Thursday 18 July 2013

ಪಾಲಿಸೆನ್ನನು ಹರಿಯೆ

ಪಾಲಿಸೆನ್ನನು ಹರಿಯೆ; ಪಾಲಿಸೆನ್ನನು ದೊರೆಯೆ.
ಬಿಡದೆನ್ನ ಬೆಂಬತ್ತಿ ಬಗೆಗೆಡಿಸಿ ಕಾಡುತಿಹ,
ಹೊಡೆಹೊಡೆದು ಕೆಡೆಗೆಡೆದು ಛಲದಿಂದ ಬಂಧಿಸಿಹ -
ಆರು ಪಾಶದೆ ಸಿಲುಕಿ ನರಳುತಿಹುದೆನ್ನಾತ್ಮ;
ಅದನು ಪೊರೆದುದ್ಧರಿಸಿ ಸಲಹೆನ್ನ ಶ್ರೀ ಹರಿಯೆ.


ಅನ್ಯರುತ್ತಮಿಕೆಯೊಳು ಕರುಬುವುದು ಈ ಮನವು,
ಅನ್ಯರಾ ಅವನತಿಗೆ ಮೂಡುವುದು ಸಂತಸವು,
ಆನ್ಯರೇಳ್ಗೆಯ ಕಂಡು ಮೊರೆಯುವುದು ಮತ್ಸರವು;
ಇದರ ದೆಸೆಯೊಳು ನನ್ನ ಜೀವನವು ನಿಷ್ಫಲವು.
ಈ ದ್ವೇಷದುರಿ ಹರಿಸಿ ಕಾಯೆನ್ನ ಶ್ರೀ ಹರಿಯೆ.


ನಾನೆಂಬಹಂಕಾರ ತುಂಬಿಹುದು ಎದೆಯೊಳಗೆ,
ತಾತ್ಸಾರದಾ ಪೊರೆಯು ಮೂಡಿಹುದು ಕಣ್ಣೊಳಗೆ,
ಅಧಿಕರಣದಾ ಅಮಲು ಏರಿಹುದು ತಲೆಯೊಳಗೆ,
ಮದದ ಭೂತವು ಹೊಕ್ಕು ಮೆರೆಯುತಿಹುದೆನ್ನೊಳಗೆ;
ಅದರ ಚೇಷ್ಟೆಯ ಕಳೆದು ಕಾಯೆನ್ನ ಶ್ರೀ ಹರಿಯೆ.


ನನದೆಂಬ ಮಮಕಾರ - ಅಜ್ಞಾನದಾವಾರ;
ಮುಗಿಯದೆಂದಿಗು ಅದರ ಪಾಶದಾ ವಿಸ್ತಾರ –
ಸುಖದ ನೇಣಿನೊಳೆನ್ನ ಬಂಧಿಸಿದ ಹುನ್ನಾರ ;
ಮೋಹಸೆರೆಯೊಳು ಸಿಕ್ಕ ಜೀವವಿದು ನಿಸ್ಸಾರ.
ಇದರ ಬಂಧವ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಇರುವುದನು ಕಡೆಗಣಿಸಿ ಇರದುದನು ಧ್ಯಾನಿಸುವ
ಎನಿತೆಷ್ಟು ಪಡೆದರೂ ಮತ್ತಷ್ಟಿಗಾಶಿಸುವ
ಪರರ ಸೊತ್ತನು ಕಸಿದು ತನದೆಂದು ವಾದಿಸುವ
ತನ್ನ ಲಾಭವ ಮಾತ್ರ ನೆನೆನೆನೆದು ಸಾಧಿಸುವ
ಲೊಭದುಪಟಳ ಹರಿಸಿ ಕಾಯೆನ್ನ ಶ್ರೀ ಹರಿಯೆ.


ಆವ ಕಾರಣವಿರದೆ ಉದಿಸುವುದು ತಾಮಸವು –
ತನುಮನವ ಕೆಡಿಸುತ್ತ ಭ್ರಮೆಗೆಳೆಸುವಾವಹವು,
ಹೃದಯವನು ಕುದಿಸುತ್ತ ಮತಿಗೆಡಿಸುವಾನಲವು,
ಉರಿದುರಿದು ಕೊಲ್ಲುವ ಮಹದ್ವಿಲಯ ಕಾರಣವು;
ಈ ಕ್ರೋಧವನು ದಹಿಸಿ ಕಾಯೆನ್ನ ಶ್ರೀ ಹರಿಯೆ.


ಸುಖದ ಸಿರಿಯನು ಕುರಿತು ಸರ್ವಥಾ ಧ್ಯಾನಿಸಿಹ,
ಸಂಗಕ್ಕೆ ಹಾತೊರೆದು ಸಕಲವನ್ನಾರ್ಥಿಸಿಹ,
ಭೋಗದಾಸೆಗೆ ಸೋತು ಮೈಮರೆತು ಬಾಗುತಿಹ,
ವಿಷಯ ವಾಂಛೆಯ ಸುಳಿಗೆ ಮರಮರಳಿ ಬೀಳುತಿಹ –
ಮನವ ಕಾಮದಿಂ ಬಿಡಿಸಿ ಕಾಯೆನ್ನ ಶ್ರೀ ಹರಿಯೆ.


ಧೃಡದ ಭಕುತಿಯನಿತ್ತು; ಚಿತ್ತ ಶುದ್ಧಿಯನಿತ್ತು,
ನಿನ್ನ ನಾಮವ ನಂಬಿ ಬಾಳುವಾಸೆಯನಿತ್ತು,
ಮತಿಗೆಡದೆ ತೊಡಕುಗಳ ದಾಟುವಾ ಬಲವಿತ್ತು,
ಧೃತಿಗೆಡದೆ ಕಷ್ಟಗಳ ಸೈರಿಸುವ ಛಲವಿತ್ತು,
ದಯೆಯಿರಿಸಿ ನೀನಿನ್ನು ಕಾಯೆನ್ನ ಶ್ರೀ ಹರಿಯೆ.

No comments:

Post a Comment