

ಹರಿಹರದೇವ ವಿರಚಿತ ಓಹಿಲಯ್ಯನ ರಗಳೆ ಹಾಗೂ ಉದ್ಭಟಯ್ಯನ ರಗಳೆ ಎಂಬೀ ರಗಳೆಗಳು ಈ ಕೃತಿಗೆ ಮೂಲವಿರಬೇಕೆನಿಸುತ್ತದೆ. ಏಕೆಂದರೆ ಓಹಿಲಯ್ಯ ಹಾಗೂ ಉದ್ಭಟರನ್ನು ಕುರಿತು (ಕನ್ನಡದಲ್ಲಿ) ಮೊದಲು ರಚಿಸಿದವನು ಹರಿಹರನೇ. ಹಾಗಲ್ಲದೆ ಬೇರೆ ಭಾಷೆಯ ಇನ್ನಾವುದಾದರೂ ಕೃತಿಯಿಂದಲೂ ಸ್ಫೂರ್ತಿ ಪಡೆದಿದ್ದಿರಬಹುದು.
ಏಕೆಂದರೆ, ಹರಿಹರನ ಉದ್ಭಟಯ್ಯನ ರಗಳೆ ತೀರ ಸಣ್ಣ ಕೃತಿ. ಅದರ ವಿಸ್ತಾರವಾದರೂ ಕೇವಲ ೨೦೪ ಸಾಲುಗಳಷ್ಟೇ. ಓಹಿಲಯ್ಯನ ರಗಳೆ ವಿಸ್ತಾರವಾಗಿಯೇ ಇದೆಯಾದರೂ, ಹರಿಹರನ ರಗಳೆಗೆ ಹೋಲಿಸಿದರೆ ಓಹಿಲೇಶ್ವರನ ಕಥೆ ಉದ್ಭಟಕಾವ್ಯದಲ್ಲಿ ಸ್ವಲ್ಪ ಭಿನ್ನವಾಗಿಯೇ ಇದೆ. ಇದಕ್ಕೆ ಕಾರಣ ಬೇರೆ ಕೃತಿಯ ಮೂಲವೋ ಅಥವಾ ಸೋಮರಾಜನ ಸ್ವಂತ ಸೃಷ್ಟಿಯೋ ತಿಳಿಯದು. ಇರಲಿ, ಮುಖ್ಯವಾಗಿ, ಹರಿಹರನ ರಗಳೆಯಲ್ಲಿ ಕೇವಲ ೨೦೪ ಸಾಲುಗಳ ವಿಸ್ತಾರವುಳ್ಳ ಉದ್ಭಟನ ಕಥೆಯನ್ನು ಸುಂದರವಾಗಿಯೂ ಸ್ವಾರಸ್ಯಕರವಾಗಿಯೂ ಇರುವ (೧೨ ಆಶ್ವಾಸಗಳನ್ನುಳ್ಳ) ಮಹಾಕಾವ್ಯವನ್ನಾಗಿ ಹೆಣೆದಿರುವ ಸೋಮರಾಜನ ಕಾವ್ಯಶಕ್ತಿಯನ್ನು ಮೆಚ್ಚಲೇಬೇಕು.
ಹೀಗೆ ಕಥೆಯ ವಿಸ್ತಾರವನ್ನು ಹೆಚ್ಚಿಸಲೋಸುಗ ಆತ ಹಲವಾರು ಉಪಾಖ್ಯಾನಗಳನ್ನೂ ಸೇರಿಸಿದ್ದಾನೆ. ಕಥೆಯ ಸ್ವಾರಸ್ಯಕ್ಕೆ ತಕ್ಕಂತೆ ಹೊಸಹೊಸ ಸನ್ನಿವೇಶಗಳನ್ನು ಸೃಷ್ಟಿಸಿದ್ದಾನೆ. ತನ್ನ ತಾಯ್ನಾಡ ಸೊಗಸನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿ ಹೊಗಳಲು ಅನುವಾಗುವಂತೆ, ಕಥಾಸಂದರ್ಭಕ್ಕೆ ಹೊಂದುವಂತೆ - ಘೂರ್ಜರ ದೇಶದ ದೊರೆಯಾದ ಉದ್ಭಟನನ್ನು ನಮ್ಮ ನೆಚ್ಚಿನ ಪಂಪಾಕ್ಷೇತ್ರಕ್ಕೆ ಕರೆತಂದಿದ್ದಾನೆ. ಒಟ್ಟಾರೆಯಾಗಿ, ಮಹಾಕಾವ್ಯದ ೧೮ ಲಕ್ಷಣಗಳೂ ಮೇಳೈಸುವಂತೆ ಈ ಕೃತಿಯನ್ನು ರಚಿಸಿದ್ದಾನೆ.

ಉದ್ಭಟಕಾವ್ಯದ ಮೇಲೆ ಬೇರೆ ಕೃತಿಗಳ ಪ್ರಭಾವ, ಕೃತಿಯ ವಿಶೇಷತೆ:
ಈ ಹಿಂದೆಯೇ ಹೇಳಿದಂತೆ ಹರಿಹರನ ರಗಳೆಗಳ ಪ್ರಭಾವ ಈ ಕೃತಿಯ ಮೇಲೆ ಗಾಢವಾಗಿದೆ. ಕೊನೆಯ ಎರಡು ಆಶ್ವಾಸಗಳಲ್ಲಿ ಬರುವ ಅನೇಕ ಶಿವಶರಣರ ಉಪಕತೆಗಳಿಗೆ ಹರಿಹರ ವಿರಚಿತ ರಗಳೆಗಳೇ ಆಧಾರವಾಗಿರಬೇಕು.
 ಅದಲ್ಲದೆ, ನನಗೆ ಕಂಡುಬಂದಂತೆ - ನಾಗವರ್ಮನ ಕರ್ಣಾಟಕ ಕಾದಂಬರಿಯ ಪ್ರಭಾವ ಸ್ವಲ್ಪಮಟ್ಟಿಗಾದರೂ ಈ ಕೃತಿಯ ಮೇಲಿದೆ. ಕಥೆಗೆ ಪೂರಕವಾಗಿ ಬರುವ ಶಾಪಗ್ರಸ್ತ ಋಷಿಕುವರನ - ಗಿಳಿಯ ಪಾತ್ರ - ಕರ್ಣಾಟಕ ಕಾದಂಬರಿಯನ್ನು ನೆನಪಿಗೆ ತಾರದೇ ಇರದು. ಇನ್ನು ಕಥಾನಾಯಕ-ನಾಯಕಿ ಉದ್ಭಟ-ಸೌಂದರವತಿಯರ ಪ್ರೇಮ-ವಿರಹಾತಿರೇಕಗಳು ಚಂದ್ರಾಪೀಡ-ಕಾದಂಬರಿಯರ ನವಿರಾದ ಪ್ರೇಮ ಸನ್ನಿವೇಶಗಳನ್ನು ನೆನಪಿಸುತ್ತವೆ.

ಕಥೆಯ ಹರಿವಿಗೆ ಪೂರಕವಾಗುವ ಸನ್ನಿವೇಶವೊಂದರಲ್ಲಿ ಸಾಂದರ್ಭಿಕವಾಗಿ ಪಂಚಕರ್ಮವೇ ಮುಂತಾದ ಕೆಲವು ತಾಂತ್ರಿಕ ಆಚರಣೆ-ವಿಧಿಗಳನ್ನು ವರ್ಣಿಸಿದ್ದಾನೆ. ಬಹುಶಃ ಇದು ಕವಿಯ ಸಮಕಾಲೀನವಾದ ಯಾವುದಾದರೂ ಪಂಥದ ಆಚರಣೆಗಳಾಗಿದ್ದಿರಬಹುದು. ಹಾಗೆಯೇ ಸೌಂದರವತಿ-ಉದ್ಭಟದೇವರ ಮದುವೆಯ ಸಂದರ್ಭದಲ್ಲಿ, ಮದುವೆಯಾದ ನಾಲ್ಕನೇ ದಿನ ಕೊಡುವ ನಾಕಬಲಿ, ಕಂಬವಲಿ ಮುಂತಾದ ಬಲಿಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಬಹುಶಃ ಈ ಪದ್ಧತಿಯೂ ಆಗ ಆಚರಣೆಯಲ್ಲಿತ್ತೊ ತಿಳಿಯದು. ಇಂಥವೇ ಹಲವು ಉಲ್ಲೇಖಗಳು ವಿಶೇಷವಾಗಿ ತೋರಿ ನನ್ನ ಗಮನ ಸೆಳೆದವು.

ಇನ್ನು ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ - ಶೃಂಗಾರಸಾರವೆಂಬ ಈ ಉದ್ಭಟಕಾವ್ಯವು ೧೨ ಆಶ್ವಾಸಗಳನ್ನುಳ್ಳ ಒಂದು ಚಂಪೂಕೃತಿ. ಹಿಂದಿನ ಕವಿಗಳಂತೆ ಅತಿಯಾಗಿ ಸಂಸ್ಕೃತಭೂಯಿಷ್ಠವಾಗಿರದ, ಸರಳವಾಗಿಯೂ ಸುಂದರವಾಗಿಯೂ ಇರುವ ವೃತ್ತ-ಕಂದಪದ್ಯಗಳು ಓದಲು ಸೊಗಸೆನಿಸುವವು. ಕನ್ನಡ ಜಾತಿಗೆ ಸೇರಿದ ಹಲವಾರು ವೃತ್ತಗಳಿರುವುದೂ ವಿಶೇಷವೇ. ಸ್ತುತಿ-ಗೀತೆಗಳ ಸಂದರ್ಭದಲ್ಲಿಯಾದರೆ ಮಂದಾನಿಲ, ಲಲಿತ ರಗಳೆಗಳನ್ನು ವಿಪುಲವಾಗಿಯೇ ಬಳಸಿದ್ದಾನೆ ಕವಿ. ಇಂತಹ ಸನ್ನಿವೇಶಗಳಲ್ಲಿ ರಗಳೆಗಳ ಬಳಕೆ ಸಾಮಾನ್ಯವೇ. ಆದರೆ, ಮುಖ್ಯವಾಗಿ ನನ್ನ ಗಮನ ಸೆಳೆದದ್ದು ತ್ರಿಪದಿಗಳು. ವಿಹಾರಕ್ಕೆಂದು ಹೊರಟ ಉದ್ಭಟದೇವನು ವೇಶ್ಯಾವೀಧಿಯ ಕಡೆಯಿಂದ ನಡೆದುಬರುವಾಗಿನ ವರ್ಣನೆಯ ಪಾತ್ರವನ್ನು ಒಂದಷ್ಟು ತ್ರಿಪದಿಗಳು ವಹಿಸಿವೆ. ಇದು ನನಗೆ ಹೊಸತೆನಿಸಿತು.

ಕಥಾಸಾರ:
ಮೇರುಪರ್ವತದ ದಕ್ಷಿಣ ದಿಶೆಯಲ್ಲಿರುವ ಘೂರ್ಜರದೇಶದ ಭಲ್ಲಕೀನಗರದ ಅರಸು ಉದ್ಭಟದೇವ. ಒಂದು ದಿನ ಈತನನ್ನು ಕಾಣಲು ಋಷಿಕುಮಾರನೊಬ್ಬ ಬರುತ್ತಾನೆ. ಆತ ಉದ್ಭಟನನ್ನು - ತನ್ನ ಗುರುಗಳಾದ ದೇವಲ ಮಹರ್ಷಿಗಳು ನಡೆಸುತ್ತಿರುವ ಯಾಗಕ್ಕೆ ತೊಂದರೆ ಕೊಡುತ್ತಿರುವ ನಿಘರ್ಜನೆಂಬ ಅಸುರನನ್ನು ಸಂಹರಿಸಿ, ಯಾಗವನ್ನು ನಿರ್ವಿಘ್ನವಾಗಿ ನೆರವೇರುವಂತೆ ಮಾಡಲು - ಯಾಗದ ರಕ್ಷಣೆಗಾಗಿ - ಪಂಪಾಕ್ಷೇತ್ರಕ್ಕೆ ಬರಬೇಕೆಂದು ಬಿನ್ನವಿಸುತ್ತಾನೆ. ಅದಕ್ಕೆ ಸಮ್ಮತಿಸಿದ ಉದ್ಭಟನು ಪಂಪಾಕ್ಷೇತ್ರಕ್ಕೆ ಬಂದು ನಿಘರ್ಜನನ್ನು ಕೊಂದು, ದೇವಲ ಮಹರ್ಷಿಗಳು ಸಂಕಲ್ಪಿಸಿದ ಯಜ್ಞ ನಿರ್ವಿಘ್ನವಾಗಿ ನೆರವೇರುವಂತೆ ಮಾಡುತ್ತಾನೆ.

ಹಾಗಿರಲು ಒಂದು ದಿನ ಬೇಟೆಗಾರನೊಬ್ಬನ ಬಲೆಯಲ್ಲಿ ಸಿಲುಕಿ ಸಾಯಲಿದ್ದ ಗಿಳಿಯೊಂದನ್ನು ಉದ್ಭಟನು ರಕ್ಷಿಸುತ್ತಾನೆ. ಆ ಗಿಳಿಯಾದರೊ ಮನುಷ್ಯರಂತೆಯೇ ಮಾತನಾಡಬಲ್ಲ ಗಿಳಿಯಾಗಿತ್ತು. ಅದರ ಪೂರ್ವಾಪರಗಳ ಬಗ್ಗೆ ಉದ್ಭಟನು ವಿಚಾರಿಸಿದಾಗ ಗಿಣಿಯು - ತನ್ನ ಹೆಸರು ಶುಕನೆಂದೂ, ತಾನು ಚಿದಂಗ ಮುನಿಯ ಶಿಷ್ಯನೆಂದೂ, ತನ್ನ ಗುರುಭಕ್ತಿಯಲ್ಲಿ ಲೋಪವಾಗಿದ್ದರಿಂದ ’ಗಿಳಿಯಾಗು...’ ಎಂದು ತನ್ನ ಗುರುವು ಶಾಪವಿತ್ತುದಾಗಿಯೂ ತನ್ನ ಕತೆಯನ್ನು ವಿವರಿಸಿತು.
ಶಾಪವಿಮೋಚನೆಯ ಬಗೆ ಹೇಗೆಂದು ಉದ್ಭಟನು ಕೇಳಿದಾಗ - "ಪಾರ್ವತೀ ದೇವಿಯ ವರಪ್ರಸಾದದಿಂದ ಜನಿಸಿದ ಕನ್ಯೆಯು ಅನಿರೀಕ್ಷಿತವಾಗಿ ನಿನ್ನನ್ನು ಮುಟ್ಟಿದಾಗ ಗಿಳಿರೂಪದಲ್ಲಿದ್ದರೂ ನಿನಗೆ ವಾಕ್ಛಕ್ತಿ ಉಂಟಾಗುತ್ತದೆಯೆಂದೂ, ಅದೇ ಕನ್ಯೆಯ ವಿವಾಹದ ನಾಲ್ಕನೆಯ ದಿನದ ಓಕುಳಿಯಾಟದಲ್ಲಿ ನೀನು ಒದ್ದೆಯಾದ ಒಡನೆಯೇ ನಿನಗೆ ಶಾಪವಿಮೋಚನೆಯಾಗುವುದು" ಎಂದೂ ತನ್ನ ಗುರುಗಳು ಉಃಶಾಪವನ್ನು ಸೂಚಿಸಿದ್ದಾರೆಂದು ಗಿಳಿಯು ಹೇಳುತ್ತದೆ.

ತಂಜಾವೂರಿನಲ್ಲಿ ಪಾರ್ವತಿ ದೇವಿಯ ವರಪ್ರಸಾದದಿಂದ ಜನಿಸಿದ - ಸೌಂದರವತಿಯೆಂಬ - ಒಬ್ಬ ಕನ್ಯೆಯಿರುವಳೆಂದೂ, ಹಿಂದೆ ಒಂದು ದಿನ ಆಕೆಯ ಸ್ಪರ್ಶದಿಂದಲೇ ಗಿಳಿಯ ರೂಪದಲ್ಲಿದ್ದ ತನಗೆ ವಾಕ್ಚಾತುರ್ಯ ಶಕ್ತಿಯುಂಟಾಯಿತೆಂದೂ ಗಿಳಿಯು ಹೇಳುತ್ತದೆ. ಅದೂ ಅಲ್ಲದೆ, ಅನುಪಮ ಸೌಂದರ್ಯವುಳ್ಳ ಆ ಸೌಂದರವತಿಗೆ ಉದ್ಭಟನೇ ಸೂಕ್ತ ವರನೆಂದೂ, ಅವನ ಸಮ್ಮತಿಯಿರುವುದಾದರೆ ಅವರಿಬ್ಬರ ವಿವಾಹವನ್ನು ತಾನು ನೆರವೇರುವಂತೆ ಮಾಡುವುದಾಗಿ ಗಿಳಿಯು ತಿಳಿಸುತ್ತದೆ. ಉದ್ಭಟನು ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ಮುಂದೆ ಉದ್ಭಟ-ಸೌಂದರವತಿಯರ ವಿವಾಹವಾಗುತ್ತದೆ. ಅವರ ಮದುವೆಯಾದ ನಾಲ್ಕನೆಯ ದಿನ ನಡೆದ ಓಕುಳಿಯಾಟದ ನೀರು ತನ್ನ ಮೈಮೇಲೆ ಬೀಳಲು, ಶುಕನು ಮುಂಚಿನ ರೂಪವನ್ನು ಪಡೆದು, ಎಲ್ಲರನ್ನೂ ಹರಸಿ ತನ್ನ ಗುರುವಿನ ಬಳಿಗೆ ಹೊರಡುತ್ತಾನೆ. ಉದ್ಭಟ-ಸೌಂದರವತಿಯರು ಭಲ್ಲಕೀನಗರಕ್ಕೆ ಬರುತ್ತಾರೆ.
(ಮುಂದಿನ ಕೆಲವು ಆಶ್ವಾಸಗಳಲ್ಲಿ ಕತೆಯ ಹರಿವು ಕೃತಿಯ ಹೆಸರಿಗೆ ತಕ್ಕಂತೆ ಶೃಂಗಾರಸಾರವಾಗಿಯೇ ತೋರುತ್ತದೆ)

ಒಂದು ದಿನ ಉದ್ಭಟ-ಸೌಂದರವತಿಯರು ಪಗಡೆಯಾಡುತ್ತಿದ್ದಾಗ ಉದ್ಭಟನು ಏನನ್ನೋ ನೆನೆದು ನಗುತ್ತಾನೆ. ಆ ನಗುವಿಗೆ ಕಾರಣವೇನೆಂದು ತೋಚದೆ ಸೌಂದರವತಿಗೆ ಉದ್ಭಟದೇವನ ನಗುವಿನ ಹಿಂದಿರುವ ಕಾರಣವನ್ನು ತಿಳಿಯಬೇಕೆಂಬ ಕುತೂಹಲವೂ, ಸ್ವಲ್ಪಮಟ್ಟಿಗೆ ಕೋಪವೂ ಉಂಟಾಗುತ್ತದೆ. ತನ್ನ ಗಂಡ ತನ್ನನ್ನು ನೋಡಿಯೇ ನಗುತ್ತಿದ್ದಾನೆ ಎಂಬ ಶಂಕೆ ಆಕೆಯದು. ಅದಕ್ಕೇ ಮುನಿಸು.
ತಾನು ಸೌಂದರವತಿಯನ್ನು ನೋಡಿ ನಕ್ಕುದಲ್ಲವೆಂದು ಉದ್ಭಟ ತಿಳಿಸುತ್ತಾನೆ. ಹಾಗಿದ್ದರೆ ಆ ನಗುವಿಗೆ ಕಾರಣವೇನೆಂದರೆ - ಶಿವಶರಣ ಓಹಿಲೇಶ್ವರನು ಆ ಸದಾಶಿವನನ್ನು ಮೆಚ್ಚಿಸಿ ತಾನೊಬ್ಬನೇ ಸದೇಹವಾಗಿ ಕೈಲಾಸಕ್ಕೆ ಹೋಗುತ್ತಿದ್ದಾನೆಂದೂ, ಅಂತಹ ಶಿವಭಕ್ತನ ಮರುಳನ್ನು ನೆನೆದು ತಾನು ನಕ್ಕುದಾಗಿಯೂ ಉದ್ಭಟನು ತಿಳಿಸುತ್ತಾನೆ (ಸೌಂದರವತಿಗೆ ಓಹಿಲೇಶ್ವರನ ಕತೆಯನ್ನು ವಿಸ್ತಾರವಾಗಿ ಹೇಳಿದ ನಂತರ). ಓಹಿಲೇಶನ ಕತೆಯನ್ನು ಕೇಳಿ ಸೌಂದರವತಿಗೆ ಅಪಾರವಾದ ಭಕ್ತಿ-ಗೌರವಗಳು ಉಂಟಾಗುತ್ತವೆ. ಹಾಗೆಯೇ, ಅಂತಹ ಶಿವಭಕ್ತನನ್ನು ಕುರಿತು ಅಪಹಾಸ್ಯ ಮಾಡುತ್ತಿರುವರಲ್ಲಾ ಎಂದು ಉದ್ಭಟನ ಮೇಲೆ ಸಿಟ್ಟಾಗುತ್ತಾಳೆ. ಅಂತಹ ಮಹಾವ್ಯಕ್ತಿಯನ್ನು ಕುರಿತು ಅವಹೇಳನ ಮಾಡುವ ನೈತಿಕತೆಯಾದರೂ ನಿಮಗಿದೆಯೇ ಎಂದು ಪ್ರಶ್ನಿಸುತ್ತಾಳೆ. ಮುಂಚೆ ಯಾವೊಬ್ಬ ಶಿವಭಕ್ತನಾದರೂ ಹಾಗೆ ಕೈಲಾಸಕ್ಕೆ ಸಂದಿದ್ದಾರೆಯೇ? ಅಂತಹ ಒಬ್ಬನ ಬಗ್ಗೆಯಾದರೂ ನಿಮಗೆ ಗೊತ್ತಿದ್ದರೆ ಹೇಳಿ ಎಂದೂ ಕೇಳುತ್ತಾಳೆ.

ಅದಕ್ಕೆ ಉದ್ಭಟನು ಮುನ್ನ ಶಿವನನ್ನು ಮೆಚ್ಚಿಸಿ ಸಕಲ ಬಾಂಧವರೊಡನೆ, ರಾಜ್ಯದ ಪ್ರಜೆಗಳೊಡನೆ ಸದೇಹವಾಗಿ ಕೈಲಾಸಕ್ಕೆ ಹೋದ ಹಲವಾರು ಶಿವಶರಣರ ಕತೆಗಳನ್ನು ಹೇಳುತ್ತಾನೆ. ಅಂತಹ ಮಹನೀಯರ ನಿದರ್ಶನಗಳಿರುವಾಗ  ಈ ಓಹಿಲೇಶನಾದರೋ ತಾನೊಬ್ಬನೇ ಕೈಲಾಸಕ್ಕೆ ಹೋಗುತ್ತಿದ್ದಾನಲ್ಲಾ ಎಂದು ನೆನಪಾಗಿ ತಾನು ನಕ್ಕುದಾಗಿ ಹೇಳುತ್ತಾನೆ. ಆ ಶರಣರ ಕಥೆಗಳನ್ನೆಲ್ಲ ಕೇಳಿದ ಸೌಂದರವತಿಯ ಹೃದಯ ಭಕ್ತಿಯಿಂದ ತುಂಬುತ್ತದೆ.

ಆದರೂ, "ಅಂತಹ ಮಹಾಭಕ್ತರನ್ನು ಗೇಲಿಮಾಡುವ ಅರ್ಹತೆ ನಿಮಗೇನಿದೆ. ಸದಾ ಸಪ್ತವ್ಯಸನಗಳಲ್ಲಿ ಮುಳುಗಿರುವ ನೀವೆಲ್ಲಿ, ಅವರೆಲ್ಲಿ..? ನೀವೇನಾದರೂ ಅಂತಹ ಮಹತ್ತರ ಕಾರ್ಯ ಮಾಡಲು ಸಮರ್ಥರೇ, ಇಲ್ಲ ತಾನೆ? ಹಾಗಿದ್ದರೆ ಸುಮ್ಮನಿರಿ.." ಎಂದು ಮುಂತಾಗಿ ಉದ್ಭಟದೇವನನ್ನು ಮೂದಲಿಸುತ್ತಾಳೆ. ಅವಳ ಮಾತಿಗೆ ಪ್ರತಿಯಾಗಿ ಉದ್ಭಟನು "ಹಾಗಿದ್ದರೆ ನನ್ನೊಡನೆ ಈಗ ಶಿವಾಲಯಕ್ಕೆ ಬಾ. ನಾನು ಇಂದು ನಮ್ಮ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಹೋಗುವುದನ್ನು ನೀನೂ ನೋಡುವಿಯಂತೆ.." ಎಂದು ನುಡಿದು, ಅವಳನ್ನು ಕರೆದುಕೊಂಡು ಶಿವಾಲಯಕ್ಕೆ ಬರುತ್ತಾನೆ.

ಶಿವಾಲಯವನ್ನು ಹೊಕ್ಕು ಶಿವನನ್ನು ಹೊಸಹೊಸ ಪದ್ಯಗಳಿಂದ ಸ್ತುತಿಸಲು ಶುರು ಮಾಡುತ್ತಾನೆ. ಹಾಗೆ ಅವನು ಒಂದೊಂದು ಪದ್ಯಗಳಿಂದ ಸ್ತುತಿಸಿದಾಗಲೂ ಇಡೀ ನಗರವು ಸಾವಿರ ಯೋಜನದಷ್ಟು ಮೇಲೇರುತ್ತ ಸಾಗಿತು. ಹೀಗೇ ಮೇಲುಮೇಲಕ್ಕೆ ಸಾಗುತ್ತಿರಲು ಸೂರ್ಯನ ಪ್ರಭೆಯು ಕಡಿಮೆಯಾಯಿತು (ಆ ನಗರವು ಸೂರ್ಯನನ್ನೂ ದಾಟಿ ಮುಂದೆ ಹೋಗಿದ್ದರಿಂದ). ಆದರೆ, ಸೂರ್ಯಬಿಂಬವು ಕಣ್ಮರೆಯಾದುದನ್ನು ಕಂಡ ಸೌಂದರವತಿಯು ವಿನೋದದಿಂದ "ಇನ್ನು ಮೇಲೇಳು, ಮನೆಗೆ ಹೋಗೋಣ, ಕತ್ತಲಾಯಿತು" ಎಂದಾಗ, ಉದ್ಭಟನು ಭಕ್ತರ ಮಾತಿನಲ್ಲಿ ಹುಸಿಯುಂಟೆ, ಪ್ರಿಯೆ, ಕಣ್ತೆರೆದು ಮೇಲೆ ನೋಡು ಎಂದು ತೋರಿಸಿದಾಗ ಕೋಟಿ ನಕ್ಷತ್ರಗಳನ್ನು ರಾಶಿಹಾಕಿದಂತೆ ಅತಿಶಯವಾದ ಕಾಂತಿಯನ್ನು ಹರಡುತ್ತ ನಯನಮನೋಹರವಾಗಿದ್ದ ಕೈಲಾಸ ಪರ್ವತವು ಕಂಡಿತು.

ಕೊನೆಗೂ ಉದ್ಭಟನು ತನ್ನ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಬಂದಿದ್ದನು. ಆ ನಂತರದಲ್ಲಿ ಶಿವನ ಗಣಸಮೂಹವು ಇವರನ್ನು ಇದಿರ್ಗೊಂಡು ಸ್ವಾಗತಿಸಿ ಶಿವನ ಬಳಿಗೆ ಕರೆದುಕೊಂಡು ಹೋದರು. ಶಿವನು ಅವರೆಲ್ಲರನ್ನೂ ಆಶೀರ್ವದಿಸಿ ಉದ್ಭಟನಿಗೆ ಗಣಪದವಿಯನ್ನು ಅನುಗ್ರಹಿಸಿದನು.