Wednesday 8 April 2015

ಚಂದ್ರಗಿರಿಯ ಮೇಲೊಂದು ಸಂಜೆ

ನಾನು ಈ ಹಿಂದೆ ಹಲವಾರು ಸಾರಿ ಶ್ರವಣಬೆಳಗೊಳಕ್ಕೆ ಹೋಗಿದ್ದೆನಾದರೂ 'ಚಿಕ್ಕಬೆಟ್ಟ'ವೆಂಬ ಕಾರಣಕ್ಕೊ ಏನೊ, ಚಂದ್ರಗಿರಿಯನ್ನು ಈವರೆಗೆ ಹತ್ತಿರಲಿಲ್ಲ…
ಆದರೆ ಈ ಸಾರಿ ಮೊದಲು ಹೋದದ್ದು ಅಲ್ಲಿಗೇ… ಬೆಟ್ಟದ ತುದಿ ತಲುಪಿದ ತಕ್ಷಣ ನನ್ನನ್ನು ನಾನು ಹಳಿದುಕೊಂಡೆ - ಇಲ್ಲಿಯವರೆಗೂ ಇಲ್ಲಿಗೆ ಬರದೇ ಇದ್ದುದರ ಬಗ್ಗೆ.

ಸಂಜೆಯ ಹೊತ್ತು, ಅಷ್ಟೇನೂ ಜನರಿರಲಿಲ್ಲ… ಬಸದಿಯಲ್ಲಿ ನಾನು - ಜಿನಬಿಂಬಗಳಷ್ಟೇ.!
ಹಿಂದೆಲ್ಲ ಜೈನದೇವತೆಗಳ ಬಗ್ಗೆ ಒಂದು ಬಗೆಯ ತಾತ್ಸಾರವಿತ್ತು ನನ್ನಲ್ಲಿ. ಆದರೆ ಅಂದೇಕೊ ಆ ಬಿಂಬಗಳು ಹೊಸತಾಗಿ ಕಂಡವು. ಒಂದೊಂದು ಬಿಂಬವೂ ಜೀವಂತಿಕೆಯಿಂದ ತುಂಬಿರುವಂತೆ, ಮೌನವಾಗಿಯೇ ಏನನ್ನೋ ಹೇಳುತ್ತಿರುವಂತೆ ಕಂಡವು...

ಪಾರ್ಶ್ವನಾಥನ ಬಸದಿಯನ್ನು ಹೊಕ್ಕಾಗಲಂತೂ ಮಾತೇ ಹೊರಡಲಿಲ್ಲ ನನಗೆ… ಎದೆಯು ಭಾರವಾಗಿ, ಕಣ್ತುಂಬಿ ಬಂತು.. ಆತನ ಎದುರು ಕುಳಿತು ಮನಸಾರೆ ಅತ್ತುಬಿಟ್ಟೆ.. ದುಃಖದಿಂದಲ್ಲ, ಯಾವುದೊ ಹೇಳಲಾಗದ ಆನಂದಭಾವನೆಯು ತುಂಬಿಬಂದುದರಿಂದ.

ಈ ಬಾರಿ ಹೀಗೇಕಾಯಿತೊ ಗೊತ್ತಿಲ್ಲ.. ಹಿಂದೆಲ್ಲ ಬಾಹುಬಲಿಯನ್ನು ಕಂಡಾಗಲೂ ಇಂತಹ ಅನುಭವವಾಗಿರಲಿಲ್ಲ ನನಗೆ…
ಅಂದು ನನಗಾದ ಪ್ರತಿಯೊಂದು ಅನುಭವವೂ ಹೊಸತೆನಿಸುತ್ತಿತ್ತು. ಶಾಂತಲೆಯು ಕಟ್ಟಿಸಿದ ಬಸದಿ, ಆಕೆಯ ಹೆಸರಿನ ಶಾಸನಗಳು ಅವಳ ರೂಪವೊಂದನ್ನು ಕಣ್ಣೆದುರು ತಂದಂತಾಯಿತು. ಆಕೆಯ ಬಗ್ಗೆ ಮುಂಚಿನಿಂದಲೂ ಒಂದು ಬಗೆಯ ಆಪ್ಯಾಯತೆಯಿತ್ತು, ಅಂದು ಅದು ತುಸು ಹೆಚ್ಚಾದಂತೆನಿಸಿತು.

ಇನ್ನು ಅಂದು ಕಂಡ ಶಿಲ್ಪಗಳ ಬಗ್ಗೆಯೂ ಅಷ್ಟೇ. ಮುಂಚೆ ಕೇವಲ ಶಿಲೆಯಾಗಿ, ಕಲೆಯಾಗಿ ಕಂಡದ್ದು ಅಂದು ಬೇರೆಯದೇ ರೀತಿಯಲ್ಲಿ ಕಂಡವು:
"ಇಂದು ನಾನು ನೋಡುತ್ತಿರುವ ಇದೇ ಶಿಲ್ಪವನ್ನು ನೂರಾರು ವರ್ಷಗಳ ಹಿಂದೆ ಅದಾರೋ ಶಿಲ್ಪಿಯೊಬ್ಬ - ಇದನ್ನು ಕೆತ್ತಿದವನು - ಅದೆಷ್ಟು ಸಾರ್ಥಕತೆಯ ಭಾವದಿಂದ ನೋಡಿರಲಿಕ್ಕಿಲ್ಲ.! ಅಂದು ಅವನಿಗಾದ ಆನಂದ ಅದೆಂಥದ್ದಿರಬಹುದು!
ನಾವು ಈಗ ಮುಟ್ಟುವ ಈ ಶಿಲ್ಪಗಳನ್ನೇ ಅವನೂ ಅದೆಷ್ಟು ಮುದ್ದಿನಿಂದ ನೇವರಿಸಿರಬಹುದು…"
ಇಂಥವೇ ಭಾವನೆಗಳು.. ಒಂದು ಬಗೆಯಲ್ಲಿ ಆ ಶಿಲ್ಪಗಳು ನಮ್ಮನ್ನು ಆ ಶಿಲ್ಪಿಯೊಡನೆ ಸಂಭಾಷಣೆಗೆ ತೊಡಗಿಸುವ ಮಾಧ್ಯಮವಾಗಿ ಕಂಡವು.

ಕಾವ್ಯ ಮೀಮಾಂಸೆಯಲ್ಲಿ ಬರುತ್ತದೆ - ಒಬ್ಬ ಕವಿಯು ತಾನು ಕಂಡ ಯಾವುದೋ ದೃಶ್ಯವನ್ನು, ತಾನು ಪಡೆದ ಆನಂದಾನುಭವವನ್ನು ತನ್ಮ ಕೃತಿಯಲ್ಲಿ ಸೆರೆಹಿಡಿದಿಡುತ್ತಾನೆ. ಮುಂದೆ ಆ ಕೃತಿಯನ್ನೋದುವ ಸಹೃದಯನೂ ಆ ಆನಂದವನ್ನೇ ಪಡೆದು, ಕವಿಯು ಕಂಡ ಅದೇ ದೃಶ್ಯವನ್ನು ಕಲ್ಪಿಸಿಕೊಳ್ಳಬಲ್ಲನಾದರೆ ಅಲ್ಲಿಗೆ ಆ ಕೃತಿಯನ್ನು ರಚಿಸಿದ ಕವಿಯೂ ಧನ್ಯ, ಆ ಕೃತಿಯೂ ಧನ್ಯ.

ಹೀಗೆ ಈ ಶಿಲ್ಪಗಳೂ ಅಂದು ಬಹುಶಃ ಆ ಶಿಲ್ಪಿಯು ಅನುಭವಿಸಿದ ಆನಂದವನ್ನೇ ನನ್ನಲ್ಲೂ ಉಂಟುಮಾಡಿದುವೇನೊ…
ಅಂತೂ ಆ ದಿನ ಹೊಸ ಲೋಕವೊಂದು ನನ್ನೆದುರು ಅನಾವರಣಗೊಂಡಿತ್ತು..

1 comment: