Thursday 2 April 2015

ಇಮ್ಮಡಿ ಗುಣವರ್ಮ


ಒಂಭತ್ತನೆಯ ಶತಮಾನದಲ್ಲಿದ್ದ ಕವಿ ಶ್ರೀವಿಜಯನಾದಿಯಾಗಿ ಹದಿನೆಂಟನೇ ಶತಮಾನದ ದೇವಚಂದ್ರನವರೆಗೆ ನೂರಾರು ಜೈನಕವಿಗಳು ಕನ್ನಡದಲ್ಲಿ ಅಮೂಲ್ಯವಾದ ಹಲವಾರು ಕೃತಿಗಳನ್ನು ರಚಿಸಿ ಕನ್ನಡಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನಿತ್ತಿದ್ದಾರೆವೈದಿಕ ಪುರಾಣ, ಮಹಾಕಾವ್ಯಗಳು ಪ್ರಧಾನವಾಗಿ ಸಂಸ್ಕೃತ ಭಾಷೆಯಲ್ಲಿಯೂ, ಜೈನಪುರಾಣ-ಕಾವ್ಯಗಳು ಪ್ರಾಕೃತಭಾಷೆಯಲ್ಲಿಯೂ ಮಾತ್ರ ರಚನೆಯಾಗುತ್ತಿದ್ದ ಕಾಲದಲ್ಲಿ ಅವಕ್ಕೆ ಸಂವಾದಿಯಾಗುವಂತಹ ಮಹತ್ತರ ಕೃತಿಗಳನ್ನು ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿಯೇ ರಚಿಸುವ ಕಾರ್ಯಕ್ಕೆ ನಾಂದಿ ಹಾಡಿದವರಲ್ಲಿ ಜೈನಕವಿಗಳೇ ಅಗ್ರಗಣ್ಯರೆಂದರೆ ತಪ್ಪಾಗಲಾರದು. ಹೀಗೆ ಕನ್ನಡಸಾಹಿತ್ಯಕ್ಕೆ ಅಮೂಲ್ಯ ಕೃತಿಗಳನ್ನು ನೀಡಿದ ನೂರಾರು ಕವಿಗಳ ಪೈಕಿ ಇಮ್ಮಡಿ ಗುಣವರ್ಮನೂ ಒಬ್ಬ.
(*ಪ್ರಾಚೀನ ಕನ್ನಡಸಾಹಿತ್ಯದಲ್ಲಿ ಇಬ್ಬರು ಗುಣವರ್ಮರು ಕಂಡುಬರುತ್ತಾರೆ. ಮೊದಲನೆಯ ಗುಣವರ್ಮ ಸುಮಾರು ಹತ್ತನೇ ಶತಮಾನದಲ್ಲಿದ್ದವನು. ಶೂದ್ರಕ ಹಾಗೂ ಹರಿವಂಶವೆಂಬ ಕೃತಿಗಳನ್ನು ರಚಿಸಿದ್ದಾನೆ ಈತ.)

ಪ್ರಸ್ತುತ ನಾವು ಪರಿಚಯಿಸಿಕೊಳ್ಳಲಿರುವ ಕವಿ ಇಮ್ಮಡಿ ಗುಣವರ್ಮನುಪುಷ್ಪದಂತ ಪುರಾಣವೆಂಬ ಚಂಪೂಕಾವ್ಯವನ್ನೂ, ಚಂದ್ರನಾಥಾಷ್ಟಕವೆಂಬ ಕಿರುಕೃತಿಯೊಂದನ್ನೂ ರಚಿಸಿದ್ದಾನೆ. ಈತ ರಾಷ್ಟ್ರಕೂಟರ ಅರಸು ೪ನೇ ಕಾರ್ತವೀರ್ಯಾರ್ಜುನನ ಕೈಕೆಳಗೆ ನಾೞ್ಪ್ರಭುವಾಗಿದ್ದ ಶಾಂತಿವರ್ಮನೆಂಬುವವನ ಆಶ್ರಯದಲ್ಲಿದ್ದವನೆಂದು ತಿಳಿದುಬರುತ್ತದೆ. ಕಾರ್ತವೀರ್ಯಾರ್ಜುನನ ಗುರುವಾಗಿದ್ದ ಮುನಿಚಂದ್ರಪಂಡಿತನೇ ಇಮ್ಮಡಿ ಗುಣವರ್ಮನಿಗೂ ಗುರುವಾಗಿದ್ದವನು. ಕವಿಯ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ ವ್ಯಕ್ತಿಯೀತ. ಅದಕ್ಕೆಂದೇ ಗುಣವರ್ಮನು ತನ್ನ ಕೃತಿಯ ಪ್ರತಿ ಆಶ್ವಾಸದ ಅಂತ್ಯದಲ್ಲೂಮುನಿಚಂದ್ರಪಂಡಿತದೇವನನ್ನು ಸ್ತುತಿಸಿದ್ದಾನೆ. ಇವಿಷ್ಟು ವಿಷಯಗಳನ್ನಲ್ಲದೆ ಕವಿಯು ತನ್ನ ಬಗ್ಗೆ ಹೆಚ್ಚಾಗಿ ಏನನ್ನೂ ಹೇಳಿಕೊಂಡಿಲ್ಲ. ಈತನ ಕಾಲದ ಬಗೆಗೂ ಹಲವಾರು ಚರ್ಚೆಗಳು ನಡೆದಿವೆ. ಚರ್ಚೆಗಳೆಲ್ಲದರ ಒಟ್ಟು ಅಂಶವಿಷ್ಟು:
. ಈತನ ನಂತರದ ಕವಿಯಾದ ಮಲ್ಲಿಕಾರ್ಜುನ (೧೨೪೫) ’ಪುಷ್ಪದಂತಪುರಾಣವನ್ನು ಉಲ್ಲೇಖ ಮಾಡಿರುವುದರಿಂದ ಈತ ಮಲ್ಲಿಕಾರ್ಜುನನಿಗಿಂತ ಹಿಂದಿನವನಾಗಿರಬೇಕು. ಹಾಗೂ ಕೃತಿಯ ನಾಯಕನಾದ ಮಹಾಪದ್ಮನನ್ನು ಶಾಂತಿವರ್ಮನೊಡನೆ ಸಮೀಕರಿಸಿ ಕೃತಿಯನ್ನು ರಚಿಸಿರುವುದರಿಂದ ಈತನ ಕಾಲ ೧೩ನೇ ಶತಮಾನವೆಂದು ಹೇಳಬಹುದು (೧೨೦೯ರಿಂದ ೧೨೨೫ರ ನಡುವೆ ಕೃತಿಯ ರಚನೆಯಾಗಿರಬೇಕೆಂದು ವಿದ್ವಾಂಸರ ಊಹೆ). . ನಾಲ್ಕನೇ ಕಾರ್ತವೀರ್ಯನು ಕುಂತಳದೇಶದ ಕೂಂಡಿಯನ್ನು ಆಳುತ್ತಿದ್ದುದರಿಂದ ಕೂಂಡಿಯೇ ಈತನ ಸ್ಥಳವೂ ಆಗಿದ್ದಿರಬೇಕೆಂದು ಊಹಿಸಲಾಗಿದೆ. ( ಬಗ್ಗೆ ಯಾವ ಪುರಾವೆಯೂ ಇಲ್ಲ)

ಕವಿ ಗುಣವರ್ಮನು ಪಂಪನಿಂದ ನೇರವಾಗಿ ಪ್ರಭಾವಿತನಾಗಿದ್ದಾನೆ. ಪಂಪ ರನ್ನರ ಪರಂಪರೆಯಂತೆ ಈತನೂ ಕೂಡ ತನ್ನ ಪೋಷಕನಾದ ಶಾಂತಿವರ್ಮನನ್ನು ಕಥಾನಾಯಕನಾದ ಮಹಾಪದ್ಮನೊಡನೆ ಅಭೇದ ಕಲ್ಪಿಸಿ ಕೃತಿಯನ್ನು ರಚಿಸಿದ್ದಾನೆ. ಮಹಾಪದ್ಮನೇ ತನ್ನ ಮುಂದಿನ ಜನ್ಮದಲ್ಲಿ ಪುಷ್ಪದಂತನಾಗಿ ಜನಿಸಿ ತೀರ್ಥಂಕರನಾಗುವುದು ಕಾವ್ಯದ ಕಥಾವಸ್ತು. ಕಾವ್ಯಭಾಗದಲ್ಲಿ ಬರುವ ಕೆಲವು ವರ್ಣನೆಗಳಿಂದ ಗುಣವರ್ಮನು ಎಷ್ಟರ ಮಟ್ಟಿಗೆ ಪಂಪನಿಂದ ಪ್ರಭಾವಿತನಾಗಿದ್ದಾನೆ ಎಂದು ತಿಳಿದು ಬರುತ್ತದೆ. ಅದೂ ಅಲ್ಲದೆ, ”ಪಂಪನ ಕಾವ್ಯದಲ್ಲಿನ ಓಜೆ ತನ್ನ ಕಾವ್ಯದಲ್ಲಿಯೂ ಮೈಗೂಡಲಿ’ - .೩೬, ಎಂದು ಮನಸಾರೆ ಪಂಪ, ಪೊನ್ನ ಮುಂತಾದ ಪೂರ್ವಸೂರಿಗಳನ್ನು ನೆನೆದಿದ್ದಾನೆ. 

ಕಥಾವಸ್ತು: 
ಪುಂಡರೀಕಿಣಿಪುರದ ಅರಸು ಪದ್ಮ. ರಾಜಾ ಪದ್ಮನು ನೀತಿಮಾರ್ಗದಿಂದ ರಾಜ್ಯವಾಳುತ್ತಿದ್ದ. ಆತನ ಆಳ್ವಿಕೆಯಲ್ಲಿ ದೇಶವು ಸುಭಿಕ್ಷವಾಗಿತ್ತು. ಆತನ ಕೀರ್ತಿ ಲೋಕಪ್ರಸಿದ್ಧವಾಗಿತ್ತು. ಆತನಿಗೆ ಅನುರೂಪಳಾದ ಮಡದಿ ವನಮಾಲಾ. ಅವರಿಬ್ಬರಿಗೂ ಮಕ್ಕಳಾಗಲಿಲ್ಲ ಎಂಬ ಚಿಂತೆ ಬಹುವಾಗಿ ಕಾಡುತ್ತಿರಲು, ಒಮ್ಮೆ ಪದ್ಮನಿಗೆ ಶುಭ ಶಕುನಗಳು ಕಂಡುಬಂದುದರಿಂದ ಇನ್ನು ತಮಗೆ ಮಕ್ಕಳಾಗುವುದು ಖಂಡಿತ ಎಂದು ಸಂತಸ ಹೊಂದುತ್ತಾನೆ. ವಿಷಯವನ್ನು ರಾಣಿಗೂ ತಿಳಿಸುತ್ತಾನೆ. ಮುಂದೆ ಕೆಲವು ಕಾಲಕ್ಕೆ ರಾಣಿಯು ಗರ್ಭವತಿಯಾಗಿ ಶುಭಮುಹೂರ್ತದಲ್ಲಿ ಮುದ್ದಾದ ಗಂಡುಮಗುವೊಂದಕ್ಕೆ ಜನ್ಮ ನೀಡುತ್ತಾಳೆ. ಮಗುವಿಗೆಮಹಾಪದ್ಮಎಂದು ನಾಮಕರಣ ಮಾಡುತ್ತಾರೆ. ಕಾಲಾಂತರದಲ್ಲಿ ಮಹಾಪದ್ಮನಿಗೆ ಯುವರಾಜ ಪಟ್ಟ ಕಟ್ಟುತ್ತಾರೆ. ಮುಂದೆ ಆತನಿಗೆ ಹಲವಾರು ವಿವಾಹಗಳೂ ಆಗುತ್ತವೆ.
ಮಹಾಪದ್ಮನು ಒಮ್ಮೆ ಜಿನಮುನಿಗಳ ದರ್ಶನವನ್ನು ಪಡೆದು, ಅವರ ಮಾರ್ಗದರ್ಶನದಂತೆ ಜಿನದೀಕ್ಷೆಯನ್ನು ಪಡೆದು, ಕಾಲಾಂತರದಲ್ಲಿ ದೇಹತ್ಯಾಗ ಮಾಡಿ ಪ್ರಾಣತಕಲ್ಪವೆಂಬ ಸ್ವರ್ಗದಲ್ಲಿ ಜನಿಸುತ್ತಾನೆ. ಮುಂದೆ ಈತನೇ ಕಾಶೀ ವಿಷಯದ ರಾಜಧಾನಿಯಾದ ಕಾಕಂದಿಪುರವೆಂಬ ನಗರದ ಅರಸ ಸುಗ್ರೀವನಿಗೆ - ರಾಣಿ ಜಯರಾಮೆಯೆಂಬ ರಾಣಿಯಲ್ಲಿ ಪುಷ್ಪದಂತನೆಂಬ ಹೆಸರಿನ ಮಗನಾಗಿ ಜನಿಸುತ್ತಾನೆ. ಮುಂದೆ ಪುಷ್ಪದಂತನಿಗೆ ಯುವರಾಜ ಪಟ್ಟಾಭಿಷೇಕವೂ, ಅನೇಕ ವಿವಾಹಗಳೂ ಸಾಂಗವಾಗಿ ನೆರವೇರುತ್ತದೆ. ಪುಷ್ಪದಂತನಿಗೆ ಪಟ್ಟಮಹಿಷಿ ಚಂದ್ರಿಕಾದೇವಿಯಲ್ಲಿ ಕೀರ್ತಿಧರ ಜನಿಸಿದನು. ಅಂತೆಯೇ ಇತರ ಪತ್ನಿಯರಲ್ಲಿಯೂ ಹಲವಾರು ಪುತ್ರರು ಜನಿಸಿದರು.
ಮುಂದೊಮ್ಮೆ ಆಕಾಶದಿಂದ ಬೀಳುವ ಉಲ್ಕೆಯೊಂದನ್ನು ಕಂಡು ಪುಷ್ಪದಂತನಿಗೆ ವೈರಾಗ್ಯವುದಿಸುತ್ತದೆ. ರಾಜ್ಯಭಾರವನ್ನು ಮಗನಿಗೆ ವಹಿಸಿಕೊಟ್ಟು ತಾನು ಜಿನದೀಕ್ಷೆಯನ್ನು ಪಡೆದು, ಮುಂದೆ ಕೈವಲ್ಯಜ್ಞಾನವನ್ನು ಪಡೆದು, ನಂತರ ಮುಕ್ತಿಯನ್ನು ಹೊಂದಿ ತೀರ್ಥಂಕರನಾಗುತ್ತಾನೆ
ಶಿಶುವು(ಪುಷ್ಪದಂತ) ಜನಿಸಿದಾಗಿನಿಂದ ಹಿಡಿದು ಅವನು ತೀರ್ಥಂಕರನಾಗುವವರೆಗೂ ಕಾಲಕಾಲಕ್ಕೆ ಸ್ವತಃ ಇಂದ್ರನೇ ಧರೆಗಿಳಿದು ಬಂದು ನಾಮಕರಣವೇ ಮುಂತಾದ ಪಂಚಕಲ್ಯಾಣ ಮಹೋತ್ಸವಗಳನ್ನೂ ವೈಭವದಿಂದ ನೆರವೇರಿಸುತ್ತಾನೆ.

ಕಾವ್ಯದ ವೈಶಿಷ್ಟ್ಯತೆ: 
"ಪುಷ್ಪದಂತ ಪುರಾಣಂ" ಒಂಭತ್ತನೇ ತೀರ್ಥಂಕರನಾದ ಪುಷ್ಪದಂತನ ಚರಿತವನ್ನು ನಿರೂಪಿಸುವ - ೧೪ ಆಶ್ವಾಸಗಳಲ್ಲಿ, ೧೩೬೫ ಪದ್ಯಗಳನ್ನುಳ್ಳ ಚಂಪೂ ಕಾವ್ಯ. ಮೂಲದಲ್ಲಿ ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಪುಷ್ಪದಂತನ ಕಥೆ ಪ್ರಾಸಂಗಿಕವಾಗಿ ಬರುತ್ತದೆಯಷ್ಟೇ. ಕೇವಲ ೬೨ ಶ್ಲೋಕಗಳನ್ನುಳ್ಳ ಕತೆಯ ಎಳೆಯನ್ನು ಬಳಸಿಕೊಂಡು ೧೪ ಆಶ್ವಾಸಗಳ ದೀರ್ಘಕೃತಿಯನ್ನು ರಚಿಸಿದ್ದಾನೆ ಕವಿ ಇಮ್ಮಡಿ ಗುಣವರ್ಮ.
ಅಥವಾ, ಗುಣಭದ್ರರ ಉತ್ತರಪುರಾಣವಲ್ಲದೆ ಬೇರೆ ಯಾವುದಾದರೂ ಕೃತಿಯಿಂದ ಪ್ರೇರಿತನಾಗಿ ಕೃತಿಯನ್ನು ರಚಿಸಿದ್ದಾನೊ ಎಂಬುದು ವಿಚಾರಿಸಬೇಕಾದ ವಿಷಯ. ಆದರೆ, ಸಂಸ್ಕೃತ, ಪ್ರಾಕೃತ, ಅಪಭ್ರಂಶ ಭಾಷೆಗಳಲ್ಲಿನ ಜೈನಪುರಾಣಗಳಲ್ಲಿ ಪುಷ್ಪದಂತನ ಕಥೆಯು ಪ್ರಾಸಂಗಿಕವಾಗಿ ಮಾತ್ರ ಬರುತ್ತದೆಯಷ್ಟೇ ಹೊರತು ಸ್ವತಂತ್ರವಾಗಿ, ಸಮಗ್ರವಾಗಿ ಪುಷ್ಪದಂತನ ಚರಿತೆಯನ್ನೇ ಕುರಿತಾದ ಬೇರೆ ಯಾವ ಕೃತಿಯೂ ಲಭ್ಯವಿಲ್ಲ. ನಿಟ್ಟಿನಲ್ಲಿ ಗುಣವರ್ಮನ "ಪುಷ್ಪದಂತಪುರಾಣ"ವು ಮಹತ್ವವನ್ನು ಪಡೆದುಕೊಳ್ಳುತ್ತದೆ. (ಚಾವುಂಡರಾಯನಚಾವುಂಡರಾಯ ಪುರಾಣದಲ್ಲಿ ಪುಷ್ಪದಂತನ ಕತೆ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬರುತ್ತದೆಯಾದರೂ ಅಲ್ಲಿ ಕೂಡ ಅದು ಒಂದು ಕತೆಯಾಗಿ ಬರುತ್ತದೆ, ಅಷ್ಟೇ.)
ಮೂಲತಃ ಪುಷ್ಪದಂತ ತೀರ್ಥಂಕರನ ಕಥೆ ತೀರ ಸರಳವಾಗಿಯೇ ಇದೆ. ಆದ್ದರಿಂದಲೇ, ಸಾಮಾನ್ಯವಾಗಿ ಇತರೆ ಜೈನಪುರಾಣಗಳಲ್ಲಿ ಕಾಣಬರುವ ಭವಾವಳಿಗಳ ತೊಡಕುಗಳು ಕೃತಿಯಲ್ಲಿಲ್ಲ. ಹಾಗಾಗಿ ಕಥೆಯ ಹರಿವು ಅತಿ ಸರಳವಾಗಿ ಸಾಗಿಹೋಗುತ್ತದೆ. ಆದರೆ ಗುಣವರ್ಮನ ಕಾವ್ಯಶೈಲಿಯ ವೈಶಿಷ್ಟ್ಯವಿರುವುದು ಕಥೆಯ ನಿರೂಪಣೆಯಲ್ಲಿಯೇ. ಕಾವ್ಯದಲ್ಲಿ ಬರುವ ಪ್ರತಿಯೊಂದು ದೃಶ್ಯವೂ ಕಣ್ಣಿಗೆ ಕಟ್ಟಿದಂತೆ, ಮನಸಿಗೆ ನಾಟುವಂತೆ ಚಮತ್ಕಾರಯುತವಾಗಿ ವರ್ಣಿಸುವ ಆತನ ಶೈಲಿ ಮೆಚ್ಚಬೇಕಾದುದೇ!

ಮುಂಚೆ ತಾನು ಪ್ರೀತಿಯಿಂದ ಸಾಕಿ ಬೆಳೆಸಿದ್ದ ಜಿಂಕೆಯೊಂದು ಮರಿ ಹಾಕಿದೆ. ಹಿಂದೆಲ್ಲ ರಾಣಿ ವನಮಾಲೆಯನ್ನು ಕಂಡ ತಕ್ಷಣ ಓಡಿಬಂದು ಅವಳೊಂದಿಗೆ ಮುದ್ದುಗರೆಯುತ್ತಿದ್ದ ಜಿಂಕೆ ಇಂದು ತನ್ನ ಮರಿಯ ಆರೈಕೆಯಲ್ಲಿ ಮೈಮರೆತು ಈಕೆ ಬಂದುದನ್ನೂ ಗಮನಿಸದೆ ತನ್ನ ಮರಿಯನ್ನು ಮುದ್ದಾಡುವುದರಲ್ಲಿ ತಲ್ಲೀನವಾಗಿದೆ. ವಿಸ್ಮಯದ ಸಂಗತಿಯನ್ನು ನೋಡಿ ರಾಣಿಗಾಗುವ ಆಶ್ಚರ್ಯವನ್ನೂ, ತನಗೂ ಒಂದು ಮಗುವಾಗಲಿಲ್ಲವಲ್ಲ ಎಂಬ ಕೊರಗನ್ನೂ ಬಹಳ ಮನೋಜ್ಞವಾಗಿ ಚಿತ್ರಿಸುತ್ತಾನೆ ಕವಿ : 'ಎನ್ನಯ ನಡಪಿದ ಪುಲ್ಲೆಯಿಂದೆನ್ನಂ ಕಾಣುತ್ತೆ ಪರಿದು ಬರುತಿರ್ಪುದು ದಲ್ ಮುನ್ನೀಗಳ್ ಸಖಿ ಕೊಣಸಂ ನಿಲ್ಲದು ತಾಂ ಬಿಟ್ಟು ಪುತ್ರಸುಖಮೇಂ ಪಿರಿದೋ!’ ಎಂದುಕೊಳ್ಳುತ್ತಾಳೆ ರಾಣಿ ವನಮಾಲಾ.
ತಾನು ಸಾಕಿ ಬೆಳೆಸಿದ ಜಿಂಕೆಯೂ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿದೆ. ತನ್ನ ಆರೈಕೆಯಲ್ಲಿ ಬೆಳೆದ ಹಕ್ಕಿಗಳೂ ಕೂಡ ತಮ್ಮ ನವಿರಾದ ಗರಿಗಳ ಅಪ್ಪುಗೆಯಲ್ಲಿ ತಮ್ಮತಮ್ಮ ಮರಿಗಳನ್ನು ಆರೈಕೆ ಮಾಡುವುದರಲ್ಲಿ ತಲ್ಲೀನವಾಗಿವೆ. ಇನ್ನು ಬಳ್ಳಿಗಳಾದರೋ, ಹಲವಾರು ಸಾರಿ ಸುಫಲಗಳನ್ನು ತಳೆದು ಪ್ರಸವಸುಖವನ್ನು ಅನುಭವಿಸಿವೆ. ಇವುಗಳನ್ನೆಲ್ಲ ನೋಡಿ 'ಲೋಕಹಿತಕರನಾದ ಮಗನೊಬ್ಬನು ನನಗೆಂದು ಜನಿಸುವನೊ' ಎಂದು ಹಂಬಲಿಸುತ್ತಾಳೆ ಆಕೆ. ಸನ್ನಿವೇಶದ ವರ್ಣನೆ ಬಹಳ ಸೊಗಸಾಗಿ ಮೂಡಿಬಂದಿದೆ.
ಸಂಸ್ಕೃತಭೂಯಿಷ್ಠವಾದ, ಪಾಂಡಿತ್ಯಪ್ರಧಾನ ಪದ್ಯಗಳಷ್ಟೇ ಅಲ್ಲದೆ ದೇಸೀ ಸೊಗಡಿನ ಪದ್ಯಗಳೂ ಸುಮಾರಿವೆ ಕೃತಿಯಲ್ಲಿ. ಕಾಲಕ್ಕೆ ಪ್ರಚಲಿತವಿದ್ದ ಹಲವು ನಾಣ್ನುಡಿಗಳೂ ಸಾಂದರ್ಭಿಕವಾಗಿ ಬರುತ್ತವೆ.
ಒಟ್ಟಿನಲ್ಲಿ ಗುಣವರ್ಮ ಉತ್ತಮ ಕೃತಿರಚನಾ ಸಾಮರ್ಥ್ಯವುಳ್ಳ ಪ್ರೌಢಕವಿ. ಈತನ ಪದ್ಯಗಳು ಸೂಕ್ತಿಸುಧಾರ್ಣವ ಹಾಗೂ ಇತರೆ ಕೃತಿಗಳಲ್ಲಿಯೂ ಉದಾಹೃತವಾಗಿರುವುದೇ ಇದಕ್ಕೆ ಸಾಕ್ಷಿ. ಪುಷ್ಪದಂತ ತೀರ್ಥಂಕರನ ಬಗೆಗೆ ಬೇರೆ ಯಾವ ಭಾಷೆಯಲ್ಲಿಯೂ ಸ್ವತಂತ್ರ ಕಾವ್ಯವೇ ಇಲ್ಲದಿರುವಾಗ ಗುಣವರ್ಮನು ಪ್ರೌಢಕಾವ್ಯವನ್ನು ರಚಿಸಿ ಕನ್ನಡಕ್ಕೆ ಕೀರ್ತಿಯನ್ನು ತಂದುಕೊಟ್ಟ ಕಾರಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಈತನಿಗೊಂಡು ವಿಶಿಷ್ಟ ಸ್ಥಾನವಿದೆ. ಅಷ್ಟೇ ಅಲ್ಲದೆ, ತನ್ನ ಆಶ್ರಯದಾತನಾದ ಶಾಂತಿವರ್ಮನನ್ನು ಕಥಾನಾಯಕನಿಗೆ ಸಮೀಕರಿಸಿ ಕೃತಿರಚನೆ ಮಾಡಿರುವುದರಿಂದ ಕೃತಿಯ ಚಾರಿತ್ರಿಕ ಮೌಲ್ಯವೂ ಹೆಚ್ಚಿದೆ.

No comments:

Post a Comment