Monday 5 August 2013

ಕವಿರಾಜಮಾರ್ಗ - ಕೃತಿ ಪರಿಚಯ

"ಕವಿರಾಜಮಾರ್ಗ" – ಈ ಹೆಸರನ್ನು ಒಂದಲ್ಲ ಒಮ್ಮೆ ನಾವು ಕೇಳಿಯೇ ಇರುತ್ತೇವೆ.ಆದರೆ ಇದರ ಬಗ್ಗೆ ನಮಗೆ ಹೆಚ್ಚಾಗಿ ಏನೂ ತಿಳಿದಿರುವುದಿಲ್ಲ.! ಹಾಗಾಗಿ ಈ ಕೃತಿಯನ್ನು ಪರಿಚಯಿಸಲು ನನ್ನದೊಂದು ಪ್ರಯತ್ನ - ಈ ಲೇಖನ.

ಕನ್ನಡದ ಇತಿಹಾಸದಲ್ಲಿ ಕವಿರಾಜಮಾರ್ಗಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಕನ್ನಡದ ಪ್ರಾಚೀನತೆಗೆ ಸಾಕ್ಷಿಯಾದ ಶಾಸನಗಳ ಪೈಕಿ ಹಲ್ಮಿಡಿ ಶಾಸನವು(೫ನೇ ಶತಮಾನ) ಮೊದಲನೆಯದೆನಿಸಿದರೆ*, ಕನ್ನಡದಲ್ಲಿ ಉಪಲಬ್ಧವಿರುವ ಗ್ರಂಥಗಳ ಪೈಕಿ ಕವಿರಾಜಮಾರ್ಗವು ಅತ್ಯಂತ ಹಳೆಯದು. ಈಗಿನ ಮಟ್ಟಿಗೆ ಇದೇ ಮೊದಲನೆಯದು ಎಂದರೂ ತಪ್ಪಲ್ಲ.!

ಮೂಲತಃ ಕವಿರಾಜಮಾರ್ಗವು ಒಂದು ಲಕ್ಷಣ ಗ್ರಂಥ (ವ್ಯಾಕರಣ, ಅಲಂಕಾರ ಹಾಗೂ ಭಾಷೆಯ/ಧ್ವನಿರಚನೆಯ ಬಗೆಗೆ ರಚಿತವಾದ ಗ್ರಂಥ). ಇದನ್ನು ಕನ್ನಡ ಕಾವ್ಯಮೀಮಾಂಸೆಯ ತಲಕಾವೇರಿ ಎನ್ನಬಹುದು. ಇದರ ಮುಂದಿನ ಕನ್ನಡ ಲಕ್ಷಣ ಗ್ರಂಥಗಳಿಗೆ ಈ ಗ್ರಂಥವೇ ಮಾರ್ಗದರ್ಶಿ. ಹಾಗಾಗಿ ಈ ಗ್ರಂಥವು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವವನ್ನು ಪಡೆದಿದೆ.

ಕವಿಗಳ+ರಾಜಮಾರ್ಗ, ಕವಿರಾಜರ+ಮಾರ್ಗ ಅಥವ ಕವಿರಾಜನ+ಮಾರ್ಗ ಎಂದು ಇದನ್ನು ಬಿಡಿಸಿ ಅರ್ಥ ಮಾಡಬಹುದು.
ಕವಿರಾಜರು(ಅಂದರೆ ಕವಿಶ್ರೇಷ್ಠರು) ಅನುಸರಿಸುವ ಮಾರ್ಗ ಎಂದು, ಅಥವಾ ಮಾರ್ಗಕಾವ್ಯವನ್ನು ರಚಿಸಲು ಕವಿಶ್ರೇಷ್ಠರಿಗೆ ದಾರಿದೀಪವಾಗಲಿ ಎಂದು ಕವಿಯು ಇದನ್ನು ರಚಿಸಿದನೆಂದು ಭಾವಿಸಬಹುದಾಗಿದೆ.

ಕೃತಿಯ ವಿಚಾರ :

ಕವಿರಾಜಮಾರ್ಗವು ೯ ನೇ ಶತಮಾನದಲ್ಲಿ - ಸುಮಾರು ೮೪೦-೮೫೦ರ ಮಧ್ಯಕಾಲದಲ್ಲಿ - ರಚಿತವಾಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ (ಕೆಲವು ಶಾಸನಗಳೂ ಈ ಊಹೆಯನ್ನೇ ಸಮರ್ಥಿಸುತ್ತವೆ).

ಈ ಅಮೂಲ್ಯ ಕೃತಿಯ ಕರ್ತೃ ಯಾರು ಎಂಬುದರ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಕೆಲವರು ರಾಷ್ಟ್ರಕೂಟ ವಂಶದ ಅರಸನಾದ ಅಮೋಘವರ್ಷ ನೃಪತುಂಗನೇ ಇದರ ಕರ್ತೃ ಎಂದು ವಾದಿಸುತ್ತಾರೆ. ಇನ್ನು ಕೆಲ ವಿದ್ವಾಂಸರು ಇದನ್ನು ರಚಿಸಿದವನು ಶ್ರೀ ವಿಜಯನೆಂಬ ಜೈನ ಕವಿ ಎಂದು ಅಭಿಪ್ರಾಯ ಪಡುತ್ತಾರೆ. ಈ ಎರೆಡು ವಾದಗಳಿಗೂ ಪ್ರತಿಯಾಗಿ ಇನ್ನೊಂದು ಗುಂಪು ಈ ಕೃತಿಯನ್ನು ರಚಿಸಿದವನು 'ಕವೀಶ್ವರ'ನೆಂದು ವಾದಿಸುತ್ತಾರೆ.

ಆದರೆ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು "ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ.."ವಷ್ಟೇ ಹೊರತು ನೃಪತುಂಗನೇ ಸ್ವತಃ ಬರೆದದ್ದಲ್ಲ. ಅಂದರೆ ಇದು ಬೇರೊಬ್ಬರು ಬರೆದದ್ದು, ನೃಪತುಂಗ ಬರೆದದ್ದಲ್ಲ. ಅಷ್ಟೇ ಅಲ್ಲದೆ ಗ್ರಂಥದ ಮೊದಲ ಪದ್ಯದಲ್ಲಿ ಶ್ರೀವಿಷ್ಣುವಿಗೂ ನೃಪತುಂಗನಿಗೂ ಅಬೇಧ ಕಲ್ಪಿಸಿ ಸ್ತುತಿಸಲಾಗಿದೆ. ನೃಪತುಂಗನೇ ಇದನ್ನು ರಚಿಸಿದ್ದಾದರೆ ತನ್ನನ್ನು ತಾನು ಮಹಾವಿಷ್ಣುವಿಗೆ ಹೋಲಿಸಿಕೊಳ್ಳುವಷ್ಟು ಧೈರ್ಯ ಆತ ಮಾಡುತ್ತಿರಲಿಲ್ಲ ಎನಿಸದೆ ಇರದು (ತನ್ನನ್ನು ತಾನೇ - ಅದೂ ತನ್ನನ್ನು ವಿಷ್ಣುವಿಗೆ ಹೋಲಿಸಿಕೊಂಡು ಆತ ಏಕೆ ಸ್ತುತಿಸಿಕೊಳ್ಳುತ್ತಾನೆ?). ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಕಾರಣಗಳಿಗೆ ಇದರ ಕರ್ತೃ ನೃಪತುಂಗನೆಂಬ ವಾದವನ್ನು ಕೈಬಿಡಬೇಕಾಗುತ್ತದೆ.

ಇನ್ನು,'ಕವೀಶ್ವರ' ಎಂಬುದು ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀವಿಜಯನಿಗೆ ಇದ್ದ ಬಿರುದಷ್ಟೆ ಹೊರತು ಆ ಹೆಸರಿನ ವ್ಯಕ್ತಿಯೇ ಇರಲಿಲ್ಲವೆಂದು 'ಶ್ರೀ ವಿಜಯ'ನ ಪಕ್ಷದವರು ಪ್ರತಿಪಾದಿಸಿದ್ದಾರೆ.

ಇನ್ನುಳಿದಂತೆ, ಗ್ರಂಥದಲ್ಲಿ ಕವಿಯೇ ಹೇಳಿಕೊಂಡಿರುವುದರಿಂದಲೂ, ಹಾಗೂ ನಂತರದ ಕವಿಗಳು ತಮ್ಮ ಕಾವ್ಯ/ಗ್ರಂಥಗಳಲ್ಲಿ 'ಶ್ರೀವಿಜಯನ ಕವಿರಾಜಮಾರ್ಗ'ವೆಂದೂ ಉಲ್ಲೇಖಿಸಿರುವುದರಿಂದಲೂ ಇದರ ಕರ್ತೃ ಶ್ರಿವಿಜಯನೇ ಎಂಬುದು ನಿರ್ವಿವಾದವಾಗಿ ಒಪ್ಪಬಹುದಾಗಿದೆ.

ಈ ಕೃತಿಯ ಒಳಗೇನಿದೆ?

ಈ ಮೊದಲೇ ಹೇಳಿದಂತೆ ಇದೊಂದು ಲಕ್ಷಣ ಗ್ರಂಥ. ಕಾವ್ಯರಚನೆ, ಅಲಂಕಾರ, ವ್ಯಾಕರಣ ಮುಂತಾದ ವಿಷಯಗಳು ಇಲ್ಲಿ ಪ್ರತಿಪಾದಿತವಾಗಿವೆ. ‘ಕವಿರಾಜಮಾರ್ಗ’ದಲ್ಲಿ ಮೂರು ಪರಿಚ್ಛೇದಗಳಿವೆ.
ಮಹಾವಿಷ್ಣು ಹಾಗೂ ಸರಸ್ವತಿ ದೇವಿಯ ಸ್ತುತಿಯಿಂದ ಪ್ರಾರಂಭವಾಗುವ ಮೊದಲನೆಯ ಪರಿಚ್ಛೇದದಲ್ಲಿ ಕನ್ನಡ ಕಾವ್ಯಗಳಲ್ಲಿ ಕಂಡುಬರುವ (ಆ ಕಾಲಕ್ಕೆ) ದೋಷಾದೋಷಗಳ ವಿವೇಚನೆಯಿದೆ. ಸಂಸ್ಕೃತವನ್ನು ಕನ್ನಡ ಕಾವ್ಯದಲ್ಲಿ ಹೇಗೆ - ಯಾವ ಪ್ರಮಾಣದಲ್ಲಿ ಬೆರೆಸಿ ಹೇಳಬೇಕೆಂಬ ನಿರ್ದೇಶನವಿದೆ. ಅಷ್ಟೇ ಅಲ್ಲದೆ, ಕನ್ನಡದಲ್ಲಿ ( ಆ ಕಾಲಕ್ಕೆ) ಇದ್ದ ಅನೇಕ ಉಪಭಾಷೆಗಳ ಬಗ್ಗೆ ಪ್ರಸ್ತಾಪವಿದೆ - ಇಲ್ಲಿ. ಹಾಗೆಯೇ, ಈ ಪರಿಚ್ಛೇದದಲ್ಲಿ ಕವಿಯು ಕನ್ನಡಕ್ಕೆ ಮಾತ್ರ ಸೇರಿದ ಚತ್ತಾಣ, ಬೆದಂಡೆ, ಒನಕೆವಾಡು, ಬಾಜನೆಗಬ್ಬ ಮುಂತಾದ ಸಾಹಿತ್ಯರೂಪಗಳ ಪರಿಚಯ ಮಾಡಿಕೊಡುತ್ತಾನೆ.

ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರವನ್ನು ಕುರಿತಾದ ವ್ಯಾಖ್ಯಾನಗಳಿವೆ. ಪದ ಪ್ರಯೋಗ ನಿಯಮಗಳು, ಪ್ರಾಸಗಳು - ಅವುಗಳ ಪ್ರಬೇಧಗಳು, ಅವಕ್ಕೆ ಪೂರಕವಾದ ಲಕ್ಷಣ ಪದ್ಯಗಳನ್ನು ಈ ಪರಿಚ್ಛೇದದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ವಿಶಿಷ್ಟವಾದ 'ದಕ್ಷಿಣೋತ್ತರ ಮಾರ್ಗ'ವೆಂಬ ಮಾರ್ಗದ ಪ್ರಸ್ತಾಪವೂ, ನಿರೂಪಣೆಯೂ ಈ ಪರಿಚ್ಛೇದದಲ್ಲಿದೆ.

ಮೂರನೆಯ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳ ನಿರ್ದೇಶನವಿದೆ. ಮತ್ತು ಮಹಾಕಾವ್ಯ ಲಕ್ಷಣವನ್ನು ಕುರಿತಾದ ಪದ್ಯಗಳಿವೆ.

ಕೃತಿಯ ಬಗ್ಗೆ ಇನ್ನಷ್ಟು :

ಕವಿಯು ಈ ಗ್ರಂಥದಲ್ಲಿ ತನಗಿಂತ ಹಿಂದೆಯೇ ಇದ್ದು ಆ ಕಾಲಕ್ಕೆ ಮುಗಿಯುತ್ತಾ ಬಂದಿದ್ದ 'ಹಳೆಗನ್ನಡ'ವನ್ನು ಕುರಿತು ಹೇಳುತ್ತಾನೆ. ಅಂದರೆ, ಇದರಿಂದ ನಮಗೆ ೯ನೇ ಶತಮಾನಕ್ಕೆ ಹಿಂದೆಯೇ ಒಂದು ಬಗೆಯ ಕನ್ನಡವು(ಹಳಗನ್ನಡವು) ಇತ್ತೆಂದು ತಿಳಿದುಬರುತ್ತದೆ. ಆ ಕಾಲಕ್ಕೆ ಈ ಕವಿಯ ಕನ್ನಡವೇ ಹೊಸಗನ್ನಡ!!

ಆ ಹಿಂದೆ ಇದ್ದ ಕನ್ನಡದ ಕವಿಗಳು ತಮ್ಮ ಕಾವ್ಯಗಳಲ್ಲಿ ಸಂಸ್ಕೃತವನ್ನು ಮಿತಿಮೀರಿ ಬಳಸಿರುವುದನ್ನು ಕುರಿತು ಕವಿಯು ಹೇಳುತ್ತಾನೆ. ಈ ರೀತಿಯ ಸೇರಿಸುವಿಕೆಯಿಂದ ಕನ್ನಡದಲ್ಲಿ ದೋಷಗಳು ಉಂಟಾಗಿ ಕನ್ನಡವು ಹದಗೆಟ್ಟಿತ್ತು ಎಂದು ಕವಿಯು ಅಭಿಪ್ರಾಯಪಡುತ್ತಾನೆ. ಇಂತಹ ದೋಷಗಳು ಕನ್ನಡದಲ್ಲಿ ಎಷ್ಟಿದ್ದವು ಎಂದರೆ :

ದೋಸಮಿನಿತೆಂದು ಬಗೆದು
ದ್ಭಾಸಿಸಿ ತಱಿಸಂದು ಕನ್ನಡಂಗಳೊಳೆಂದುಂ
ವಾಸುಗಿಯುಮಱಿಯಲಾಱದೆ
ಬೆಸಱುಗುಂ ದೇಶೀ ಬೇಱೆವೇಱಪ್ಪುದರಿಂ (ಕ.ಮಾ – ೪೬)

"ದೋಷಗಳು ಎಷ್ಟಿವೆ ಎಂದು ವಿವರಿಸಿ ಹೇಳು" ಎಂದು ಕೇಳಿದರೆ ಅದನ್ನು ಹೇಳಲು ಸಾವಿರ ತಲೆಯ ವಾಸುಕಿಯೂ ಬೇಸರಿಸಿಕೊಳ್ಳುತ್ತಾನಂತೆ.
“ಕಾವ್ಯಗಳಲ್ಲಿ ಕಂಡುಬರುತ್ತಿರುವ ಈ ರೀತಿಯ ದೋಷಗಳಲ್ಲಿ ಹಲವನ್ನು ಕುರಿತು ಹೇಳಲು ಪ್ರಯತ್ನಿಸುತ್ತೇನೆ” ಎಂದು ಹೇಳುತ್ತ ಕವಿಯು ದೋಷಾದೋಷಗಳ ನಿರೂಪಣೆಗೆ ತೊಡಗುತ್ತಾನೆ.

ಈ ಕೃತಿಯಲ್ಲಿ ಆಗಿನ ಕನ್ನಡ/ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಕೆಲವು ಮಹತ್ವದ ಸಂಗತಿಗಳನ್ನೂ ನಾವು ಕಾಣಬಹುದು. ಮುಖ್ಯವಾಗಿ ಕವಿಯು ಕನ್ನಡ ನಾಡನ್ನೂ, ಕನ್ನಡದ ಜನರನ್ನೂ ಕುರಿತು ಹೇಳಿರುವ ಈ ಎರೆಡು ಪದ್ಯಗಳನ್ನು ಗಮನಿಸಬಹುದು :

ಕಾವೇರಿಯಿಂದಮಾ ಗೋದಾ
ವರಿವರೆಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯವಿಲೀನವಿಶದ ವಿಷಯ ವಿಶೇಷಂ (ಕ.ಮಾ – ೩೬)

ಆ ಕಾಲಕ್ಕೆ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿಯಿಂದ ಹಿಡಿದು ಉತ್ತರದಲ್ಲಿ ಗೋದಾವರಿಯವರೆಗೂ ಹಬ್ಬಿತ್ತು ಎಂದು ತಿಳಿದುಬರುತ್ತದೆ. ('ಕನ್ನಡ' - ಈ ಪದವು ಆಗ ಭೌಗೋಳಿಕ ಪ್ರದೇಶವನ್ನು ನಿರ್ದೇಶಿಸುವ ಸಲುವಾಗಿಯೂ ಉಪಯೋಗಿಸಲ್ಪಡುತ್ತಿತ್ತು)

ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ (ಕ.ಮಾ – ೩೮)

ಕನ್ನಡಿಗರು 'ಹದವರಿತು ನುಡಿಯಬಲ್ಲವರೂ, ನುಡಿದಂತೆ ನಡೆಯಬಲ್ಲವರೂ ಆಗಿದ್ದರು. ಅವರು ಎಷ್ಟು ಪ್ರತಿಭಾವಂತರೂ, ಕೌಶಲ್ಯಮತಿಗಳೂ ಆಗಿದ್ದರು ಎಂದರೆ 'ನಿಜದಿಂ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ' -- ಓದು ಬರಹ ಬರದವರೂ ಸಹ ಕಾವ್ಯ ರಚನೆಯಲ್ಲಿ ನಿಷ್ಣಾತರಾಗಿದ್ದರು. ಕರ್ನಾಟಕದಾದ್ಯಂತ ಪ್ರಸಿದ್ಧವಾಗಿರುವ ಜಾನಪದ ಗೀತೆಗಳು ಈ ರೀತಿಯ ರಚನೆಗಳಿಗೆ ಒಂದು ಉತ್ತಮ ಉದಾಹರಣೆ.

ಕವಿರಾಜಮಾರ್ಗವು ಕನ್ನಡ ಕಾವ್ಯರಚನೆಗೆ ಕೈದೀವಿಗೆಯಾಗಲಿ ಎಂದು ರಚಿತವಾಗಿದ್ದರೂ ಇದನ್ನು ರಚಿಸಲು ಕವಿಯು ಸಂಸ್ಕೃತ ಗ್ರಂಥಗಳನ್ನೇ ಆಶ್ರಯಿಸಿದ್ದಾನೆ.

ಈ ಕೃತಿಗೆ ಸಂಸ್ಕೃತ ಕವಿಗಳಾದ ದಂಡಿ ಹಾಗೂ ಭಾಮಹರ 'ಕಾವ್ಯಾದರ್ಶ' ಹಾಗೂ 'ಕಾವ್ಯಾಲಂಕಾರ'ಗಳು ಕ್ರಮವಾಗಿ ಆಕರಗಳು. ವಾಸ್ತವವಾಗಿ ಕವಿಯು ಸಂಸ್ಕೃತ ಆಕರಗಳ ನೇರ ಅನುವಾದಕ್ಕೆ ತೊಡಗದೆ ಕನ್ನಡಕ್ಕೆ ಒಪ್ಪುವ ರೀತಿಯಲ್ಲಿ ತನ್ನದೇ ಧಾಟಿಯಲ್ಲಿ ಅವುಗಳ ಭಾವಾನುವಾದವನ್ನಷ್ಟೆ ಮಾಡಿದ್ದಾನೆ.

ಹಾಗೂ ಕವಿಯ ಸ್ವತಂತ್ರ ಸೃಷ್ಟಿಯು ಕೂಡ ಈ ಗ್ರಂಥದಲ್ಲಿದೆ. ಒಟ್ಟು ೫೩೬ ಪದ್ಯಗಳಿರುವ ಈ ಗ್ರಂಥದಲ್ಲಿ ೨೭೫ ಸಂಸ್ಕೃತ ಗ್ರಂಥಗಳ ನೆರಳಿನಲ್ಲಿ ರಚನೆಯಾದವು. ಇನ್ನುಳಿದ ಪದ್ಯಗಳು ಶ್ರೀವಿಜಯನ ಸ್ವತಂತ್ರ ಸೃಷ್ಟಿ.
ಕೃತಿಯಲ್ಲಿನ ಹಲವು ಲಕ್ಷಣ ಪದ್ಯಗಳಲ್ಲಿ(illustrative poems) ಕವಿಯು ಅಂದಿನ ರಾಜಕೀಯ ಸ್ಥಿತಿಗತಿಗಳ ಬಗೆಗೂ ನಮಗೆ ಮಾಹಿತಿ ಕೊಡುತ್ತಾನೆ. ಒಟ್ಟಿನಲ್ಲಿ 'ಕವಿರಾಜಮಾರ್ಗ'ವು ಹಲವಾರು ದೃಷ್ಟಿಕೋನಗಳಿಂದ ಅತ್ಯಂತ ಮಹತ್ವಪೂರ್ಣ ಗ್ರಂಥವಾಗಿದೆ.
ಇಂತಹ ಅಪೂರ್ವ ಕೃತಿಯನ್ನು ನೀಡಿದ ಶ್ರೀವಿಜಯ ನಿಜಕ್ಕೂ ಕನ್ನಡದ ಕವಿಗಳಿಗೆ ಹೊಸ ಮಾರ್ಗವನ್ನೇ ತೋರಿದ್ದಾನೆ.

ಇಲ್ಲಿಗೆ ಶ್ರೀವಿಜಯನಿಂದ ರಚಿತವಾದ "ಪರಮ ಶ್ರೀ ನೃಪತುಂಗದೇವಾನುಮತಮಪ್ಪ 'ಕವಿರಾಜಮಾರ್ಗ'ದ" ಪರಿಚಯ ಲೇಖನವು ಸಮಾಪ್ತಿಯಾಯ್ತು. :)


------------------------------------------------------------------------------------------------------------------- *ಇತ್ತೀಚೆಗೆ ಸುಮಾರು ೩ನೇ ಶತಮಾನಕ್ಕೆ ಸೇರಿದ ಕನ್ನಡ ಶಾಸನವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಆದರೆ ಅದರ ಖಚಿತತೆಯ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. (FYI)

ಗ್ರಂಥ ಋಣ : 'ಕನ್ನಡ ಸಾಹಿತ್ಯ ಪರಿಷತ್'ನಿಂದ ಪ್ರಕಟಿತವಾದ "ಕವಿರಾಜಮಾರ್ಗ" ಹಾಗೂ "ಶಬ್ದಮಣಿದರ್ಪಣಂ" ಗ್ರಂಥಗಳು.

26 comments:

  1. ಕವಿರಾಜಮಾರ್ಗ ಕೃತಿ ಕುರಿತು ಇಷ್ಟು ಮಾಹಿತಿ ಓದಿ ಸಂತೋಷವಾಯಿತು... ಧನ್ಯವಾದಗಳು @acharya2 ಅವರಿಗೆ

    ReplyDelete
  2. This comment has been removed by a blog administrator.

    ReplyDelete
  3. ಕವಿರಾಜಮಾರ್ಗ ದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದೀರ ವಂದನೆಗಳು

    ReplyDelete
  4. Madum nanage vadaradane bagge mahite beku

    ReplyDelete
  5. Sir edara full padya kalia sir

    ReplyDelete
  6. What is this father and mother name

    ReplyDelete
  7. ಧನ್ಯವಾದಗಳು

    ReplyDelete
  8. ತುಂಬಾ ಧನ್ಯವಾದಗಳು

    ReplyDelete
    Replies
    1. ,,Thank you so much for the update and very interested story And I like 💖💖💖💖

      Delete
  9. ಕೃತಿಯ ಸಮೀಕ್ಷೆ ಉತ್ತಮವಾಗಿದೆ.

    ReplyDelete
  10. ಕವಿರಾಜಮಾರ್ಗ ಈಗಿನ ಎಲ್ಲಾ ಕವಿಗಳಿಗೆ ಅನುಕೂಲವಾಗಿದೆ.ಅತ್ಯಂತ ಶ್ರೇಷ್ಠ ಗ್ರಂಥ ಧನ್ಯವಾದಗಳು

    ReplyDelete
  11. ಎಲ್ಲರಿಗೂ ಧನ್ಯವಾದಗಳು

    ReplyDelete
  12. ಕವಿಗಳ ರಾಜ್ಯ ಮಾರ್ಗವನ್ನು ತಿಳಿಸಿದಕ್ಕಾಗಿ ಧನ್ಯವಾದಗಳು.

    ReplyDelete
  13. Thanks for you madam tomba helpful

    ReplyDelete
  14. ಅದ್ಭುತ ವಿಚಾರಗಳು ಸರ್

    ReplyDelete
  15. ಧನ್ಯವಾದಗಳು ಸರ್

    ReplyDelete
  16. ಹತ್ತು ವರ್ಷ ಗಳ ಹಿಂದಿನ ಲೇಖನ ಇದನ್ನು ನೋಡಿ ಎಂ.ಎ.ಗೆ assignment ಬರಯುತ್ತಿರುವೆ ‘ಸಿರಿಗನ್ನಡಂ ಗೆಲ್ಗೆ’

    ಮಂಗಳೂರು

    ReplyDelete