Tuesday 17 September 2013

ಚಂದ್ರಹಾಸ ಉಪಾಖ್ಯಾನ - ಭಾಗ 2

ಆ ಪಾತಕಿಗಳು ಮಗುವನ್ನು ಹುಡುಕಿಅದನ್ನು ಕೊಲ್ಲಲೆಂದು ನಗರದಾಚೆಗಿನ ಕಾಡಿಗೆ ಕೊಂಡೊಯ್ಯುತ್ತಾರೆ. ಹಾಗೆ ಅವರು ಕೊಂಡೊಯ್ಯುವಾಗ ಮಗುವು ಅವರ ಭೀಕರ ರೂಪಕ್ಕೆ ಹೆದರಿಹರಿಯ ನಾಮಸ್ಮರಣೆ ಮಾಡುತ್ತಾ ಜೋರಾಗಿ ಅಳಲು ಶುರುಮಾಡುತ್ತದೆ.
ಮಗುವಿನ ಈ ಆಕ್ರಂದವನ್ನೂಅದರ ಮುಗ್ಧ ಮುಖವನ್ನೂ ನೋಡಿದ ಆ ಕಟುಕರ ಎದೆಯೂ ಕರಗುತ್ತದೆ. "ಅರೆಇಂತಹ ಮುದ್ದಾದ ಮಗುವನ್ನು ಕೊಲ್ಲಲು ತಿಳಿಸಿದ್ದಾನಲ್ಲ ನಮ್ಮ ಮಂತ್ರಿ! ಈ ಸಣ್ಣ ಮಗುವಿನಿಂದ ಆತನಿಗೆ ಆಗುವ ಹಾನಿಯಾದರೂ ಏನುಇದನ್ನು ಕೊಲ್ಲಲಂತೂ ನಮಗೆ ಮನಸ್ಸಾಗುತ್ತಿಲ್ಲ.. ಈಗ ಏನು ಮಾಡುವುದು!!" ಎಂದು ಯೋಚಿಸುತ್ತಿರುವಾಗ ಮಗುವಿನ ಎಡಗಾಲಿನಲ್ಲಿದ್ದ ಆರನೆಯ ಬೆರಳು ಅವರ ಕಣ್ಣಿಗೆ ಬೀಳುತ್ತದೆ.
ಮಗುವನ್ನು ಕೊಲ್ಲುವುದು ಬೇಡ. ಅದರ ಎಡಗಾಲಿನ ಬೆರಳನ್ನು ಕತ್ತರಿಸಿಕೊಂಡು ಇವನನ್ನು ಇಲ್ಲಿಯೇ ಬಿಟ್ಟುಬಿಡೋಣ. ಮಗುವನ್ನು ಕೊಂದದಕ್ಕೆ ಕುರುಹಾಗಿ ನಮ್ಮ ಮಂತ್ರಿಗೆ ಆ ಬೆರಳನ್ನು ತೋರಿಸಿದರೆ ಸಾಕು ಎಂದು ತೀರ್ಮಾನಿಸಿ ಮಗುವಿನ ಬೆರಳನ್ನು ಕತ್ತರಿಸಿಕೊಂಡು ಮಗುವನ್ನು ಅಲ್ಲಿಯೇ ಬಿಟ್ಟು ಅವರು ಹೊರಟುಹೋಗುತ್ತಾರೆ.
ಭಯದಿಂದಲೂನೋವಿನಿಂದಲೂ ಆಳುತ್ತಿರುವ ಮಗುವಿನ ದೀನ ಸ್ಥಿತಿಯನ್ನು ಕಂಡು ಕಾಡಿನ ಪಶು-ಪಕ್ಷಿಗಳೂ ಮರುಗುತ್ತವೆ. ಅವು ಆ ಬಾಲಕನ ಶುಶ್ರೂಷೆಗೆ ತೊಡಗುತ್ತವೆ :
ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ
ಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ
ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡುಶೋಕದಿಂದ
ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ
ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್
ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ  (28.35)

ಮಗುವಿನ ಕಷ್ಟವನ್ನು ಕಂಡು ಮೃಗ-ಪಕ್ಷಿಗಳೇ ಅದನ್ನು ಉಪಚರಿಸುತ್ತಿದ್ದವು ಎಂದಮೇಲೆ ಅನ್ಯರ ಕಷ್ಟವನ್ನು ನೋಡಿ ಮರುಗದ ಮಾನವನೇ ಪಾಪಿಯಲ್ಲವೇ!

ಆ ಕಾಡಿಗೆ ಚಂದನಾವತಿ ರಾಜ್ಯದ ದೊರೆ ಕುಳಿಂದಕ ಎಂಬುವವನು ಬೇಟೆಗೆಂದು ಬಂದಿರುತ್ತಾನೆ. ಆತನಿಗೆ ಈ ಮಗುವಿನ ಆಕ್ರಂದನ ಕೇಳಿಸುತ್ತದೆ.
ತನ್ನ ಕಷ್ಟಕಾಲದಲ್ಲಿ ತಂದೆ-ತಾಯಿಒಡಹುಟ್ಟಿದವರನ್ನು ನೆನೆಯದೆ ಹರಿಯನ್ನೇ ನೆನೆದು ಆಳುತ್ತಿದ್ದ ಮಗುವನ್ನು ಕಂಡು ರಾಜನು ಅಶ್ಚರ್ಯಚಕಿತನಾಗುತ್ತಾನೆ. ಪುತ್ರಭಾಗ್ಯವಿಲ್ಲದ ತನಗೆ ಹರಿಯ ಕೃಪೆಯಿಂದಲೇ ಈ ಮಗುವು ದೊರೆಯಿತುಇದನ್ನು ದತ್ತು ಸ್ವೀಕರಿಸಿ ಸ್ವಂತ ಮಗನಂತೆ ಸಾಕುವೆನೆಂದು ಯೋಚಿಸಿ ಕುಳಿಂದಕನು ಆ ಮಗುವನ್ನು ತನ್ನೊಂದಿಗೆ ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾನೆ.
ಕುಳಿಂದಕನು ಮಗುವನ್ನು ಉತ್ಸವದೊಂದಿಗೆ ತನ್ನ ರಾಜ್ಯಕ್ಕೆ ಕೊಂಡೊಯ್ದು  ಅದಕ್ಕೆ ಶಾಸ್ತ್ರೋಕ್ತವಾಗಿ ನಾಮಕರಣಾದಿ ಜಾತಕರ್ಮಗಳನ್ನು ನೆರವೇರಿಸುತ್ತಾನೆ.
ಚಂದ್ರನಂತೆ ನಿರ್ಮಲ ಕಾಂತಿಮಯವಾದ ಮುಖವೂಬೆಳದಿಂಗಳಿನಂತಹ ಮುಗುಳ್ನಗುವನ್ನೂ ಹೊಂದಿದ ಆ ಬಾಲಕನಿಗೆ 'ಚಂದ್ರಹಾಸಎಂದು ನಾಮಕರಣ ಮಾಡುತ್ತಾರೆಚಂದ್ರಹಾಸನ ಪ್ರಭಾವದಿಂದಲೋ ಎಂಬಂತೆ ಅವನು ಅಲ್ಲಿಗೆ ಬಂದಾಗಿನಿಂದ ರಾಜ್ಯವು ಹಿಂದೆಂದಿಗಿಂತ ಸುಭಿಕ್ಷವಾಗುತ್ತದೆ.

ಇವೆಲ್ಲ ಮಹಿಮೆಗಳ ನಡುವೆಯೇ ಚಂದ್ರಹಾಸನು ಹರಿಭಕ್ತಿಪಾರಂಗತನಾಗಿ ಬೆಳೆಯುತ್ತಾನೆ. ಎಲ್ಲ ಶಾಸ್ತ್ರಗಳನ್ನು ಅಭ್ಯಸಿಸಿ ಸಕಲ ಕಲೆಗಳಲ್ಲೂ ಪ್ರಾವೀಣ್ಯ ಹೊಂದುತ್ತಾನೆ.
ಇಂತಿರಲುಚಂದ್ರಹಾಸನಿಗೆ ಹದಿನಾರನೇ ವಯಸ್ಸು ತುಂಬುವ ವೇಳೆಗೆ ಕುಳಿಂದಕನು ಚಂದ್ರಹಾಸನಿಗೆ ರಾಜ್ಯದ ಪಟ್ಟವನ್ನು ಕಟ್ಟುತ್ತಾನೆ. ತಮ್ಮ ರಾಜ್ಯದ ಮೇಲೇರಿ ಬಂದ ಶತ್ರುರಾಜರನ್ನು ಸೋಲಿಸಿ ಚಂದ್ರಹಾಸನು ರಾಜ್ಯವಿಸ್ತರಣೆಯನ್ನು ಗೈದು ದಿಗ್ವಿಜಯವನ್ನಾಚರಿಸುತ್ತಾನೆ. ಹೀಗೆ ಚಂದನಾವತಿಯ ಐಶ್ವರ್ಯವೂ ವೃದ್ಧಿಯಾಗುತ್ತದೆ.

ಹೀಗಿರಲು ಒಂದು ದಿನ ಕುಳಿಂದಕನು ಚಂದ್ರಹಾಸನಿಗೆ "ಈ ರಾಜ್ಯವು ಕುಂತಳನಗರದ ಅರಸನ ಆಧಿಪತ್ಯಕ್ಕೆ ಒಳಪಟ್ಟಿದೆ. ಸಾಮಂತರಾದ ನಾವು ಅವರಿಗೆ ಸಿದ್ಧಾಯವನ್ನು ಕಳುಹಿಸಬೇಕಾಗಿದೆ. ಶೀಘ್ರವೇ ತಪ್ಪದೆ ಅವರಿಗೆ ಕಪ್ಪ-ಕಾಣಿಕೆಗಳನ್ನು ಕಳುಹಿಸು ಎಂದು ತಿಳಿಸುತ್ತಾನೆ. ಅಂತೆಯೇ ಆಗಲಿ ಎಂದು ಚಂದ್ರಹಾಸನು ಇದಕ್ಕೆ ಮುಂಚೆ ಕಳುಹಿಸುತ್ತಿದ್ದುದಕ್ಕಿಂತ ಹೆಚ್ಚಿನ ಕಾಣಿಕೆಗಳನ್ನು (ಈಗ ರಾಜ್ಯ ವಿಸ್ತರಣೆಯಾಗಿರುವುದರಿಂದ) ಕುಂತಳನಗರಕ್ಕೆ ಕಳುಹಿಸುತ್ತಾನೆದೂತರು ಎಂದಿಗಿಂತ ಹೆಚ್ಚಿನ ಕಪ್ಪ-ಕಾಣಿಕೆಗಳನ್ನು ತಂದಿರುವುದನ್ನು ಕಂಡು ಶಂಕಿಸಿದ ಮಂತ್ರಿ ದುಷ್ಟಬುದ್ಧಿಯು ಅದಕ್ಕೆ ಕಾರಣವನ್ನು ಕೇಳುತ್ತಾನೆ. ಭಟರು ತಮ್ಮ ದೊರೆ ಕುಳಿಂದಕನ ಮಗ ಚಂದ್ರಹಾಸನ ದಿಗ್ವಿಜಯದ ಬಗೆಗೆ ತಿಳಿಸಿ ಆ ಕಾರಣದಿಂದಲೇ ಹೆಚ್ಚಿನ ಸಿದ್ಧಾಯವನ್ನು ತಂದಿರುವುದಾಗಿ ಹೇಳುತ್ತಾರೆ.
ದುಷ್ಟಬುದ್ಧಿಯು ಕುಳಿಂದಕನಿಗೆ ಮಕ್ಕಳಿರಲಿಲ್ಲವಲ್ಲ! ಈ ಚಂದ್ರಹಾಸ ಯಾರು?” ಎಂದು ಮುಂತಾಗಿ ಪ್ರಶ್ನಿಸಲು ಭಟರು ಚಂದ್ರಹಾಸನು ತಮ್ಮ ಅರಸನಿಗೆ ಕಾಡಿನಲ್ಲಿ ದೊರೆತ ವೃತ್ತಾಂತವನ್ನು ತಿಳಿಸುತ್ತಾರೆ.

ಈಗ ದುಷ್ಟಬುದ್ಧಿಗೆ ಈ ಚಂದ್ರಹಾಸನು ಹಿಂದೆ ತಾನು ಕೊಲ್ಲಲೆಂದು ಬಯಸಿದ್ದ ಆ ಅನಾಥ ಬಾಲಕನೇ?" ಎಂಬ ಶಂಕೆ ಉಂಟಾಗುತ್ತದೆ. ಅವನ ಬಗೆಗೆ ಕುಳಿಂದಕನಿಂದಲೇ ತಿಳಿದುಕೊಳ್ಳುವೆನೆಂದು ಯೋಚಿಸಿ ಶೀಘ್ರವಾಗಿ ದುಷ್ಟಬುದ್ಧಿಯು ಚಂದನಾವತಿಗೆ ಹೊರಡುತ್ತಾನೆ.
ತಾನು ಚಂದನಾವತಿಗೆ ಹೊರಡುವ ಮುನ್ನ ರಾಜಕಾರ್ಯವನ್ನು ತನ್ನ ಮಗನಾದ ಮದನನಿಗೆ ವಹಿಸಿ ಹೊರಡುತ್ತಾನೆ.

ಚಂದನಾವತಿಗೆ ಬಂದ ದುಷ್ಟಬುದ್ಧಿಯನ್ನು ಕುಳಿಂದಕನು ಆದರದಿಂದ ಸ್ವಾಗತಿಸಿವಿವಿಧ ಕಾಣಿಕೆಗಳನ್ನು ನೀಡಿ ಸತ್ಕರಿಸುತ್ತಾನೆ. ನಂತರದಲ್ಲಿ ಚಂದ್ರಹಾಸನನ್ನು ದುಷ್ಟಬುದ್ಧಿಗೆ ಪರಿಚಯಿಸಿ ಹಿಂದೆ ತಾನು ಬೇಟೆಗೆ ಹೋದಾಗ ಹರಿಭಕ್ತನಾದ ಮಗುವು ತನಗೆ ಸಿಕ್ಕ ವೃತ್ತಾಂತವನ್ನು ಕುಳಿಂದಕನು ಮಂತ್ರಿ ದುಷ್ಟಬುದ್ಧಿಗೆ ಅರುಹುತ್ತಾನೆ.
ಆ ದಿನ ಚಾಂಡಾಲರು ತನ್ನನ್ನು ವಂಚಿಸಿ ಮಗುವನ್ನು ಕೊಲ್ಲದೆ ಬಿಟ್ಟಿದ್ದಾರೆ ಎಂದು ತಿಳಿದ ದುಷ್ಟಬುದ್ಧಿಯು ಒಳಗೊಳಗೇ ಕ್ರುದ್ಧನಾದರೂಹೊರಗೆ ಅದನ್ನು ತೋರಿಸಿಕೊಳ್ಳದೆ ವಿನಯದಿಂದ ಮಾತನ್ನಾಡುತ್ತಾನೆ.

ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ
ರಂಜಿಸುವ ರಾಜಲಕ್ಷಣದೊಳೊಪ್ಪುವನಿವಂ
ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ
ಸಂಜನಿಸಲರಿಯದು ನೃಪಾಲತ್ವಮಗ್ಗಳಿಕೆ
ಗಂಜುವನಲ್ಲ ಬಲವಂತನಹನೀತಂಗೆ
ನಂಜನೂಡಿಸಿ ಕೊಲ್ವುಪಾಯಮಂ ಮಾಳ್ಪೆನೆಂದೆಣಿಸಿದಂ ದುಷ್ಟಬುದ್ಧಿ.

ಅಂದು ಬ್ರಾಹ್ಮಣರು ನುಡಿದ ಮಾತು ಸತ್ಯವಾಯಿತಲ್ಲ! ತಾನು ಆ ಮಗುವನ್ನು ಕೊಳ್ಳಲು ಪ್ರಯತ್ನಿಸಿದರೂ ವಿಧಿಯ ಲೀಲೆಯಿಂದ ಅದು ಸಾಧ್ಯವಾಗಲಿಲ್ಲ.. ಈ ಚಂದ್ರಹಾಸನು ಇರುವವರೆಗೆ ತನ್ನ ಮಗ ಮದನನು ರಾಜನಾಗುವುದಕ್ಕೆ ಸಾಧ್ಯವಾಗುವುದಿಲ್ಲಹಾಗಾಗಿ ಇವನನ್ನು ಹೇಗಾದರೂ ಮುಗಿಸಬೇಕು ಎಂದು ಯೋಚಿಸುತ್ತಾನೆಉಪಾಯವಾಗಿ ಇವನಿಗೆ ವಿಷವನ್ನೂಡಿಸಿ ಕೊಲ್ಲಬೇಕೆಂದು ದುಷ್ಟಬುದ್ಧಿಯು ಸಂಚು ರೂಪಿಸುತ್ತಾನೆ.
ಈ ಪತ್ರವನ್ನು ತರುವ ಚಂದ್ರಹಾಸನಿಗೆ ವಿಷವನ್ನೂಡಿಸಿ ಕೊಲ್ಲಬೇಕೆಂಬ ಗೂಢಾರ್ಥವುಳ್ಳ ಲೇಖನವೊಂದನ್ನು ಬರೆದುಅದಕ್ಕೆ ಮುದ್ರೆಯನ್ನೊತ್ತಿ :  "ಇದನ್ನು ಒಂದು ರಾಜಕಾರ್ಯದ ನಿಮಿತ್ತ ಕೂಡಲೇ ಮದನನಿಗೆ ತಲುಪಿಸಬೇಕಾಗಿದೆ. ಆದ್ದರಿಂದ ಶೀಘ್ರವೇ ಹೊರಟು ನೀನು ಇದನ್ನು ನನ್ನ ಮಗನಿಗೆ ಕೊಟ್ಟು ಬಾ . ನಿನ್ನೊಂದಿಗೆ ಬೇಕಾದರೆ ನಾಲ್ಕು ಅಶ್ವಾರೋಹಿಗಳನ್ನೂ ಕರೆದುಕೊಂಡು ಹೋಗು" ಎಂದು ಹೇಳುತ್ತಾನೆ.
ದುಷ್ಟಬುದ್ಧಿಯ ಕುಟಿಲತೆಯನ್ನರಿಯದ ಚಂದ್ರಹಾಸನು ಅಂತೆಯೇ ಮಾಡುವೆನೆಂದು ತನ್ನ ತಂದೆ-ತಾಯಿಗೆ ತಿಳಿಸಿ ನಾಲ್ಕು ಜನ ಸೇವಕರೊಂದಿಗೆ ಕುಂತಳನಗರಕ್ಕೆ ಹೊರಡುತ್ತಾನೆ.

(ಮುಂದುವರೆಯುವುದು...)


ಎಲ್ಲೋ ಕೇಳಿದ ಕಥೆ ಇದು!

ಚಿಕ್ಕಂದಿನಲ್ಲಿ ಎಲ್ಲೋ ಓದಿದ/ಕೇಳಿದ ನೆನಪು - ಈ ಕಥೆಯನ್ನು.. ಕಥೆ ಸ್ಪಷ್ಟವಾಗಿ ನೆನಪಿಲ್ಲದೆ ಹೋದರೂ ಕಥೆಯ ಎಳೆಅದರಲ್ಲಿನ ನೀತಿ ಇನ್ನೂ ನೆನಪಿದೆ. ಎಷ್ಟೋ ಬಾರಿ ಅದು ನನ್ನನ್ನು ತಪ್ಪುದಾರಿಯತ್ತ ಸರಿಯದಂತೆ ಎಚ್ಚರಿಸಿದೆ..
ನನಗೆ ತಿಳಿದ ಮಟ್ಟಿಗೆ ಆ ಕಥೆಯ ಸಾರವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ :

ರಾಮನ ಮಡದಿ ಸೀತೆಯನ್ನು ರಾವಣನು ಅಪಹರಿಸಿದ್ದ ಸಂಗತಿ ನಮಗೆಲ್ಲ ತಿಳಿದದ್ದೇ. ಆಕೆಯನ್ನು ದುಷ್ಟ ರಾವಣನಿಂದ ಬಿಡುಗಡೆಗೊಳಿಸಲೆಂದು ರಾಮನು ವಾನರ ಸೈನ್ಯದ ಸಹಾಯದಿಂದ ಸಾಗರಕ್ಕೆ ಸೇತುವೆಯನ್ನು ಕಟ್ಟಿ  ಲಂಕೆಯನ್ನು ತಲುಪುತ್ತಾನೆ. ನಂತರದಲ್ಲಿ ರಾಮ ರಾವಣರ ನಡುವೆ ದೊಡ್ಡ ಯುದ್ಧವೇ ನಡೆಯುತ್ತದೆ.
ರಾಮನೋ ಮಾನವರಾವಣನೋ ದಾನವ. ಮಾನವ-ದಾನವಒಳಿತು-ಕೆಡುಕಿನ ನಡುವೆ ನಡೆದ ಯುದ್ಧವದು.

ಯುದ್ಧದಲ್ಲಿ ರಾವಣನು ತನ್ನ ತಮ್ಮ ಕುಂಭಕರ್ಣನನ್ನೂಮಗ ಇಂದ್ರಜಿತುವನ್ನೂ ಕಳೆದುಕೊಳ್ಳುತ್ತಾನೆಆದರೂ ಅವನು ತನ್ನ ಹಠವನ್ನು ಬಿಡಲಿಲ್ಲ. ತಮ್ಮ ವಿಭೀಷಣನ ಮಾತನ್ನು ಮನ್ನಿಸಿ ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ. ಮತ್ತೆ ಯುದ್ಧದ ಜಪವನ್ನೇ ಮುಂದುವರೆಸಿದ ಆ ರಾವಣ. ಕೆಟ್ಟಕಾಲ ಬಂದಾಗ ಬುದ್ಧಿ ಸರಿಯಾಗಿ ಕೆಲಸ ಮಾಡುವುದಿಲ್ಲಅಲ್ಲವೇ.. ಹಿತೈಷಿಗಳು ಹೇಳುವ ಬುದ್ಧಿಮಾತೂ ಆಗ ಕೇಳಿಸುವುದಿಲ್ಲ...

ಕೊನೆಗೆ ರಾಮ-ರಾವಣರ ಯುದ್ಧದಲ್ಲಿ ರಾವಣ ಸೋಲನ್ನಪ್ಪುತ್ತಾನೆ. ರಾಮನ ಬಾಣಕ್ಕೆ ಗುರಿಯಾಗಿ ಸಾಯುವ ಸ್ಥಿತಿಯಲ್ಲಿರುತ್ತಾನೆ ರಾವಣ.

ಕೊನೆಯ ಕ್ಷಣಗಳನ್ನೆಣಿಸುತ್ತಿರುವ ರಾವಣನನ್ನು ಕಂಡು ಲಕ್ಷ್ಮಣನಿಗೆ ಒಂದು ಸಂದೇಹ ಬರುತ್ತದೆ. "ಅಲ್ಲಈ ರಾವಣನೇನೂ ಸಾಮಾನ್ಯದನವನಲ್ಲ.. ಇಂದ್ರಾದಿ ದೇವತೆಗಳನ್ನು ಗೆದ್ದುಅವರನ್ನು ಅಪಮಾನಗೊಳಿಸಿದವ. ಶಿವನ ಸ್ನೇಹಿತನಾದ ಕುಬೇರನಿಂದ ಪುಷ್ಪಕ ವಿಮಾನವನ್ನೇ ಕಸಿದುಕೊಂಡವ. ಇಂತಹ ರಾವಣನು ಮನಸ್ಸು ಮಾಡಿದ್ದರೆ ತಾನು ಸಾಯದೇ ಇರಬಹುದಿತ್ತಲ್ಲ!! ಇಂದ್ರನ ಅಧೀನದಲ್ಲಿರುವ ಅಮೃತವನ್ನು ಅನಾಯಾಸವಾಗಿ ಪಡೆದು ಸೇವಿಸಬಹುದಿತ್ತಲ್ಲ.. ಆಗಲಾದರೆ ಇವನಿಗೆ ಸಾವೇ ಬರುತ್ತಿರಲಿಲ್ಲ.. ಇವನೇಕೆ ಅಮೃತವನ್ನು ಸೇವಿಸಲಿಲ್ಲ..!!"
ತನ್ನ ಈ ಸಂದೇಹವನ್ನು ಕುರಿತು ಲಕ್ಷ್ಮಣನು ರಾಮನಿಗೆ ಹೇಳುತ್ತಾನೆ.  ರಾಮನು "ಬಾ ಲಕ್ಷ್ಮಣನಿನ್ನ ಈ ಪ್ರಶ್ನೆಗೆ ರಾವಣನಿಂದಲೇ ಉತ್ತರವನ್ನು ಪಡೆಯುವಿಯಂತೆ" ಎಂದು ಲಕ್ಷ್ಮಣನನ್ನು ರಾವಣನ ಬಳಿಗೆ ಕರೆದುಕೊಂಡು ಹೋಗುತ್ತಾನೆ.

ಆಗ ರಾವಣನನ್ನು ಕುರಿತು ಲಕ್ಷ್ಮಣ ಹೀಗೆ ಕೇಳುತ್ತಾನೆ "ಅಯ್ಯಾ ರಾವಣ,  ದಾನವೇಂದ್ರನಾದ ನೀನು ಇಂದ್ರಾದಿ ದೇವತೆಗಳನ್ನೂ ಗೆದ್ದವನು. ನೀನು ಅವರ ಪಾಲಿಗೆ ಸಿಂಹಸ್ವಪ್ನದಂತಿದ್ದವನು. ಒಂದು ವೇಳೆ ನೀನು ಮನಸ್ಸು ಮಾಡಿದ್ದರೆ ಅವರಲ್ಲಿದ್ದ ಅಮೃತವನ್ನು ಸೇವಿಸಿ ನೀನು ಕೂಡ ಅಮರತ್ವವನ್ನು ಪಡೆಯಬಹುದಿತ್ತಲ್ಲ!! ಆಗ ಈ ಯುದ್ಧದಲ್ಲಿ ಸಾಯುವಂತಹ ಸ್ಥಿತಿ ನಿನಗೆ ಬರುತ್ತಿರಲಿಲ್ಲ ಅಲ್ಲವೇ.. ನೀನೇಕೆ ಹಾಗೆ ಮಾಡಲಿಲ್ಲ?"

ರಾವಣ ಹೇಳುತ್ತಾನೆ : "ಅಯ್ಯಾ ಲಕ್ಷ್ಮಣಾನೀನೆಂದದ್ದು ನಿಜ. ನಾನು ಹಾಗೆ ಮಾಡಿದ್ದರೆ ಸಾಯುವ ಸ್ಥಿತಿಯೇ ನನಗೆ ಬರುತ್ತಿರಲಿಲ್ಲ. ಆದರೆಕೇಳು.. ಇಂದ್ರಾದಿ ದೇವತೆಗಳನ್ನು ಗೆದ್ದಿದೇನೆ ಎಂಬ ಮದವಿತ್ತು ನನಗೆ. ದೇವತೆಗಳನ್ನೇ ಗೆದ್ದವನಿಗೆ ಮಾನವರಿಂದ ಮೃತ್ಯು ಬರಬಹುದು ಎಂದು ನಾನೆಣಿಸಲೇ ಇಲ್ಲ.. ಹಾಗಾಗಿ ಮುಂಚೆ ನಾನು ಅಮೃತದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಮುಂದೆಂದಾದರೂ ಮಾನವನಿಂದಲೇ ನನಗೆ ಮರಣ ಬರಬಹುದೆಂಬ ಅರಿವಿತ್ತಾದರೂ* ಅದರ ಬಗ್ಗೆ ಈಗಲೇ ಹೆದರುವುದೇಕೆ ಎಂಬ ತಾತ್ಸಾರ (*ಆದು ರಾವಣನು ಪಡೆದಿದ್ದ ವರ - ಕೇವಲ ಮಾನವನಿಂದ ಮಾತ್ರ ತನಗೆ ಮೃತ್ಯು ಬರಬಹುದು ಎಂದು).. ಹಾಗಾಗಿ ಅಮೃತವನ್ನು ಸೇವಿಸುವ ಯೋಚನೆಯನ್ನು ಮುಂದೂಡಿದೆ.

ಆದರೆಈ ಯುದ್ಧ ಮೊದಲಾದ ಸಮಯದಲ್ಲಿ ನನ್ನ ಆಪ್ತ ಮಂತ್ರಿಗಳು ಅಮೃತವನ್ನು ಸೇವಿಸಲೆಂದು ಸಲಹೆಯನ್ನಿತ್ತರು. ಅವರಿಗೆ ನನ್ನ ಶೌರ್ಯದ ಬಗೆಗೆಯುದ್ಧದಲ್ಲಿ ನಾನು ಗೆಲ್ಲುವೆನೆನುವ ಬಗೆಗೆ ಸಂಶಯವಿದೆಯೋ ಎನಿಸಿತು ನನಗೆ...!!
ಛೇಎಂತಹ ಅವಿವೇಕಿಗಳುಇವರು ಈ  ರಾವಣನ ಪರಾಕ್ರಮವನ್ನೇ ಅನುಮಾನಿಸುವರಲ್ಲ ಎಂದು ಅವರ ಬಗೆಗೆ ರೋಷವುದಿಸಿತು... ಹಾಗಾಗಿ ಅವರ ಮಾತನ್ನು ಇನ್ನಷ್ಟು ನಿರ್ಲಕ್ಷಿಸಿದೆ.
ಇಷ್ಟಕ್ಕೂ ಅಮೃತವು ಇಂದ್ರನ ಬಳಿಯಲ್ಲಿ ಇದ್ದೇ ಇರುತ್ತದೆ.. ಅವನು ನನ್ನ ಅಧೀನದಲ್ಲಿಯೇ ಇರುವುದರಿಂದ ಅದನ್ನು ಯಾವಾಗ ಬೇಕೆಂದರಾಗ ಪಡೆಯಬಹುದು. ಸುಮ್ಮನೆ ಅದಕ್ಕಾಗಿ ಈಗಲೇ ಏಕೆ ಚಿಂತಿಸಬೇಕೆಂಬ ಮನೋಭಾವ  ನನ್ನದು.. ಹಾಗೂ ನನ್ನ ಪರಾಕ್ರಮದ ಬಗೆಗೆ ನನಗಿದ್ದ ಅಹಂಕಾರ.. ಈ ಎಲ್ಲ ಕಾರಣಕ್ಕಾಗಿ ನಾನು ಯಾವಾಗಲೂ ಆ ಯೋಚನೆಯನ್ನೇ ಕಡೆಗಣಿಸುತ್ತಿದ್ದೆ . ಅಮೃತಪಾನದಿಂದ ನನಗೆ ಒಳಿತಾಗಬಹುದೆಂದು ತಿಳಿದಿದ್ದರೂ ಯಾವಾಗಲೂ ಅದನ್ನು ಮುಂದೂಡುತ್ತಿದ್ದೆ.
ಹೀಗೆನನ್ನನ್ನು ಉಳಿಸಿಕೊಳ್ಳುವ ಮಾರ್ಗವೊಂದು ಇದೆಯೆಂದು ನನಗೆ ತಿಳಿದಿದ್ದರೂ ಅದನ್ನು ಬೇಕೆಂದೇ ನಿರ್ಲಕ್ಷಿಸಿದೆ ನಾನು. ಅದರ ಕಾರಣವಾಗಿಯೇ ನನಗೆ ಈ ದುಸ್ಥಿತಿ ಬಂದೊದಗಿತು.."

ಈ ಕಥೆ ನಿಜವಿರದೇ ಇರಬಹುದು. ಆದರೆ ಜೀವನದ ಬಗೆಗೆ ಒಂದು ಒಳ್ಳೆಯ ಪಾಠ ಅಡಗಿದೆ ಇದರಲ್ಲಿ. ನಾವು ಕೂಡ ಎಷ್ಟೋ ಬಾರಿ ಹೀಗೇ ಮಾಡುತ್ತೇವೆ. ಯಾವುದನ್ನು ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಎಂಬ ಅರಿವು ನಮಗೆ ಇರುತ್ತದೆ. ಆದರೆ ಅದನ್ನು ನಾವು ಮಾಡುವುದಿಲ್ಲ. ಸಾಧ್ಯವಾದಷ್ಟೂ ಅದನ್ನು ಮುಂದೂಡುತ್ತೇವೆ. ತೀರಾ ಕೆಟ್ಟ ಸ್ಥಿತಿಯನ್ನು ತಲುಪುವವರೆಗೂ ಆ ವಿಷಯವಾಗಿ ನಾವು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಎಲ್ಲ ಕೈಮೀರಿದ ಮೇಲೆ ನಾವು ಆ ಕಾರ್ಯವನ್ನು ಮೊದಲೇ ಮಾಡಬೇಕಾಗಿತ್ತು ಎಂದು ಪಶ್ಚಾತ್ತಾಪ ಪಡುತ್ತೇವೆ. ಹೀಗಾಗಿಕೊನೆಯಲ್ಲಿ ನಮ್ಮ ಈ  ನಿರ್ಲಕ್ಷ್ಯದ ಫಲವನ್ನು ನಾವು ಅನುಭವಿಸಲೇಬೇಕಾಗುತ್ತದೆ.
"ಕಾಲೇಜು ಶುರುವಾದಾಗಿನಿಂದಲೇ ಸರಿಯಾಗಿ ಓದಿದ್ದಿದ್ರೆ ನಾನು ಫೇಲಾಗ್ತಿರ್ಲಿಲ್ಲ", "ಮುಂಚೆಯಿಂದಲೇ ಸ್ವಲ್ಪ ವಾಕಿಂಗ್ ಅಭ್ಯಾಸ ಮಾಡಿದ್ದಿದ್ರೆ ಈ ವ್ಯಾಧಿ ಬರ್ತಾ ಇರ್ಲಿಲ್ವೇನೋ!" , "ಮುಂಚೆಯಿಂದಲೇ ಸ್ವಲ್ಪ ಹಣವನ್ನು ಕೂಡಿಟ್ಟಿದ್ದರೆ ಇಂತಹ ಕಷ್ಟಕಾಲಕ್ಕೆ ಸ್ವಲ್ಪ ಸಹಾಯವಾದ್ರೂ ಆಗ್ತಿತ್ತು" – ಇಂಥವೇ ಮುಂತಾದ ಸಮಯಗಳಲ್ಲಿ ನಮ್ಮ ನಿರ್ಲಕ್ಷ್ಯ / ಸೋಮಾರಿತನವನ್ನು ಕುರಿತು ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಟ್ಟಿರುತ್ತೇವೆ ನಾವೆಲ್ಲ. ಹಾಗೆಯೇ ಅಂಥದೇ ತಪ್ಪುಗಳು ಪುನರಾವರ್ತನೆಯಾದ ಸಂದರ್ಭಗಳೂ ಇದ್ದಿರಬಹುದು.

ಮುಖ್ಯವಾಗಿ ನಮಗೆ "ಈಗ್ಲೇ ಆ ಬಗ್ಗೆ ಚಿಂತೆ ಯಾಕೆ" "ಅಂತ ಕಾಲ ಬಂದಾಗ ನೋಡ್ಕೊಂಡ್ರೆ ಆಯ್ತು" ಅನ್ನುವ ಧೊರಣೆ ಸ್ವಲ್ಪ ಹೆಚ್ಚಾಗಿಯೇ ಇರುತ್ತೆ. ನಮಗೆ ಅಂತಹ ಸಮಸ್ಯೆ ಬರುವುದೇ ಇಲ್ಲವೇನೋ ಎಂಬ ಹುಂಬಧೈರ್ಯವೊಂದಿರುತ್ತದೆ. ಆ ಪೊಳ್ಳುಧೈರ್ಯದ  ದೆಸೆಯಿಂದಲೇ ನಮಗೇ ಗೊತ್ತಿಲ್ಲದೆ ಒಮ್ಮೊಮ್ಮೆ ಇಂತಹ ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತೇವೆ. ನಂತರದಲ್ಲಿ ನಮ್ಮ ಅಜಾಗರೂಕತೆಯ ಬಗ್ಗೆ  ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ.

ಯಾಕೋ ಗೊತ್ತಿಲ್ಲ, ತುಂಬಾ ದಿನಗಳಿಂದ ಮನಸಿನಲ್ಲಿ ಅಸ್ಪಷ್ಟವಾಗಿದ್ದ ಈ ಕಥೆಯ ನೆನಪಿಗೆ ಒಂದು ಸ್ಪಷ್ಟವಾದ ರೂಪವನ್ನು ಕೊಟ್ಟು ಯಾರೊಂದಿಗಾದರೂ ಹಂಚಿಕೊಳ್ಳಬೇಕೆನಿಸುತ್ತಿತ್ತು. ಇಂದಿಗೆ ಅದು ಈ ಲೇಖನದ ಮೂಲಕ ನೆರವೇರಿತು.