Wednesday, 9 September 2015

"ಉದ್ಭಟಕಾವ್ಯ"ವೆಂಬ "ಶೃಂಗಾರಸಾರ"

ಎಷ್ಟೋ ಸಾರಿ ಹಾಗಾಗುವುದುಂಟು, ತೀರ ಅನಿರೀಕ್ಷಿತವಾಗಿ ಯಾವುದೋ ಅಪರೂಪದ ವಸ್ತುವೊಂದು ನಮ್ಮ ಕೈಗೆ ಸಿಕ್ಕುಬಿಡುತ್ತೆ. ಆ ನಂತರ ಅದೆಷ್ಟೋ ದಿನಗಳವರೆಗೂ ಅದರ ಬಗೆಗಿನ ಸೆಳೆತ... ಅದರ ಗುಂಗಿನಲ್ಲೇ ಕಾಲ ಕಳೆಯುವಂತಾಗುತ್ತದೆ. ಇತ್ತೀಚೆಗೆ ನನಗೂ ಹೀಗೆಯೇ ಆಯಿತು.
ಮೊನ್ನೆ ಒಮ್ಮೆ ರ‍್ಯಾಕಿನಲ್ಲಿದ್ದ ಪುಸ್ತಕಗಳನ್ನು ಜೋಡಿಸುತ್ತಿರುವಾಗ ಅವುಗಳಲ್ಲಿ ಒಂದು ಪುಸ್ತಕ ಕೆಳಗೆ ಬಿತ್ತು. ಕೆಳಮುಖವಾಗಿ ಬಿದ್ದಿದ್ದ ಪುಸ್ತಕವನ್ನೆತ್ತಿಕೊಂಡು, ಅರೆತೆರೆದಿದ್ದ ಅದರ ಪುಟವೊಂದನ್ನು ನೋಡಿದಾಗ ಕೆಲವು ಸೊಗಸಾದ ಪದ್ಯಗಳು ಕಂಡವು. ಆಗಷ್ಟೇ ಪುಸ್ತಕದ ಹೆಸರನ್ನು ನೋಡಿದ್ದು - "ಸೋಮರಾಜನ ಉದ್ಭಟಕಾವ್ಯ".!
ಕಳೆದ ವರ್ಷದ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಖರೀದಿಸಿದ್ದೆ ಇದನ್ನು. ಓದಲು ಮಾತ್ರ ಆವರೆಗೆ ಕಾಲ ಕೂಡಿಬಂದಿರಲಿಲ್ಲ. ಪುಸ್ತಕವನ್ನೇ ನೋಡುತ್ತ ನೋಡುತ್ತ - ಯಾರು ಈ ಸೋಮರಾಜ. ಈ ಉದ್ಭಟನಾರು ಎಂಬ ಕುತೂಹಲ ಮೂಡಿದ್ದರಿಂದ ಓದಲು ಶುರು ಮಾಡಿದೆ. ಆ ಕೃತಿಯ ಪರಿಚಯ ಈ ಲೇಖನದಲ್ಲಿ:

ಕವಿ, ಕಾಲ ವಿಚಾರ:
ಉದ್ಭಟಕಾವ್ಯವನ್ನು ರಚಿಸಿದವನು ಸೋಮರಾಜನೆಂಬ ವೀರಶೈವ* ಕವಿ. ಈತ ಬರಿಯ ಕವಿಯಾಗಿರದೆ ಅರಸನೂ ಆಗಿದ್ದಿರಬೇಕು. ಕೃತಿಯ ಆದಿಯಲ್ಲಿ ತನ್ನ ವಂಶದ ಬಗೆಗೆ ಹೇಳಿಕೊಳ್ಳುವಾಗ ಹಾಗೂ ಕೃತಿಯ ಹಲವು ಕಡೆಗಳಲ್ಲಿ ತನ್ನನ್ನು ಸೋಮರಾಜ, ಸೋಮನೃಪ, ಸೋಮಭೂಮೀಶ್ವರ‍, ಸೋಮರಾಜೇಂದ್ರ ಎಂದು ಕರೆದುಕೊಂಡಿದ್ದಾನೆ. 
ತನ್ನ ವಂಶದ ಹಿರಿಮೆಯನ್ನು ಕವಿ ಹೀಗೆ ಹೇಳಿಕೊಂಡಿದ್ದಾನೆ: "ಚಂದ್ರವಂಶದಲ್ಲಿ ಜನಿಸಿದ ತಿರುಮಲ ಮಹಾರಾಜನ ಮಗ ರಾಯಣ. ಈ ರಾಯಣಭೂಪನ ಮಗ ರಾಜಶ್ರೇಷ್ಠನಾದ ಚಂದ್ರಶೇಖರ ಎಂಬುವವನು. ಆ ಚಂದ್ರಶೇಖರ ರಾಜನ ಮಗನೇ ಸೋಮರಾಜ."
ಈ ಪ್ರವರದಲ್ಲಿ ಬರುವ ವಿವರದಿಂದ ಸೋಮರಾಜನು ಚಂದ್ರವಂಶಕ್ಕೆ ಸೇರಿದ ದೊರೆಯೆಂದು ತಿಳಿದುಬರುತ್ತದೆಯಾದರೂ
, ಇವನು ಹಾಗೂ ಇವನ ಪೂರ್ವಿಕರು ಯಾವ ಪ್ರಾಂತವನ್ನು ಆಳುತ್ತಿದ್ದರೆಂದು ತಿಳಿಯುವುದಿಲ್ಲ. ಆ ಬಗ್ಗೆ ಸೋಮರಾಜನು ಹೆಚ್ಚಿಗೆ ಏನನ್ನೂ ಹೇಳಿಕೊಂಡಿಲ್ಲ. ಆದರೂ ಕೃತಿಯಲ್ಲಿ ಕುಂತಳದೇಶವನ್ನೂ, ಪಂಪಾಕ್ಷೇತ್ರದ ಸೌಂದರ್ಯ, ಮಹಿಮೆಯನ್ನೂ ಕುರಿತು ಮನದುಂಬಿ, ಅತಿ ಪ್ರೀತಿ-ಹೆಮ್ಮೆಯಿಂದ ವರ್ಣಿಸಿರುವುದನ್ನು ನೋಡಿದರೆ ಬಹುಶಃ ತುಂಗಾನದಿಯ ಹತ್ತಿರದ್ದೇ ಯಾವುದಾದರೂ ಪ್ರಾಂತವನ್ನು ಸೋಮದೇವನ ವಂಶದವರು ಆಳುತ್ತಿದ್ದಿರಬೇಕೆಂದು ಊಹಿಸಬಹುದಾಗಿದೆ. ("ಈ ವಂಶದ ಅರಸರು ಎಲ್ಲಿ ರಾಜ್ಯವಾಳುತ್ತಿದ್ದರೋ ತಿಳಿಯದು. ಆದರೆ, ಪಶ್ಚಿಮ ತೀರದಲ್ಲಿ ಆಳುತ್ತಿದ್ದ ವೀರಶೈವ ಮತಾವಲಂಬಿಗಳಾದ ಚೌಟರಾಜರಲ್ಲಿ ತಿರುಮಲರಾಯ, ಚಂದ್ರಶೇಖರ ಎಂಬ ಹೆಸರುಗಳು ದೊರೆಯುತ್ತದೆ" ಎಂದು ಕವಿಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ).

ಇನ್ನು, ಕೃತಿಯ ಪೀಠಿಕೆಯಲ್ಲಿ ಸೋಮರಾಜ ತನ್ನ ಪೂರ್ವಸೂರಿಗಳ ಪೈಕಿ ಹರಿಹರನನ್ನೂ, ಕೆರೆಯ ಪದ್ಮರಸನನ್ನೂ ಪ್ರೀತಿಯಿಂದ ಸ್ಮರಿಸಿದ್ದಾನೆ. ಮೇಲಾಗಿ, ಈ ಕೃತಿಯ ಮೂಲ ಕಥೆಯನ್ನೂ ಹಾಗೂ ಕೃತಿಯ ನಡೆಗೆ ಹೊಂದುವಂತೆ ಸಾಂದರ್ಭಿಕವಾಗಿ ಬರುವ ಇತರೆ ಶಿವಶರಣರ ಕಥೆಗಳಿಗೂ ಕೂಡ ಹರಿಹರ ವಿರಚಿತ ರಗಳೆಗಳೇ ಮೂಲವಿರಬೇಕೆಂದು (ನನಗೆ) ತೋರುತ್ತದೆ. *ಹರಿಹರ ಹಾಗೂ ಅಲ್ಲಮಪ್ರಭುದೇವರ ಪ್ರಭಾವ ಈತನ ಮೇಲೆ ಬಹುವಾಗಿ ಇರುವುದನ್ನು ನೋಡಿದರೆ ಈತನೊಬ್ಬ ವೀರಶೈವ ಕವಿ/ ದೊರೆಯಾಗಿದ್ದಿರಬೇಕೆಂದು ಊಹಿಸಬಹುದು.

ಗುರುವಲ್ಲಮಾಂಕ ನಾಮಸ್ಮರಣಮನೊಂದೊಂದು ನೆವದೊಳ್ ಅಭಿನುತಿಗೈವೆಂ "ವರವಾಣಿ ಸೋಮಭೂಮೀಶ್ವರ, ಭಾಪುರೆ!" ಎಂದು ಸುಜನತತಿ ಕೀರ್ತಿಪಿನಂ. (ಗುರುವಾದ ಅಲ್ಲಮಾಂಕನ ನಾಮವನ್ನು ಸ್ಮರಿಸಿ, ಆಹಾ, ವಾಣಿಯ/ವಿದ್ಯಾಧಿದೇವತೆಯ ವರವನ್ನು ಪಡೆದ ಸೋಮರಾಜನೆ, ಭೇಷ್! ಎಂದು ವಿದ್ವಜ್ಜನ ಕೀರ್ತಿಸುವ ಹಾಗೆ ಈ ಕೃತಿಯನ್ನು ರಚಿಸುವೆನು)
ಸೋಮ ಕವಿ ಅಲ್ಲಮನನ್ನು ಗುರುಸ್ಥಾನದಲ್ಲಿಟ್ಟು ಸ್ಮರಿಸಿದ್ದಾನೆ. ಅಷ್ಟೇ ಅಲ್ಲದೆ, ಅಲ್ಲಮ ಪ್ರಭುವಿನ ಬಗೆಗೆ ಈತನಿಗೆ ಅಪಾರವಾದ ಭಕ್ತಿಯಿತ್ತೆಂಬುದು ಈತ ತನ್ನ ಕೃತಿಯನ್ನು ಅಲ್ಲಮನಿಗೇ ಅರ್ಪಿಸಿ ರಚಿಸಿರುವುದರಿಂದ ಸ್ಪಷ್ಟವಾಗುತ್ತದೆ. ಅದೂ ಅಲ್ಲದೆ ಪ್ರತಿ ಆಶ್ವಾಸದ ಕೊನೆಯ ಪದ್ಯದಲ್ಲಿಯೂ ಅಲ್ಲಮಪ್ರಿಯ ಲಿಂಗದೇವನನ್ನು ಸ್ಮರಿಸಿದ್ದಾನೆ.

ಒಟ್ಟಾರೆಯಾಗಿ, ಈ ಕೃತಿ ಹಾಗೂ ಸೋಮಕವಿಯ ಪಾಂಡಿತ್ಯವು ಪ್ರಶಂಸಾರ್ಹವಾಗಿದೆ. ಅವನ ನಂತರದ ಕೆಲವು ಕವಿಗಳಿಗೆ ಸೋಮರಾಜನ ಈ ಕೃತಿ ಸ್ಫೂರ್ತಿ ನೀಡಿದೆ (ಷಡಕ್ಷರಿ ಹಾಗೂ ವೃತ್ತವಿಲಾಸರ ಕೆಲವು ಪದ್ಯಗಳು ನೇರವಾಗಿ ಈತನ ಪದ್ಯಗಳನ್ನೇ ಅನುಸರಿಸಿದಂತಿವೆ). ಇನ್ನು, ಪೂರ್ವಕವಿಗಳ ಕಾವ್ಯಗಳ ಬಗೆಗೆ ಸೋಮರಾಜನಿಗಿದ್ದ ಆಳವಾದ ಜ್ಞಾನ ಈ ಕೃತಿಯ ಆದ್ಯಂತವಾಗಿ ಕಂಡುಬರುತ್ತದೆ.

ಕೃತಿಯ ಆದಿಯಲ್ಲಿ ತನ್ನ ಕಾವ್ಯದ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾನೆಯಾದರೂ ಕೃತಿಯ ಕೊನೆಯ ಆಶ್ವಾಸದಲ್ಲಿ ಸೋಮ ಕವಿ ವಿನಯದಿಂದ ಹೀಗೆ ಮನವಿ ಮಾಡಿಕೊಂಡಿದ್ದಾನೆ: "ನಾನೇನೂ ಕವಿಯೂ ಅಲ್ಲ, ಶಾಸ್ತ್ರಜ್ಞಾನಿಯೂ ಅಲ್ಲ, ಮಹಾವಾಗ್ಮಿಯೂ ಅಲ್ಲ. ಶಿವಭಕ್ತರ ಪಾದಕಮಲದ ರಜವೆಂಬ ಪವಿತ್ರ ವಿಭೂತಿಯನ್ನು ಧರಿಸಿ ಈ ಕೃತಿಯನ್ನು ನನಗೆ ತಿಳಿದ ಮಟ್ಟಿಗೆ ನಾನು ಹೇಳಿದ್ದೇನೆ/ರಚಿಸಿದ್ದೇನೆ. ವಿದ್ವಜ್ಜನರು ತಮ್ಮ ಕೋಪತಾಪಗಳನ್ನು ಬದಿಗಿಟ್ಟು ಸಂಪ್ರೀತಿಯಿಂದ ಇದನ್ನು ಆಲಿಸಬೇಕು".

ಕೃತಿಯ ಕೊನೆಯ ವೃತ್ತದಲ್ಲಿ

"ಜನನಾಥೋತ್ತಮ-ಸೋಮರಾಜನುಸಿರ್ದೀ ಕಾವ್ಯಂ ವಲಂ ಶಾಲೀವಾ
ಹನಶಾಕಾಬ್ದಮದೈದೆ ಸಾಸಿರದನೂರ್ಸಂದನಾಲ್ವತ್ತನಾ
ಲ್ಕನೆಯಾರಂಜಿತ ಚಿತ್ರಭಾನುವವರಾಶ್ವೀಜೋಚ್ಛಿತೈಕಾದಶೀ
ವನಜಾರಾತಿತನೂಜವಾಸರದೊಳಾದತ್ತಲ್ಲಮಂಗರ್ಪಿತಂ"

ಎಂದಿರುವುದರಿಂದ, ಈ ಕೃತಿಯು "ಜನನಾಥೋತ್ತಮನಾದ ಈ ಸೋಮರಾಜನು ಹೇಳಿದ ಈ ಕಾವ್ಯವು ಶಾಲೀವಾಹನ ಶಕೆ ೧೧೪೪ (ಕ್ರಿ. ಶ ೧೨೨೨)ರ, ಚಿತ್ರಭಾನು ಸಂವತ್ಸರದ ಆಶ್ವೀಜ ಮಾಸದ ಏಕಾದಶಿಯಂದು, (ಬುಧವಾರ?) ಸಮಾಪ್ತಿಯಾಯಿತು"
ಹಾಗಾಗಿ ಸೋಮರಾಜನ ಕಾಲವನ್ನು ೧೨ನೇ ಶತಮಾನದ ಉತ್ತರಾರ್ಧ - ೧೩ರ ಪೂರ್ವಾರ್ಧ ಎಂದು ಭಾವಿಸಬಹುದು.

ಕೃತಿಯ ಬಗ್ಗೆ:
ಮೂಲತಃ ಸೋಮರಾಜನು ಈ ಕೃತಿಯನ್ನು ಉದ್ಭಟಕಾವ್ಯವೆಂದು ಕರೆಯದೆ "ಶೃಂಗಾರಸಾರ"ವೆಂದೇ ಕರೆದಿದ್ದಾನೆ ("ಶೃಂಗಾರಸಾರಮೆಂದೀ ಮಂಗಳಕೃತಿ-ನಾಮಮೀ ಕೃತಿಗೆ ವಲ್ಲಭನುತ್ತುಂಗವಿರೂಪಾಕ್ಷಂ ಸುಧೆಯಂ ಗೆಲಲೀ ಕೃತಿಯನುಸುರಿದಂ ಸೋಮನೃಪಂ). ಅದಾಗಿಯೂ, ಕಥೆಯು ಉದ್ಭಟರಾಜನ ಕುರಿತಾಗಿ ಇರುವುದರಿಂದ ಕನ್ನಡ ಕಾವ್ಯಲೋಕದಲ್ಲಿ ಇದು ಉದ್ಭಟಕಾವ್ಯವೆಂದೇ ಪರಿಚಿತವಾಗಿದೆ.

ಹರಿಹರದೇವ ವಿರಚಿತ ಓಹಿಲಯ್ಯನ ರಗಳೆ ಹಾಗೂ ಉದ್ಭಟಯ್ಯನ ರಗಳೆ ಎಂಬೀ ರಗಳೆಗಳು ಈ ಕೃತಿಗೆ ಮೂಲವಿರಬೇಕೆನಿಸುತ್ತದೆ. ಏಕೆಂದರೆ ಓಹಿಲಯ್ಯ ಹಾಗೂ ಉದ್ಭಟರನ್ನು ಕುರಿತು (ಕನ್ನಡದಲ್ಲಿ) ಮೊದಲು ರಚಿಸಿದವನು ಹರಿಹರನೇ. ಹಾಗಲ್ಲದೆ ಬೇರೆ ಭಾಷೆಯ ಇನ್ನಾವುದಾದರೂ ಕೃತಿಯಿಂದಲೂ ಸ್ಫೂರ್ತಿ ಪಡೆದಿದ್ದಿರಬಹುದು.
ಏಕೆಂದರೆ, ಹರಿಹರನ ಉದ್ಭಟಯ್ಯನ ರಗಳೆ ತೀರ ಸಣ್ಣ ಕೃತಿ. ಅದರ ವಿಸ್ತಾರವಾದರೂ ಕೇವಲ ೨೦೪ ಸಾಲುಗಳಷ್ಟೇ. ಓಹಿಲಯ್ಯನ ರಗಳೆ ವಿಸ್ತಾರವಾಗಿಯೇ ಇದೆಯಾದರೂ, ಹರಿಹರನ ರಗಳೆಗೆ ಹೋಲಿಸಿದರೆ ಓಹಿಲೇಶ್ವರನ ಕಥೆ ಉದ್ಭಟಕಾವ್ಯದಲ್ಲಿ ಸ್ವಲ್ಪ ಭಿನ್ನವಾಗಿಯೇ ಇದೆ. ಇದಕ್ಕೆ ಕಾರಣ ಬೇರೆ ಕೃತಿಯ ಮೂಲವೋ ಅಥವಾ ಸೋಮರಾಜನ ಸ್ವಂತ ಸೃಷ್ಟಿಯೋ ತಿಳಿಯದು. ಇರಲಿ, ಮುಖ್ಯವಾಗಿ, ಹರಿಹರನ ರಗಳೆಯಲ್ಲಿ ಕೇವಲ ೨೦೪ ಸಾಲುಗಳ ವಿಸ್ತಾರವುಳ್ಳ ಉದ್ಭಟನ ಕಥೆಯನ್ನು ಸುಂದರವಾಗಿಯೂ ಸ್ವಾರಸ್ಯಕರವಾಗಿಯೂ ಇರುವ (೧೨ ಆಶ್ವಾಸಗಳನ್ನುಳ್ಳ) ಮಹಾಕಾವ್ಯವನ್ನಾಗಿ ಹೆಣೆದಿರುವ ಸೋಮರಾಜನ ಕಾವ್ಯಶಕ್ತಿಯನ್ನು ಮೆಚ್ಚಲೇಬೇಕು.
ಹೀಗೆ ಕಥೆಯ ವಿಸ್ತಾರವನ್ನು ಹೆಚ್ಚಿಸಲೋಸುಗ ಆತ ಹಲವಾರು ಉಪಾಖ್ಯಾನಗಳನ್ನೂ ಸೇರಿಸಿದ್ದಾನೆ. ಕಥೆಯ ಸ್ವಾರಸ್ಯಕ್ಕೆ ತಕ್ಕಂತೆ ಹೊಸಹೊಸ ಸನ್ನಿವೇಶಗಳನ್ನು ಸೃಷ್ಟಿಸಿದ್ದಾನೆ. ತನ್ನ ತಾಯ್ನಾಡ ಸೊಗಸನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿ ಹೊಗಳಲು ಅನುವಾಗುವಂತೆ, ಕಥಾಸಂದರ್ಭಕ್ಕೆ ಹೊಂದುವಂತೆ - ಘೂರ್ಜರ ದೇಶದ ದೊರೆಯಾದ ಉದ್ಭಟನನ್ನು ನಮ್ಮ ನೆಚ್ಚಿನ ಪಂಪಾಕ್ಷೇತ್ರಕ್ಕೆ ಕರೆತಂದಿದ್ದಾನೆ. ಒಟ್ಟಾರೆಯಾಗಿ, ಮಹಾಕಾವ್ಯದ ೧೮ ಲಕ್ಷಣಗಳೂ ಮೇಳೈಸುವಂತೆ ಈ ಕೃತಿಯನ್ನು ರಚಿಸಿದ್ದಾನೆ.

ಉದ್ಭಟಕಾವ್ಯದ ಮೇಲೆ ಬೇರೆ ಕೃತಿಗಳ ಪ್ರಭಾವ, ಕೃತಿಯ ವಿಶೇಷತೆ:
ಈ ಹಿಂದೆಯೇ ಹೇಳಿದಂತೆ ಹರಿಹರನ ರಗಳೆಗಳ ಪ್ರಭಾವ ಈ ಕೃತಿಯ ಮೇಲೆ ಗಾಢವಾಗಿದೆ. ಕೊನೆಯ ಎರಡು ಆಶ್ವಾಸಗಳಲ್ಲಿ ಬರುವ ಅನೇಕ ಶಿವಶರಣರ ಉಪಕತೆಗಳಿಗೆ ಹರಿಹರ ವಿರಚಿತ ರಗಳೆಗಳೇ ಆಧಾರವಾಗಿರಬೇಕು.
 ಅದಲ್ಲದೆ, ನನಗೆ ಕಂಡುಬಂದಂತೆ - ನಾಗವರ್ಮನ ಕರ್ಣಾಟಕ ಕಾದಂಬರಿಯ ಪ್ರಭಾವ ಸ್ವಲ್ಪಮಟ್ಟಿಗಾದರೂ ಈ ಕೃತಿಯ ಮೇಲಿದೆ. ಕಥೆಗೆ ಪೂರಕವಾಗಿ ಬರುವ ಶಾಪಗ್ರಸ್ತ ಋಷಿಕುವರನ - ಗಿಳಿಯ ಪಾತ್ರ - ಕರ್ಣಾಟಕ ಕಾದಂಬರಿಯನ್ನು ನೆನಪಿಗೆ ತಾರದೇ ಇರದು. ಇನ್ನು ಕಥಾನಾಯಕ-ನಾಯಕಿ ಉದ್ಭಟ-ಸೌಂದರವತಿಯರ ಪ್ರೇಮ-ವಿರಹಾತಿರೇಕಗಳು ಚಂದ್ರಾಪೀಡ-ಕಾದಂಬರಿಯರ ನವಿರಾದ ಪ್ರೇಮ ಸನ್ನಿವೇಶಗಳನ್ನು ನೆನಪಿಸುತ್ತವೆ.

ಕಥೆಯ ಹರಿವಿಗೆ ಪೂರಕವಾಗುವ ಸನ್ನಿವೇಶವೊಂದರಲ್ಲಿ ಸಾಂದರ್ಭಿಕವಾಗಿ ಪಂಚಕರ್ಮವೇ ಮುಂತಾದ ಕೆಲವು ತಾಂತ್ರಿಕ ಆಚರಣೆ-ವಿಧಿಗಳನ್ನು ವರ್ಣಿಸಿದ್ದಾನೆ. ಬಹುಶಃ ಇದು ಕವಿಯ ಸಮಕಾಲೀನವಾದ ಯಾವುದಾದರೂ ಪಂಥದ ಆಚರಣೆಗಳಾಗಿದ್ದಿರಬಹುದು. ಹಾಗೆಯೇ ಸೌಂದರವತಿ-ಉದ್ಭಟದೇವರ ಮದುವೆಯ ಸಂದರ್ಭದಲ್ಲಿ, ಮದುವೆಯಾದ ನಾಲ್ಕನೇ ದಿನ ಕೊಡುವ ನಾಕಬಲಿ, ಕಂಬವಲಿ ಮುಂತಾದ ಬಲಿಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಬಹುಶಃ ಈ ಪದ್ಧತಿಯೂ ಆಗ ಆಚರಣೆಯಲ್ಲಿತ್ತೊ ತಿಳಿಯದು. ಇಂಥವೇ ಹಲವು ಉಲ್ಲೇಖಗಳು ವಿಶೇಷವಾಗಿ ತೋರಿ ನನ್ನ ಗಮನ ಸೆಳೆದವು.

ಇನ್ನು ಕೃತಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ - ಶೃಂಗಾರಸಾರವೆಂಬ ಈ ಉದ್ಭಟಕಾವ್ಯವು ೧೨ ಆಶ್ವಾಸಗಳನ್ನುಳ್ಳ ಒಂದು ಚಂಪೂಕೃತಿ. ಹಿಂದಿನ ಕವಿಗಳಂತೆ ಅತಿಯಾಗಿ ಸಂಸ್ಕೃತಭೂಯಿಷ್ಠವಾಗಿರದ, ಸರಳವಾಗಿಯೂ ಸುಂದರವಾಗಿಯೂ ಇರುವ ವೃತ್ತ-ಕಂದಪದ್ಯಗಳು ಓದಲು ಸೊಗಸೆನಿಸುವವು. ಕನ್ನಡ ಜಾತಿಗೆ ಸೇರಿದ ಹಲವಾರು ವೃತ್ತಗಳಿರುವುದೂ ವಿಶೇಷವೇ. ಸ್ತುತಿ-ಗೀತೆಗಳ ಸಂದರ್ಭದಲ್ಲಿಯಾದರೆ ಮಂದಾನಿಲ, ಲಲಿತ ರಗಳೆಗಳನ್ನು ವಿಪುಲವಾಗಿಯೇ ಬಳಸಿದ್ದಾನೆ ಕವಿ. ಇಂತಹ ಸನ್ನಿವೇಶಗಳಲ್ಲಿ ರಗಳೆಗಳ ಬಳಕೆ ಸಾಮಾನ್ಯವೇ. ಆದರೆ, ಮುಖ್ಯವಾಗಿ ನನ್ನ ಗಮನ ಸೆಳೆದದ್ದು ತ್ರಿಪದಿಗಳು. ವಿಹಾರಕ್ಕೆಂದು ಹೊರಟ ಉದ್ಭಟದೇವನು ವೇಶ್ಯಾವೀಧಿಯ ಕಡೆಯಿಂದ ನಡೆದುಬರುವಾಗಿನ ವರ್ಣನೆಯ ಪಾತ್ರವನ್ನು ಒಂದಷ್ಟು ತ್ರಿಪದಿಗಳು ವಹಿಸಿವೆ. ಇದು ನನಗೆ ಹೊಸತೆನಿಸಿತು.

ಕಥಾಸಾರ:
ಮೇರುಪರ್ವತದ ದಕ್ಷಿಣ ದಿಶೆಯಲ್ಲಿರುವ ಘೂರ್ಜರದೇಶದ ಭಲ್ಲಕೀನಗರದ ಅರಸು ಉದ್ಭಟದೇವ. ಒಂದು ದಿನ ಈತನನ್ನು ಕಾಣಲು ಋಷಿಕುಮಾರನೊಬ್ಬ ಬರುತ್ತಾನೆ. ಆತ ಉದ್ಭಟನನ್ನು - ತನ್ನ ಗುರುಗಳಾದ ದೇವಲ ಮಹರ್ಷಿಗಳು ನಡೆಸುತ್ತಿರುವ ಯಾಗಕ್ಕೆ ತೊಂದರೆ ಕೊಡುತ್ತಿರುವ ನಿಘರ್ಜನೆಂಬ ಅಸುರನನ್ನು ಸಂಹರಿಸಿ, ಯಾಗವನ್ನು ನಿರ್ವಿಘ್ನವಾಗಿ ನೆರವೇರುವಂತೆ ಮಾಡಲು - ಯಾಗದ ರಕ್ಷಣೆಗಾಗಿ - ಪಂಪಾಕ್ಷೇತ್ರಕ್ಕೆ ಬರಬೇಕೆಂದು ಬಿನ್ನವಿಸುತ್ತಾನೆ. ಅದಕ್ಕೆ ಸಮ್ಮತಿಸಿದ ಉದ್ಭಟನು ಪಂಪಾಕ್ಷೇತ್ರಕ್ಕೆ ಬಂದು ನಿಘರ್ಜನನ್ನು ಕೊಂದು, ದೇವಲ ಮಹರ್ಷಿಗಳು ಸಂಕಲ್ಪಿಸಿದ ಯಜ್ಞ ನಿರ್ವಿಘ್ನವಾಗಿ ನೆರವೇರುವಂತೆ ಮಾಡುತ್ತಾನೆ.

ಹಾಗಿರಲು ಒಂದು ದಿನ ಬೇಟೆಗಾರನೊಬ್ಬನ ಬಲೆಯಲ್ಲಿ ಸಿಲುಕಿ ಸಾಯಲಿದ್ದ ಗಿಳಿಯೊಂದನ್ನು ಉದ್ಭಟನು ರಕ್ಷಿಸುತ್ತಾನೆ. ಆ ಗಿಳಿಯಾದರೊ ಮನುಷ್ಯರಂತೆಯೇ ಮಾತನಾಡಬಲ್ಲ ಗಿಳಿಯಾಗಿತ್ತು. ಅದರ ಪೂರ್ವಾಪರಗಳ ಬಗ್ಗೆ ಉದ್ಭಟನು ವಿಚಾರಿಸಿದಾಗ ಗಿಣಿಯು - ತನ್ನ ಹೆಸರು ಶುಕನೆಂದೂ, ತಾನು ಚಿದಂಗ ಮುನಿಯ ಶಿಷ್ಯನೆಂದೂ, ತನ್ನ ಗುರುಭಕ್ತಿಯಲ್ಲಿ ಲೋಪವಾಗಿದ್ದರಿಂದ ’ಗಿಳಿಯಾಗು...’ ಎಂದು ತನ್ನ ಗುರುವು ಶಾಪವಿತ್ತುದಾಗಿಯೂ ತನ್ನ ಕತೆಯನ್ನು ವಿವರಿಸಿತು.
ಶಾಪವಿಮೋಚನೆಯ ಬಗೆ ಹೇಗೆಂದು ಉದ್ಭಟನು ಕೇಳಿದಾಗ - "ಪಾರ್ವತೀ ದೇವಿಯ ವರಪ್ರಸಾದದಿಂದ ಜನಿಸಿದ ಕನ್ಯೆಯು ಅನಿರೀಕ್ಷಿತವಾಗಿ ನಿನ್ನನ್ನು ಮುಟ್ಟಿದಾಗ ಗಿಳಿರೂಪದಲ್ಲಿದ್ದರೂ ನಿನಗೆ ವಾಕ್ಛಕ್ತಿ ಉಂಟಾಗುತ್ತದೆಯೆಂದೂ, ಅದೇ ಕನ್ಯೆಯ ವಿವಾಹದ ನಾಲ್ಕನೆಯ ದಿನದ ಓಕುಳಿಯಾಟದಲ್ಲಿ ನೀನು ಒದ್ದೆಯಾದ ಒಡನೆಯೇ ನಿನಗೆ ಶಾಪವಿಮೋಚನೆಯಾಗುವುದು" ಎಂದೂ ತನ್ನ ಗುರುಗಳು ಉಃಶಾಪವನ್ನು ಸೂಚಿಸಿದ್ದಾರೆಂದು ಗಿಳಿಯು ಹೇಳುತ್ತದೆ.

ತಂಜಾವೂರಿನಲ್ಲಿ ಪಾರ್ವತಿ ದೇವಿಯ ವರಪ್ರಸಾದದಿಂದ ಜನಿಸಿದ - ಸೌಂದರವತಿಯೆಂಬ - ಒಬ್ಬ ಕನ್ಯೆಯಿರುವಳೆಂದೂ, ಹಿಂದೆ ಒಂದು ದಿನ ಆಕೆಯ ಸ್ಪರ್ಶದಿಂದಲೇ ಗಿಳಿಯ ರೂಪದಲ್ಲಿದ್ದ ತನಗೆ ವಾಕ್ಚಾತುರ್ಯ ಶಕ್ತಿಯುಂಟಾಯಿತೆಂದೂ ಗಿಳಿಯು ಹೇಳುತ್ತದೆ. ಅದೂ ಅಲ್ಲದೆ, ಅನುಪಮ ಸೌಂದರ್ಯವುಳ್ಳ ಆ ಸೌಂದರವತಿಗೆ ಉದ್ಭಟನೇ ಸೂಕ್ತ ವರನೆಂದೂ, ಅವನ ಸಮ್ಮತಿಯಿರುವುದಾದರೆ ಅವರಿಬ್ಬರ ವಿವಾಹವನ್ನು ತಾನು ನೆರವೇರುವಂತೆ ಮಾಡುವುದಾಗಿ ಗಿಳಿಯು ತಿಳಿಸುತ್ತದೆ. ಉದ್ಭಟನು ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ಮುಂದೆ ಉದ್ಭಟ-ಸೌಂದರವತಿಯರ ವಿವಾಹವಾಗುತ್ತದೆ. ಅವರ ಮದುವೆಯಾದ ನಾಲ್ಕನೆಯ ದಿನ ನಡೆದ ಓಕುಳಿಯಾಟದ ನೀರು ತನ್ನ ಮೈಮೇಲೆ ಬೀಳಲು, ಶುಕನು ಮುಂಚಿನ ರೂಪವನ್ನು ಪಡೆದು, ಎಲ್ಲರನ್ನೂ ಹರಸಿ ತನ್ನ ಗುರುವಿನ ಬಳಿಗೆ ಹೊರಡುತ್ತಾನೆ. ಉದ್ಭಟ-ಸೌಂದರವತಿಯರು ಭಲ್ಲಕೀನಗರಕ್ಕೆ ಬರುತ್ತಾರೆ.
(ಮುಂದಿನ ಕೆಲವು ಆಶ್ವಾಸಗಳಲ್ಲಿ ಕತೆಯ ಹರಿವು ಕೃತಿಯ ಹೆಸರಿಗೆ ತಕ್ಕಂತೆ ಶೃಂಗಾರಸಾರವಾಗಿಯೇ ತೋರುತ್ತದೆ)

ಒಂದು ದಿನ ಉದ್ಭಟ-ಸೌಂದರವತಿಯರು ಪಗಡೆಯಾಡುತ್ತಿದ್ದಾಗ ಉದ್ಭಟನು ಏನನ್ನೋ ನೆನೆದು ನಗುತ್ತಾನೆ. ಆ ನಗುವಿಗೆ ಕಾರಣವೇನೆಂದು ತೋಚದೆ ಸೌಂದರವತಿಗೆ ಉದ್ಭಟದೇವನ ನಗುವಿನ ಹಿಂದಿರುವ ಕಾರಣವನ್ನು ತಿಳಿಯಬೇಕೆಂಬ ಕುತೂಹಲವೂ, ಸ್ವಲ್ಪಮಟ್ಟಿಗೆ ಕೋಪವೂ ಉಂಟಾಗುತ್ತದೆ. ತನ್ನ ಗಂಡ ತನ್ನನ್ನು ನೋಡಿಯೇ ನಗುತ್ತಿದ್ದಾನೆ ಎಂಬ ಶಂಕೆ ಆಕೆಯದು. ಅದಕ್ಕೇ ಮುನಿಸು.
ತಾನು ಸೌಂದರವತಿಯನ್ನು ನೋಡಿ ನಕ್ಕುದಲ್ಲವೆಂದು ಉದ್ಭಟ ತಿಳಿಸುತ್ತಾನೆ. ಹಾಗಿದ್ದರೆ ಆ ನಗುವಿಗೆ ಕಾರಣವೇನೆಂದರೆ - ಶಿವಶರಣ ಓಹಿಲೇಶ್ವರನು ಆ ಸದಾಶಿವನನ್ನು ಮೆಚ್ಚಿಸಿ ತಾನೊಬ್ಬನೇ ಸದೇಹವಾಗಿ ಕೈಲಾಸಕ್ಕೆ ಹೋಗುತ್ತಿದ್ದಾನೆಂದೂ, ಅಂತಹ ಶಿವಭಕ್ತನ ಮರುಳನ್ನು ನೆನೆದು ತಾನು ನಕ್ಕುದಾಗಿಯೂ ಉದ್ಭಟನು ತಿಳಿಸುತ್ತಾನೆ (ಸೌಂದರವತಿಗೆ ಓಹಿಲೇಶ್ವರನ ಕತೆಯನ್ನು ವಿಸ್ತಾರವಾಗಿ ಹೇಳಿದ ನಂತರ). ಓಹಿಲೇಶನ ಕತೆಯನ್ನು ಕೇಳಿ ಸೌಂದರವತಿಗೆ ಅಪಾರವಾದ ಭಕ್ತಿ-ಗೌರವಗಳು ಉಂಟಾಗುತ್ತವೆ. ಹಾಗೆಯೇ, ಅಂತಹ ಶಿವಭಕ್ತನನ್ನು ಕುರಿತು ಅಪಹಾಸ್ಯ ಮಾಡುತ್ತಿರುವರಲ್ಲಾ ಎಂದು ಉದ್ಭಟನ ಮೇಲೆ ಸಿಟ್ಟಾಗುತ್ತಾಳೆ. ಅಂತಹ ಮಹಾವ್ಯಕ್ತಿಯನ್ನು ಕುರಿತು ಅವಹೇಳನ ಮಾಡುವ ನೈತಿಕತೆಯಾದರೂ ನಿಮಗಿದೆಯೇ ಎಂದು ಪ್ರಶ್ನಿಸುತ್ತಾಳೆ. ಮುಂಚೆ ಯಾವೊಬ್ಬ ಶಿವಭಕ್ತನಾದರೂ ಹಾಗೆ ಕೈಲಾಸಕ್ಕೆ ಸಂದಿದ್ದಾರೆಯೇ? ಅಂತಹ ಒಬ್ಬನ ಬಗ್ಗೆಯಾದರೂ ನಿಮಗೆ ಗೊತ್ತಿದ್ದರೆ ಹೇಳಿ ಎಂದೂ ಕೇಳುತ್ತಾಳೆ.

ಅದಕ್ಕೆ ಉದ್ಭಟನು ಮುನ್ನ ಶಿವನನ್ನು ಮೆಚ್ಚಿಸಿ ಸಕಲ ಬಾಂಧವರೊಡನೆ, ರಾಜ್ಯದ ಪ್ರಜೆಗಳೊಡನೆ ಸದೇಹವಾಗಿ ಕೈಲಾಸಕ್ಕೆ ಹೋದ ಹಲವಾರು ಶಿವಶರಣರ ಕತೆಗಳನ್ನು ಹೇಳುತ್ತಾನೆ. ಅಂತಹ ಮಹನೀಯರ ನಿದರ್ಶನಗಳಿರುವಾಗ  ಈ ಓಹಿಲೇಶನಾದರೋ ತಾನೊಬ್ಬನೇ ಕೈಲಾಸಕ್ಕೆ ಹೋಗುತ್ತಿದ್ದಾನಲ್ಲಾ ಎಂದು ನೆನಪಾಗಿ ತಾನು ನಕ್ಕುದಾಗಿ ಹೇಳುತ್ತಾನೆ. ಆ ಶರಣರ ಕಥೆಗಳನ್ನೆಲ್ಲ ಕೇಳಿದ ಸೌಂದರವತಿಯ ಹೃದಯ ಭಕ್ತಿಯಿಂದ ತುಂಬುತ್ತದೆ.

ಆದರೂ, "ಅಂತಹ ಮಹಾಭಕ್ತರನ್ನು ಗೇಲಿಮಾಡುವ ಅರ್ಹತೆ ನಿಮಗೇನಿದೆ. ಸದಾ ಸಪ್ತವ್ಯಸನಗಳಲ್ಲಿ ಮುಳುಗಿರುವ ನೀವೆಲ್ಲಿ, ಅವರೆಲ್ಲಿ..? ನೀವೇನಾದರೂ ಅಂತಹ ಮಹತ್ತರ ಕಾರ್ಯ ಮಾಡಲು ಸಮರ್ಥರೇ, ಇಲ್ಲ ತಾನೆ? ಹಾಗಿದ್ದರೆ ಸುಮ್ಮನಿರಿ.." ಎಂದು ಮುಂತಾಗಿ ಉದ್ಭಟದೇವನನ್ನು ಮೂದಲಿಸುತ್ತಾಳೆ. ಅವಳ ಮಾತಿಗೆ ಪ್ರತಿಯಾಗಿ ಉದ್ಭಟನು "ಹಾಗಿದ್ದರೆ ನನ್ನೊಡನೆ ಈಗ ಶಿವಾಲಯಕ್ಕೆ ಬಾ. ನಾನು ಇಂದು ನಮ್ಮ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಹೋಗುವುದನ್ನು ನೀನೂ ನೋಡುವಿಯಂತೆ.." ಎಂದು ನುಡಿದು, ಅವಳನ್ನು ಕರೆದುಕೊಂಡು ಶಿವಾಲಯಕ್ಕೆ ಬರುತ್ತಾನೆ.

ಶಿವಾಲಯವನ್ನು ಹೊಕ್ಕು ಶಿವನನ್ನು ಹೊಸಹೊಸ ಪದ್ಯಗಳಿಂದ ಸ್ತುತಿಸಲು ಶುರು ಮಾಡುತ್ತಾನೆ. ಹಾಗೆ ಅವನು ಒಂದೊಂದು ಪದ್ಯಗಳಿಂದ ಸ್ತುತಿಸಿದಾಗಲೂ ಇಡೀ ನಗರವು ಸಾವಿರ ಯೋಜನದಷ್ಟು ಮೇಲೇರುತ್ತ ಸಾಗಿತು. ಹೀಗೇ ಮೇಲುಮೇಲಕ್ಕೆ ಸಾಗುತ್ತಿರಲು ಸೂರ್ಯನ ಪ್ರಭೆಯು ಕಡಿಮೆಯಾಯಿತು (ಆ ನಗರವು ಸೂರ್ಯನನ್ನೂ ದಾಟಿ ಮುಂದೆ ಹೋಗಿದ್ದರಿಂದ). ಆದರೆ, ಸೂರ್ಯಬಿಂಬವು ಕಣ್ಮರೆಯಾದುದನ್ನು ಕಂಡ ಸೌಂದರವತಿಯು ವಿನೋದದಿಂದ "ಇನ್ನು ಮೇಲೇಳು, ಮನೆಗೆ ಹೋಗೋಣ, ಕತ್ತಲಾಯಿತು" ಎಂದಾಗ, ಉದ್ಭಟನು ಭಕ್ತರ ಮಾತಿನಲ್ಲಿ ಹುಸಿಯುಂಟೆ, ಪ್ರಿಯೆ, ಕಣ್ತೆರೆದು ಮೇಲೆ ನೋಡು ಎಂದು ತೋರಿಸಿದಾಗ ಕೋಟಿ ನಕ್ಷತ್ರಗಳನ್ನು ರಾಶಿಹಾಕಿದಂತೆ ಅತಿಶಯವಾದ ಕಾಂತಿಯನ್ನು ಹರಡುತ್ತ ನಯನಮನೋಹರವಾಗಿದ್ದ ಕೈಲಾಸ ಪರ್ವತವು ಕಂಡಿತು.

ಕೊನೆಗೂ ಉದ್ಭಟನು ತನ್ನ ಇಡೀ ನಗರವನ್ನೇ ಕೈಲಾಸಕ್ಕೆ ಕರೆದುಕೊಂಡುಬಂದಿದ್ದನು. ಆ ನಂತರದಲ್ಲಿ ಶಿವನ ಗಣಸಮೂಹವು ಇವರನ್ನು ಇದಿರ್ಗೊಂಡು ಸ್ವಾಗತಿಸಿ ಶಿವನ ಬಳಿಗೆ ಕರೆದುಕೊಂಡು ಹೋದರು. ಶಿವನು ಅವರೆಲ್ಲರನ್ನೂ ಆಶೀರ್ವದಿಸಿ ಉದ್ಭಟನಿಗೆ ಗಣಪದವಿಯನ್ನು ಅನುಗ್ರಹಿಸಿದನು.

Sunday, 9 August 2015

ಮತ್ತೆ ಅದೇ ಪ್ರಶ್ನೆ!

ಮುಂದೆ ಏನು? ಮತ್ತೆ ಏನು? -
ಮತ್ತೆ ಅದೇ ಪ್ರಶ್ನೆಯು;
ಕೇಳುವ ದನಿ ಮಾತ್ರ ಬೇರೆ,
ಕಾಡುತಿಹುದು ನಿತ್ಯವು.

ಮುಂದುಗಾಣದಂತೆ ಕಣ್ಣ
ಕತ್ತಲೆಯದು ಕವಿದಿದೆ;
ವಿಧಿಯ ಆಟದಲ್ಲಿ ಸಿಲುಕಿ
ಜೀವವಿಂದು ನಲುಗಿದೆ.

………
………

ಯಾವ ಮರುಳೊ ಯಾವ ಭ್ರಮೆಯೊ
ಮನವನಿಂದು ಮುಸುಕಿದೆ;
ಕಣ್ಣೆದುರಿನ ಸತ್ಯವನ್ನು
ತಾನು ಕಾಣದಾಗಿದೆ.

ಕಂಗಳೆರಡು ನೋಟ ಒಂದು -
ಎಂಬ ಸತ್ಯ ಮರೆತಿದೆ
ಯಾವ ಕಣ್ಣಿಗಾವ ಕನಸೊ
ಎಂದು ತಿಳಿಯದಾಗಿದೆ

ಎದೆಯ ತುಂಬ ತುಂಬಿ ನಿಂತ
ಭಯವು ಮತ್ತೆ ಕಾಡಿದೆ;
ಮುಂದುವರೆವ ದಾರಿ ಯಾವ -
ದಿಕ್ಕಿಗೆಂದು ಕೇಳಿದೆ.

ಬಗೆಯನರಿಯೆ ಬೆಳಕನರಿಯೆ
ಎಂದು ಮನವು ತೊಳಲಿದೆ;
ದಾರಿ ತೋರು ಗುರುವೆ ಎಂದು
ದೇವನನ್ನು ಬೇಡಿದೆ.

………
………

ಹೆದರಬೇಡ ಮನವೆ, ಕೇಳು -
ಮುಗಿಯುವುದೀ ರಾತ್ರಿಯು;
ತಮದ ಹಿಂದೆ ಬೆಳಕು ಬಹುದು,
ಇಂದಿಗಿಹುದು ನಾಳೆಯು.

Thursday, 30 July 2015

ವೀರಗಲ್ಲು - ದೊಡ್ಡಗದ್ದವಳ್ಳಿ

"ಸ್ವಸ್ತಿ ಶ್ರೀಮಾನುಮಹಾಮಂಡಳೇಶ್ವರ ಬಿಟ್ಟಿದೇವ……………
[ಡಂ] ಚಿಕ್ಕಬಿಟ್ಟಿದೇವ[ನ] ಆಳ್ದೋನ ರಾಜ್ಯಂ ಬೊಪ್ಪದೇವನ ಕಾಳ
ಗದಲು ಕುದುರೆಗಾಳಗ ಕಾದಿ…………… ಜಯರಾಹು
ತ್ತ ಸುರಲೋಕಪ್ರಾಪ್ತ[ನಾದಂ ಪರಾ]ಭವ ಸಂವಚರ"

ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿರುವ ವೀರಗಲ್ಲು ಶಾಸನ (ಕಾಲ: ಸು ೧೧೨೬-೨೭)

"This damaged hero-stone record is set up in memory of a cavalier (name lost) who died in a battle against (?) Boppadeva during the reign of Chikka Bittideva. It refers to 'mahaamandaleshwara' Bittideva and to the cyclic year Paraabhava. The record is in c. 12th century characters and the date may probably be equated with 1126-27 AD., in the reign of Vishnuvardhana."
~Epigraphia Carnatica

ಕುದುರೆಗಾಳಗದ ದೃಶ್ಯವನ್ನೂ, ಕಾಳಗದಲ್ಲಿ ಮಡಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವನ್ನೂ ಇಲ್ಲಿ ಕಾಣಬಹುದು.

Ref: Epigraphia Carnatica

అలర చంచలమైన ఆత్మలందుండ నీయలవాటు సేసెనీ వుయ్యాల

అలరచంచలమైన ఆత్మలందుండ నీయలవాటు సేసెనీవుయ్యాల
పలుమారునుచ్ఛ్వాస పవనమందుండ నీ భావంబు దెలిపెనీ వుయ్యాల

ఉదయాస్త శైలంబులొనర కంభములైన ఉడుమండలము మోచెనుయ్యాల
అదన ఆకాశపదంబడ్డదూలంబైన అఖిలంబు నిండెనీ వుయ్యాల

పదిలముగ వేదములు బంగారు చేరులై పట్టి వెరపై తోచె వుయ్యాల
వదలకిటు ధర్మదేవత పీఠమై మిగుల వర్ణింపనరుదాయె వుయ్యాల

మేలుకట్లై మీకు మేఘమండలమెల్ల మెరుగునకు మెరుగాయె వుయ్యాల
నీలశైలమువంటి నీ మేనికాంతికి నిజమైన తొడవాయె వుయ్యాల

పాలిండ్లు కదలగా పైయెదలు రాపాడ భామినులు వడినూచు వుయ్యాల
వోలి బ్రహ్మాండములు వొరగువోయని భీతి నొయ్యనొయ్యన వూచిరి వుయ్యాల

కమలకును భూసతికి కదలు-కదలుకు నిన్ను కౌగిలింపగజేసెనుయ్యాల
అమరాంగనలకు నీ హావభావ విలాసమందంద జూపెనీ వుయ్యాల

కమలాసనాదులకు కన్నులకు పండుగై గణుతింపనరుదాయె వుయ్యాల
కమనీయ మూర్తి వేంకటశైలపతి నీకు కడువేడుకై వుండె వుయ్యాల

రచన : తాళ్లపాక శ్రీ అన్నమాచార్యులు

Monday, 22 June 2015

ಬೀಸಿತು ಸುಖಸ್ಪರುಶವಾತಂ - ೨

ಸೀತೆಯು ಆಶ್ರಮಕ್ಕೆ ಹೊರಡಲು ಸಂಭ್ರಮದಿಂದ ತಯಾರಾದಳು. ನಗುನಗುತ್ತ 'ನಂಬಿದವರ ಅಭೀಷ್ಟವನ್ನು ನೆರವೇರಿಸುವ ಕೃಪಾಳು ತಾನು ಎಂದು ಈ ದಿನ ರಘುರಾಮನು ನಿರೂಪಿಸಿದ್ದಾನೆ’ ಎಂದು ಕೌಸಲ್ಯೆಗೆ ಹೇಳಿ, ಆಕೆಗೆ ನಮಸ್ಕರಿಸಿ, ಹಾಗೆಯೇ ಕೈಕೇಯಿ ಸುಮಿತ್ರೆಯರಿಗೂ ನಮಸ್ಕರಿಸಿ, ಅವರೆಲ್ಲರ ಹಾರೈಕೆ ಆಶೀರ್ವಾದಗಳನ್ನು ಪಡೆದು, ತನ್ನ ಸಖಿಯರೊಂದಿಗೂ ಪ್ರೇಮದ ಮಾತುಗಳನ್ನಾಡಿ ಅವರೆಲ್ಲರಿಂದ ಬೀಳ್ಕೊಂಡಳು.
ಆ ನಂತರ ಸೀತೆಯು ತಪೋವನದ ಋಷಿಗಳಿಗೆ, ಮುನಿಪತ್ನಿಯರಿಗೆ ಕೊಡಲೆಂದು ಅಗರು, ಚಂದನ, ಕುಂಕುಮಾನುಲೇಪನಗಳನ್ನೂ, ಬಗೆಬಗೆಯ ದಿವ್ಯಾಂಬರಗಳನ್ನೂ, ಇತರೆ ಸುವಸ್ತುಗಳನ್ನೂ ತೆಗೆದು ಕಟ್ಟಿಸಿ ರಥದೊಳಗಿರಿಸಿದಳು. ಹೊರಡುವ ಮುನ್ನ ರಾಮನನ್ನು ನೆನೆದು ಅವನ ಪಾದುಕೆಗಳನ್ನು ತರಿಸಿಕೊಂಡು ತನ್ನೊಡನಿಟ್ಟುಕೊಂಡು ಸಂತಸದಿಂದ ಮಣಿರಥವನ್ನೇರಿದಳು.
ಇತ್ತ ಲಕ್ಷ್ಮಣನು ತನ್ನ ಅಣ್ಣ ತನ್ನ ಮೇಲೆ ಹೊರಿಸಿರುವ ಘೋರವಾದ ಕಾರ್ಯದ ಭಾರವನ್ನು ನೆನೆದು, ಹಾಗೆಯೇ ಸೀತೆಯು ತಾನು ತಪೋವನಕ್ಕೇ ಹೊರಟಿದ್ದೇನೆಂದು ಹಿಗ್ಗಿ ಸಂತಸಪಡುತ್ತಿರುವುದನ್ನೂ ಕಂಡು ಮನದಲ್ಲೇ ಮಮ್ಮಲ ಮರುಗಿದನು. ತುಂಬಿ ಬರುವ ಕಂಬನಿಗಳನ್ನು ಹೇಗೋ ನಿಗ್ರಹಿಸಿಕೊಂಡು ರಥವನ್ನು ಹೊರಡಿಸು ಎಂದು ಸಾರಥಿಗೆ ಸೂಚನೆಯನ್ನಿತ್ತನು.

ರಥವು ವೇಗವಾಗಿ ಅಯೋಧ್ಯಾನಗರವನ್ನು ದಾಟಿ ಗಂಗಾನದಿಯತ್ತ ಹೊರಟಿತ್ತು. ಸೀತೆಯೇನೊ ತಪೋವನಕ್ಕೆ ಹೊರಟಿರುವುದನ್ನು ನೆನೆದು ಸಂತಸದಿಂದಿದ್ದಾಳೆ... ದಾರಿಯ ಸುತ್ತಲಿನ ರಮ್ಯ ದೃಶ್ಯಗಳನ್ನು ಕಂಡು ಆನಂದಿಸುತ್ತಿದ್ದಾಳೆ. ಆದರೆ ಇತ್ತ ಲಕ್ಷ್ಮಣನ ಮನದಲ್ಲಿ ಮತ್ತೆ ತಲ್ಲಣವುಂಟಾಗುತ್ತದೆ :-

’ಧುರದೊಳಾಂತರನಿರಿದು ಮೆರೆಯಲೇರುವ ರಥಂ
ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು
ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕಾಯ್ತು
ಕರುಣಮಿಲ್ಲದೆ ಹೊರೆವ ಹರಣಮಂ ಸುಡಲಿ ನಿ
ಷ್ಠುರದೊಳೆಂತೀ ಕೃತ್ಯಮೆಸಗುವೆನೊ! ರಾಘವೇ
ಶ್ವರನೆಂತಿದಕ್ಕೆ ಬೆಸಸಿದನೊ ತನಗೆ’ನುತ ಸೌಮಿತ್ರಿ ಮರುಗುತ ನಡೆದನು.                  -೧೯.೨

ಅಷ್ಟರಲ್ಲಿ ಸೀತೆಯ ಕಣ್ಣಿಗೆ ಅನತಿ ದೂರದಲ್ಲಿ ಹರಿಯುತ್ತಿರುವ ದೇವನದಿ ಗಂಗೆ ಕಾಣಿಸುತ್ತದೆ. ಆಹಾ! ಆ ದಿವಿಜನದಿಯ ಬೆಳ್ಳನೆಯ ತೆರೆಗಳ ಕಲ್ಲೋಲ ಮಾಲೆಗಳ ಸೊಗಸೇನು.. ಅಲ್ಲಿ ನಲಿಯುತ್ತಿರುವ ರಾಜಹಂಸಗಳ ಸಂಭ್ರಮವೇನು.. ಅದೆಷ್ಟು ತಿರುವು-ಮುರಿವುಗಳುಗಳು, ಅದೆಷ್ಟು ಸುಳಿಗಳು ಅಲ್ಲಿ.. ಅದೆಷ್ಟು ಬಗೆಯ ಜಲಚರಗಳು ಸುಳಿದಾಡುತ್ತಿವೆ, ಅಲ್ಲಿ...

ಸ್ವಲ್ಪ ಹೊತ್ತಿಗೆ ಅವರ ರಥವು ಬಿಳುಪಾದ ನೊರೆ-ತೆರೆಗಳನ್ನೆಬ್ಬಿಸಿ ಘೂರ್ಮಿಸಿ ಹರಿಯುತ್ತಿರುವ, ಮುನಿಗಣ ಸೇವಿತ ಪರಮಪಾವನೆ ಗಂಗೆಯಿದ್ದಲ್ಲಿಗೆ ಬಂದು ತಲುಪಿತು.
ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು, ಬಳಿಕ ನಾವಿಕರೊಡನೆ ನಾವದೊಳ್ ಗಂಗೆಯಂ ಕಳೆದು, ನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ ಒಳಗೊಳಗೆ ಮರುಗಿ, ಬಿಸುಸುಯ್ದು ಚಿಂತಿಸುತ ಮುಂದಳೆದು’ಉಗ್ರ ಮೃಗ-ಪಕ್ಷಿಗಣದಿಂದ ಘೂರ್ಮಿಸುವ ಹಳುವಮಂ ಪೊಕ್ಕನ್ - ಅಡಿಯಿಡುವೊಡೆ ಅಸದಳಮೆಂಬ ಕರ್ಕಶ ಮಾರ್ಗದೊಳು.
ಶಕುನಿ ಮುಂತಾದ ಪಕ್ಷಿಗಳ ಚೀತ್ಕಾರದಿಂದ, ಅನೇಕ ಬಗೆಯ ಉರಗ-ವಿಷಜಂತುಗಳಿಂದ, ತೋಳ ಕರಡಿ ಹುಲಿ ಕಾಡುಹಂದಿ - ಮುಂತಾದ ನಾನಾ ಮೃಗಗಳಿಂದ ಕೂಡಿದ, ಇದು ಹಗಲೊ ಅಥವಾ ಇರುಳೊ ಎಂಬ ವ್ಯತ್ಯಾಸವೂ ತಿಳಿಯಲಾಗದಷ್ಟು ದಟ್ಟವಾಗಿ ಹಬ್ಬಿದ ಕಾಡಿನ ದಾರಿಯಲ್ಲಿ ಅವರಿಬ್ಬರೂ ನಡೆದು ಸಾಗಿದರು. ಮುಂದೆ :
ಅಟವಿಯ ಮಹಾಘೋರ ಗಹ್ವರಂ ಮುಂದೆ ದುರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂಕಟದಿಂದ ರಾಮನಾಮಂಗಳಂ ಜಪಿಸುತ, "ಎಲೆ ಸೌಮಿತ್ರಿ, ಕಾನನಮಿದು ಅಟನಕೆ(ಒಡಾಡಲು) ಅಸದಳಮಪ್ಪುದು. ಇಲ್ಲಿ ಪುಣ್ಯಾಶ್ರಮದ ಜಟೆಗಳಂ, ವಲ್ಕಲಗಳನುಟ್ಟ ಮುನಿವಧುಗಳಂ, ವಟುಗಳಂ, ಶ್ರುತಿಘೋಷ-ಹೋಮಧೂಮಂಗಳಂ ಕಾಣೆನ್" ಎಂದು ಅಳವಳಿದಳು.
"ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗಳ್? ಎಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಂಗಳ್? ಎಲ್ಲಿ ಸು-ಹವಿಗಳ ಕಂಪೊಗೆದ ಪೊಗೆದಳೆದ ಅಗ್ನಿಹೋತ್ರದ ಕುಟೀರಂಗಳು? ಎಲ್ಲಿ ಪರಿಚಿತವಾದ ವೇದಶಾಸ್ತ್ರಧ್ವನಿಗಳ್... ಅಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿಗೆ, ಇಲ್ಲಿಗೇಕೈತಂದೆ, ತಂದೆ, ಸೌಮಿತ್ರಿ? ಹೇಳ್" ಎಂದು ಜಾನಕಿ ಸುಯ್ದಳು.

ಸೀತೆಯ ನುಡಿಗಳನ್ನು ಕೇಳಿ, ಅದಕ್ಕೆ ಉತ್ತರಿಸುವುದು ಹೇಗೊ ಎಂದು ತೋಚದೆ ಲಕ್ಷ್ಮಣನು ತೊಳಲಿದನು. "...ರಾಘವೇಶ್ವರನೆಂದ ಕಷ್ಟಮಂ ಪೇಳ್ದಪೆನೊ, ಮೇಣ್ ಉಸಿರದಿರ್ದಪೆನೊ! ನಿಷ್ಠುರದೊಳು ತರಣಿಕುಲಸಾರ್ವಭೌಮನ ರಾಣಿಯಂ ಬನದೊಳ್ ಇರಿಸಿ ಪೋದಪೆನೆಂತೊ! ಮರಳದಿರ್ದೊಡೆ ಸಹೋದರನ್ ಅದೇನೆಂದಪನೊ! ಹಾ!" ಎಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು.
ಉಕ್ಕಿದುವು ಕಂಬನಿಗಳ್, ಅಧರೋಷ್ಠಂ ಅದಿರಿತು... ಅಲಗಿಕ್ಕಿ ತಿರುಪಿದವೊಲಾಯ್ತೊಡಲೊಳ್ (ಅಲಗು - ಕತ್ತಿ/ಖಡ್ಗ; ಖಡ್ಗದಿಂದ ಒಡಲಿಗೆ ಇರಿದು ತಿರುಪಿದಾಗ ಉಂಟಾಗುವಷ್ಟು ನೋವಾಯ್ತು ಎಂಬ ಭಾವ)... ಕಂಪಿಸಿದುದು ಅವಯವಂ, ಕರಗಿರ್ತು ಎದೆ.. ಸೈರಣೆ ಸಮತೆಗೆಟ್ಟುದು... ಸಿಕ್ಕಿದುವು ಕಂಠದೊಳ್ ಮಾತುಗಳ್; ಸೆರೆ ಬಿಗಿದು ಮಿಕ್ಕುಮೀರುವ ಶೋಕದಿಂದ ಬೆಂಡಾಗಿ ಕಡುಗಕ್ಕಸದ ಕೆಲಸಮನ್ ಉಸಿರಲರಿಯದೆ ಅವನ್ ಒಯ್ಯನೆ ಅವನಿಸುತೆಗೆ ಇಂತೆಂದನು :
"ದೇವಿ, ನಿನಗಿನ್ನೆಗಂ ಪೇಳ್ದುದಿಲ್ಲ, ಅಪವಾದಂ ಆವರಿಸೆ ನಿನ್ನನ್ ಒಲ್ಲದೆ ರಘುಕುಲೋದ್ಭವಂ ಸೀವರಿಸಿ ಬಿಟ್ಟು ’ಕಾಂತಾರಕ್ಕೆ ಕಳುಹಿ ಬಾ’ ಎಂದೆನಗೆ ನೇಮಿಸಿದೊಡೆ ಆ ವಿಭುವಿನಾಜ್ಞೆಯಂ ಮೀರಲ್ ಅರಿಯದೆ ಮೆಲ್ಲನೀ ವಿಪಿನಕೊಡಗೊಂಡು ಬಂದೆನ್, ಇನ್ನೊಯ್ಯೆನ್. ಆವಲ್ಲಿಗಾದೊಡಂ ಪೋಗೆಂದು" ಲಕ್ಷ್ಮಣಂ ಭಾಷ್ಪಲೋಚನನಾದನು.

ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತ
ಮರೆದಳಂಗೋಪಾಂಗಮಂ. ಬಳಿಕ ಸೌಮಿತ್ರಿ
ಮರುಗಿ ಕಣ್ಣೀರ್ದಳೆದು ಪತ್ರದೊಳ್ ಕೊಡೆವಿಡಿದು
ಸೆರಗಿಂದ ಬೀಸಿ ’ರಾಮನ ಸೇವೆ ಸಂದುದೇ ತನಗೆಂದು’ ರೋದಿಸಿದನು.                     -೧೯.೧೬

ಒಂದರೆಘಳಿಗೆಯ ನಂತರ ಸೀತೆಗೆ ಎಚ್ಚರವಾಯಿತು. ಕಣ್ತೆರೆದು ದೈನ್ಯದಿಂದ ಸೌಮಿತ್ರಿಯನ್ನು ನೋಡಿ ’ಕೊಯ್ಯಲೊಲ್ಲದೆ ಕೊರಳನ್ ಇಂತು.. ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ ಪೊಯ್ಯೆಂದು ಪೇಳದೆ ಅಡವಿಗೆ ಕಳುಹಿ ಬಾಯೆಂದನಯ್ಯಯ್ಯೊ! ರಾಘವಂ ಕರುಣಾನಿಧಿ...’ ಎಂದು ನೊಂದು ನುಡಿದಳು.

"ಬಿಟ್ಟನೆ ರಘುಶ್ರೇಷ್ಠನ್ ಎನ್ನಂ? ಅಕಟಕಟ! ತಾ ಮುಟ್ಟನೆ..!? ನೆಗಳ್ದ ಬಾಳ್ಕೆಗೆ ಸಂಚಕಾರಮಂ ಕೊಟ್ಟನೆ...!? ಸುಮಿತ್ರಾ ತನುಜ, ಕಟ್ಟರಣ್ಯದೊಳ್ ಕಳುಹಿ ಬಾ ಎಂದು ನಿನಗೆ ಕೊಟ್ಟನೆ ನಿರೂಪಮಂ!? ...ಮನೋವಲ್ಲಭನನ್ ಅಗಲ್ದು ಅಡವಿಯೊಳ್ ನೆಟ್ಟನೆ ಪಿಶಾಚಿಯವೊಲ್ ಅದೆಂತಿಹೆನೊ, ಕೆಟ್ಟೆನಲ್ಲಾ.." ಎಂದೊರಲ್ದಳ್ ಅಬಲೆ.
ಮತ್ತೆ ಮತ್ತೆ ರಾಮನನ್ನು ನೆನೆದು, ಹಿಂದೆ ವನವಾಸದಲ್ಲಿ ತಾನು ಅನುಭವಿಸಿದ ಕಷ್ಟಕಾರ್ಪಣ್ಯಗಳನ್ನೂ ಆಗೆಲ್ಲ ರಾಮನು ತೋರಿದ ಪ್ರೇಮವನ್ನೂ ನೆನೆದು ಮತ್ತಷ್ಟು ರೋದಿಸಿದಳು... ಜಾನಕಿಯ ದುಃಖವನ್ನು ಕಂಡು ಲಕ್ಷ್ಮಣನೂ ಕಂಬನಿ ಮಿಡಿಯುತ್ತ ನಿಂತನು.

"ತಾಯೆ, ನಿನ್ನಂ ಬಿಟ್ಟು ಪೋಗಲಾರೆಂ. ಪೋಗದೀಯವಸ್ಥೆಯೊಳಿರ್ದೊಡೆ ಅಣ್ಣನೇಗೈದಪನೊ.. ಹಾ!" ಎಂದು ಲಕ್ಷ್ಮಣಂ ಶೋಕ ಗದ್ಗದನಾಗೆ ಸೀತೆ ಮಗುಳಿಂತೆಂದಳು -

"ತಂದೆ, ಲಕ್ಷ್ಮಣ, ನಿನ್ನೊಳೆಂದೊಡಿನ್ನೇನಹುದು.. ಹಿಂದಣ ಜನಸ್ಥಾನದಂದದೊಳ್ ಪೋಗು ನೀಂ. ಕೊಂದುಕೊಂಬಡೆ ತನ್ನ ಬೆಂದೊಡಲೊಳ್ ಇದೆ ಬಸಿರ ದಂದುಗಂ.. ಕಾನನದೊಳು ಬಂದುದಂ ಕಾಣ್ಬೆನ್ ನಾನಿಂದು...." (ನನ್ನನ್ನು ನಾನು ಕೊಂದುಕೊಳ್ಳೋಣವೆಂದರೆ ಬಸಿರೊಳಗೆ ಇನ್ನೊಂದು ಜೀವವುಂಟು.. ಆದ್ದರಿಂದ ನಾನು ಆ ಕೆಲಸವನ್ನೂ ಮಾಡಲಾರೆ. ಇನ್ನು ಮುಂದೆ ಈ ಕಾಡಿನಲ್ಲಿ ಎದುರಾದ ಕಷ್ಟವನ್ನು ಅನುಭವಿಸುತ್ತೇನೆ..)

"ಏಕೆ ನಿಂದಪೆ? ಪೋಗು, ಸೌಮಿತ್ರಿ. ಕೋಪಿಸನೆ ಕಾಕುತ್ಸ್ಥನ್(ರಾಮ) ಇಲ್ಲಿ ತಳುವಿದೊಡೆ? ನೆರವುಂಟು ತನಗೀ ಕಾಡೊಳ್ ಉಗ್ರಜಂತುಗಳ್. ಅಲ್ಲಿ ರಘುನಾಥನ್ ಏಕಾಕಿಯಾಗಿರ್ಪನು...
ಲೋಕದ ಅರಸು ಏಗೈದೊಡಂ ತನ್ನ ಕಿಂಕರರ್ ’ಬೇಕು..ಬೇಡ..’ ಎಂದು ಪೇಳರೆ...? ಭರತ-ಶತ್ರುಘ್ನರೀ ಕೆಲಸಕೆ ಒಪ್ಪಿದರೆ? ಹನುಮಂತನಿರ್ದಪನೆ, ಪೇಳ್" ಎಂದು ಅಳಲ್ದಳ್ ಅಬಲೆ.

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಜನಿಸಿ ತ
ನ್ನೊಡಲಂ ಪೊರೆವುದೆನ್ನೊಳಪರಾಧಮುಂಟು.. ಸಾಕಿಲ್ಲಿರಲ್ಬೇಡ ನೀನು,
ನಡೆ, ಪೋಗು.. ನಿಲ್ಲದಿರ್. ನಿನಗೆ ಮಾರ್ಗದೊಳಾಗ
ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ
ಮಿಡಿದಾರ್ತೆಯಾಗಿರಲ್ ಸೌಮಿತ್ರಿ ನುಡಿದನಾ ವಿಪಿನದಭಿಮಾನಿಗಳ್ಗೆ :                     -೧೯.೨೭

"ಎಲೆ ವನಸ್ಥಳಗಳಿರ, ವೃಕ್ಷಂಗಳಿರ, ಮೃಗಂಗಳಿರ.. ಕ್ರಿಮಿ-ಕೀಟಂಗಳಿರ, ಪಕ್ಷಿಗಳಿರ, ಲತೆಗಳಿರ, ತೃಣ-ಗುಲ್ಮಂಗಳಿರ, ಪಂಚಭೂತಂಗಳಿರ, ದೆಸೆಗಳಿರ - ಕಾವುದು... ಎಲೆ ಧರ್ಮದೇವತೆ, ಜಗಜ್ಜನನಿ ಜಾಹ್ನವಿಯೆ, ಸಲಹಿಕೊಂಬುದು ತನ್ನ ಮಾತೆಯಂ ಜಾನಕಿಯನ್. ಎಲೆ ತಾಯೆ ಭೂದೇವಿ, ನಿನ್ನ ಮಗಳಿಹಳೆಂದು" ಸೌಮಿತ್ರಿ ಕೈಮುಗಿದನು. ಹೀಗೆ ಅಲ್ಲಿನ ವೃಕ್ಷ, ತೃಣ-ಗುಲ್ಮಗಳಿಗೂ, ಅಲ್ಲಿನ ಪ್ರಾಣಿಪಕ್ಷಿಗಳಿಗೂ ಕೈಮುಗಿದು ತನ್ನ ತಾಯಿ ಜಾನಕಿಯನ್ನು ಕಾಪಾಡಬೇಕೆಂದು ಪ್ರಾರ್ಥಿಸಿ ಲಕ್ಷ್ಮಣನು ಹೊರಡಲನುವಾದನು. ’ಅಯ್ಯೊ, ತನಗೆ ಇಂತಹ ಕೆಲಸವನ್ನು ಮಾಡಬೇಕಾಗಿ ಬಂತು. ಈ ಪಾಪಕ್ಕೆ ತನ್ನ ಒಡಲನ್ನು ಎರಡಾಗಿ ಸೀಳಿ ಕೆಡಹಬೇಕು.. ಛೆ, ಸುಡಲಿ ನನ್ನೀ ಬಾಳನ್ನು’ ಎಂದು ತನ್ನನ್ನೇ ತಾನು ಹಳಿದುಕೊಂಡು, ಸೀತೆಗೆ ನಮಸ್ಕರಿಸಿ, ತಾಯಿಹಸುವನ್ನು ಅಗಲಲಾರದೆ ಅಗಲುವ ಎಳೆಗರುವಿನಂತೆ ನಡೆಯಲಾರದೆ ನಡೆಯುತ್ತ ಗಂಗೆಯ ಕಡೆಗೆ ಹೊರಟನು.

ತಾಯನ್ ಎಳೆಗರು ಬಿಚ್ಚುವಂತೊಯ್ಯನೊಯ್ಯನೆ ಅತ್ಯಾಯಾಸದಿಂ ಅಗಲ್ದು ಅಮರನದಿಯಂ ದಾಂಟಿ.. ದುಃಖಾರ್ತನಾಗಿ ಸೌಮಿತ್ರಿ ಸಾಗಿದನತ್ತಲ್. ಇವಳಿತ್ತಲು ಬಾಯಾರಿ ಕಂಗೆಟ್ಟು ಲಕ್ಷ್ಮಣನ ತಲೆ ಮಸುಳಲ್, ’ಹಾ!’ ಎಂದೊರಲ್ದು ಭಯ-ಶೋಕದಿಂದ ಅಸವಳಿದು ಕಾಯಮಂ ಮರೆದು ಇಳೆಗೊರಗಿದಳ್ - ಮೂಲಮಂ ಕೊಯ್ದ ಎಳೆಯ ಬಳ್ಳಿಯಂತೆ.

ಸೀತೆಯು ಹೀಗೆ ಮೂರ್ಛೆಹೋದುದನ್ನು ಕಂಡು ಅಲ್ಲಿದ್ದ ಮೃಗ-ಪಕ್ಷಿಗಳು ಅವಳ ಶುಶ್ರೂಷೆಗೆಂದು ತಮ್ಮ ವೈರವನ್ನು ಮರೆತು, ಹುಲ್ಲು-ಮೇವುಗಳನ್ನೂ ಮರೆತು ಅಲ್ಲಿ ನಿಂದು ಅವಳ ಕಷ್ಟವನ್ನು ನೋಡಿ ಕೊರಗಿದವು. ತಮ್ಮ ಕೈಲಾದ ಮಟ್ಟಿಗೆ ಸೀತೆಯನ್ನು ಉಪಚರಿಸಿದವು.

’..ಅಲ್ಲಿರ್ದ ಪಕ್ಷಿ ಮೃಗ ಜಂತುಗಳ್ ಧರಣಿಸುತೆಯಂ ಬಳಸಿ ನಿಂದು ಮೈಯುಡುಗಿ ಜೋಲ್ದಿರದೆ ಕಂಬನಿಗರೆದು. ನಿಜವೈರಮಂ ಮರೆದು, ಪುಲ್ಮೇವುಗಳನೆ ತೊರೆದು ಕೊರಗುತಿರ್ದುವು ಶೋಕಭಾರದಿಂ... ಜಗದೊಳ್ ಉತ್ತಮರ ಹಾನಿಯಂ ಕಂಡು ಸೈರಿಸುವರುಂಟೆ!’

ಮೊರೆಯಲೊಲ್ಲವು ತುಂಬಿ, ಕುಣಿಯಲೊಲ್ಲವು ನವಿಲ್, ಬೆರೆಯಲೊಲ್ಲವು ಕೋಕಿ, ನಡೆಯಲೊಲ್ಲವು ಹಂಸೆ, ಕರೆಯಲೊಲ್ಲವು ಪಿಕಂ, ನುಡಿಯಲೊಲ್ಲವು ಶುಕಂ. ನಲಿಯಲೊಲ್ಲವು ಚಕೋರಿ, ನೆರೆಯಲೊಲ್ಲವು ಹರಿಣಿ. ಒರೆಯಲೊಲ್ಲವು ಕರಿಣಿ, ಪೊರೆಯಲೊಲ್ಲವು ಚಮರಿ, ಮೆರೆಯಲೊಲ್ಲವು ಸಿಂಗಂ... - ಅರರೆ, ಜಾನಕಿಯ ಶೋಕಂ ತಮ್ಮದೆಂದಾಕೆಯಂಗಮಂ ನೋಡಿ ನೋಡಿ.

ಬೀಸಿದುವು ಬಾಲದಿಂ ಚಮರಿಗಳ್ ಚಮರಮಂ, ಪಾಸಿದುವು ಕರಿಗಳ್ ಎಳೆದಳಿರ ಮೃದುತಲ್ಪಮಂ. ಸೂಸಿದುವು ಸಾರಸಂಗಳ್ ತಮ್ಮ ಗರಿಗಳಂ ತೋದು ತಂದಂಬುಗಳನು ಆ ಸಿರಿಮೊಗಕ್ಕೆ. ಬಿಸಿಲಾಗದಂತೆ ಆಗಸದೊಳೋಸರಿಸದೆ ಆಂಚೆಗಳ್ ಎರಂಕೆಯನ್ ಅಗಲ್ಚಿ ನೆರಳಾಸೆಗೈದವು ರಾಘವನ ರಾಣಿ ದುಃಖಸಂತಪ್ತೆಯಾಗಿರಲ್ಕೆ.

ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು
ಬರಲಾರದಿರ್ದೊಡಂ ಮತ್ತೆ ಗಂಗೆಯೊಳಲ
ರ್ದರವಿಂದಗಂಧವತಿಭಾರಮಂ ಪೊರಲಾರದಿರ್ದೊಡಂ ಧರಣಿಸುತೆಯ
ಪರಿತಾಪಮಂ ತವಿಸದಿರಬಾರದೆಂದು ತರ
ಹರದೊಳೊಯ್ಯೊಯ್ಯನೈತಂದು ಬೀಸಿತು ಸುಖ
ಸ್ಪರುಶವಾತಂ. ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ಪನೆ?             -೧೯.೩೫


ಗಂಗಾನದಿಯ ತೆರೆತೆರೆಗಳ ನಡುವೆ ಬಿದ್ದು-ಎದ್ದು ಆಯಾಸಗೊಂಡು.. ಬರಲಾಗದಿದ್ದರೂ, ಗಂಗೆಯ ಮಡಿಲಲ್ಲಿ ಅರಳಿದ ಕಮಲಗಳ ಗಂಧದ ಭಾರವನ್ನು ಹೊರಲಾಗದಿದ್ದರೂ - ಹೇಗೋ ತನ್ನ ಎಲ್ಲ ಕಷ್ಟಗಳನ್ನೂ ಸೈರಿಸಿಕೊಂಡು, ಸೀತೆಯ ಪರಿತಾಪವನ್ನು ಹೇಗಾದರೂ ಮಾಡಿ ಕಡಿಮೆಗೊಳಿಸಲೇಬೇಕು ಎಂದು ಬೀಸಿ ಬಂದಹಾಗೆ ಹಿತವಾದ ಗಾಳಿಯು ಮೆಲ್ಲಮೆಲ್ಲನೆ ಬೀಸಿತು. ಉಪಕಾರಿಯಾದವರು ಎಂದಾದರೂ ತಮ್ಮ ನೋವನ್ನೇ ನೋಡುತ್ತ (ಉಪಕಾರ ಮಾಡದೆಯೇ) ಕುಳಿತುಕೊಳ್ಳುತ್ತಾರೆಯೇ!


(ಮುಂದುವರೆಯುವುದು..)