Saturday 16 July 2016

ಪುನರುತ್ಥಾನ ಪರ್ವ!

ನಮ್ಮ ಮನೆಯಿರುವ ಕಮ್ಯೂನಿಟಿಯ ಹೊರಭಾಗದಲ್ಲೊಂದು Jogging Trail ಇದೆ... ಅದರ ಒಳಹೊಕ್ಕರೆ ಸುತ್ತಲಿನ ಪ್ರಪಂಚದಿಂದ ಬೇರೆಯೇ ಆದಂತೆ ಅನಿಸುತ್ತದೆ, ನನಗೆ.
ಆಗಸದೆತ್ತರಕ್ಕೆ ಬೆಳೆದು ನಿಂತ - ಹತ್ತು ಹಲವು ತೆರದ ಮರಗಳು, ತಮ್ಮ ಸಿಹಿಮಾತುಗಳಿಂದ ಸ್ವಾಗತಿಸುವ ಬಗೆಬಗೆಯ ಹಕ್ಕಿಗಳು.., ಜನರ ಓಡಾಟ ಬಹುತೇಕ ಕಡಿಮೆಯೇ ಇರುವುದರಿಂದ ನನಗೆ ಸಾಕಷ್ಟು ಏಕಾಂತ ಲಭಿಸುತ್ತದೆ, ಅಲ್ಲಿ. ಇವಕ್ಕಿಂತ ಮಿಗಿಲಾದುದೇನು ಬೇಕೆನಿಸಬಹುದು - ನನ್ನಂಥವನಿಗೆ.
ಅಟ್ಲಾಂಟಾದಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಇಲ್ಲಿನ ಹಸಿರು, ಪ್ರಶಾಂತತೆ. ಹಚ್ಚಹಸುರಿನ ಸುಂದರ ಪರಿಸರಏಕಾಂತ, ಪ್ರಕೃತಿಯ ಮಡಿಲು.... ದೆಲ್ಲ ಸ್ವರ್ಗತುಲ್ಯವೆನಿಸುವದು.!

ದಿನಗಳು ಕಳೆದಂತೆ ನನಗೆ ಜಾಗ ಹೆಚ್ಚು ಇಷ್ಟವಾಗತೊಡಗಿತ್ತು. ಎಷ್ಟೋ ಸಾರಿ ನಾನು ಆಫೀಸಿನಿಂದ ನೇರವಾಗಿ ಜಾಗಕ್ಕೇ ಬಂದು ಸುಮಾರು ಹೊತ್ತು ಇಲ್ಲಿಯೇ ಕುಳಿತುಬಿಡುತ್ತಿದ್ದೆ. ಕತ್ತಲಾಗುವವರೆಗೂ - ಎಷ್ಟೊ ಸಾರಿ ಕತ್ತಲಾದಮೇಲೆಯೂ - ಅಲ್ಲಿಯೇ ಕುಳಿತುಬಿಡುತ್ತಿದ್ದೆ.

ಸಂಜೆಯ ತಂಪು ಗಾಳಿ, ಬಾನಿನಲ್ಲಿ ತಿಳಿಗೆಂಪಿನ ಚಿತ್ತಾರ... ಸುತ್ತಲಿನ ಹಸುರು... ಪ್ರತಿಬಾರಿಯೂ, ಅಲ್ಲಿದ್ದಷ್ಟೂ ಹೊತ್ತು ಯಾವುದೊ ನವಲೋಕವೊಂದರಲ್ಲಿ ವಿಹರಿಸಿದಂತೆ ಭಾಸವಾಗ್ತಿತ್ತು, ನನಗೆ. ಅಲ್ಲಿನ ಪರಿಸರ ನಗುಮೊಗದಿಂದ ನನ್ನನ್ನು ತನ್ನ ಮಡಿಲಿಗೆ ಕರೆವಂತೆ, ಅಲ್ಲಿದ್ದ ಪ್ರತಿ ಮರವೂ ಪ್ರತಿ ಹಕ್ಕಿಯೂ ನನ್ನೊಡನೆ ಏನನ್ನೊ ನುಡಿದಂತೆನಿಸುತ್ತಿತ್ತು.
 
ಆ ದಾರಿಯಲ್ಲಿ ನನಗೆಂದೇ ಕಟ್ಟಿದರೋ ಎನಿಸುವ ಕುಟೀರವೊಂದು! ಮುಂಚೆಯೆಲ್ಲ ನನ್ನ 'ವೀಕೆಂಡ್' ಶುರುವಾಗುತ್ತಿದ್ದುದು ಜಾಗದಲ್ಲಿಯೇ.. ಬೆಳಿಗ್ಗೆ ಆರಕ್ಕೇ ಯಾವುದಾದರೂ ಪುಸ್ತಕವೊಂದನ್ನು ಹಿಡಿದು ಅಲ್ಲಿಗೆ ಹೋಗಿಬಿಡುತ್ತಿದ್ದೆ. ಶನಿವಾರ-ಭಾನುವಾರಗಳಲ್ಲಿ ಒಂದೆರಡು ತಾಸಾದರೂ ನನ್ನ ಕಾವ್ಯಾಧ್ಯಯನ ಅಲ್ಲಿ ಸಾಗುತ್ತಿತ್ತು. ನಾನು ಅಲ್ಲಿದ್ದ ಉಯ್ಯಾಲೆಯ ಮೇಲೆ ಕುಳಿತೇ ಇಲಿಯಡ್, ಒಡಿಸಿಸ್' ಕಾವ್ಯಾನುವಾದಗಳ ಸುಂದರ ಘಟ್ಟಗಳನ್ನು ಓದಿದ್ದೇನೆ. ಅದೇ ಜಾಗದಲ್ಲಿಯೇ ನಮ್ಮ ರುದ್ರಭಟ್ಟನ "ಜಗನ್ನಾಥ ವಿಜಯ" ಹಲವು ಅಧ್ಯಾಯಗಳನ್ನೂ ಓದಿದ್ದೇನೆ.
  
ಮಮ್ಮಟನು ತನ್ನ 'ಕಾವ್ಯಪ್ರಕಾಶ'ದಲ್ಲಿ ಕಾವ್ಯಪ್ರಯೋಜನದ ಬಗ್ಗೆ ಹೇಳುವಾಗ 'ಸದ್ಯಃ ಪರನಿರ್ವೃತಯೇ...' ಎಂದಿದ್ದಾನೆ. ಅಂದರೆ 'ಕಾವ್ಯಾಧ್ಯಯನದಲ್ಲಿ ತೊಡಗಿರುವ ಸಹೃದಯನಿಗೆ ತತ್ಕಾಲದಲ್ಲಿ (ಕಾವ್ಯವನ್ನೋದುತ್ತಿರುವಾಗ) ಪರಮಾನಂದವುಂಟಾಗುತ್ತದೆ' ಎಂದು. ಇದು ಒಳ್ಳೆಯ ಕಾವ್ಯಗಳ ಬಗ್ಗೆ ಸರ್ವಥಾ ಅನ್ವಯಿಸುವ ಮಾತೇ ಆದರೂ ಆ ಮಾತಿನಲ್ಲಿನ ಸತ್ಯಾಂಶ ಈ ಕುಟೀರದಲ್ಲಿ ಕುಳಿತು ಕಾವ್ಯವನ್ನೋದುವಾಗ ಬೋಧೆಯಾಯಿತು. ಅಲ್ಲಿ ಕುಳಿತು ಓದುವುದು ಪರಮಾನಂದಕಾರಕವೇ ಆಗಿತ್ತು, ನನಗೆ.
ಆದರೂ, ಇವೆಲ್ಲದರ ನಡುವೆಯೂ ನನ್ನ ಮನಸಿನ ಒಳದನಿ ಬೇರೇನನ್ನೊ ಹೇಳುತ್ತಿರುವಂತೆನಿಸುತ್ತಿತ್ತು. ಬೇರಾವುದೋ ಕಡೆಗೆ ನನ್ನ ದೃಷ್ಟಿಯನ್ನು ತಿರುಗಿಸುವ, ಬೇರಾವುದಕ್ಕೋ ನನ್ನನ್ನು ಪ್ರೇರೇಪಿಸುವ ತವಕ, ಅದರದ್ದು.. ಬಹುಶಃ ಇದೇ ಸಮಯದಲ್ಲಿ - ಒಂದು ದಿನ - ನನ್ನ ಕಲ್ಪನೆಯೆದುರು ಕುಂಚಗಳು, ವರ್ಣಗಳು ಸುಳಿದಾಡಿರಬೇಕು. ಅಹ್! “ಹೌದು, ನಾನೇಕೆ ಮತ್ತೆ ಪೆಯಿಂಟಿಂಗ್ ಶುರು ಮಾಡಬಾರದು?” ಎಂದೊಮ್ಮೆ ಪ್ರಶ್ನಿಸಿಕೊಂಡಿದ್ದೆ, ಅಂದು

ಸರಿ, ಯೋಚನೆ ಮನಸಿನಲ್ಲಿ ಅಂದೇ ಮೂಡಿ ಗಟ್ಟಿಯಾಗಿ ನೆಲೆಯೂರಿತು. ನಂತರ ಕೆಲವು ದಿನಗಳಲ್ಲೇ ಪೆಯಿಂಟಿಂಗಿಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಕಲೆಹಾಕಿದೆ.
ಕಳೆದ ಎರಡು ವರ್ಷಗಳಲ್ಲಿ - ಮೈಸೂರಿನಲ್ಲಿದ್ದಾಗ - ಪದೆಪದೆ ಪೆಯಿಂಟಿಂಗ್ ಮಾಡುವ ಪ್ರಯತ್ನಗಳಲ್ಲೆಲ್ಲ ಸೋಲನ್ನನುಭವಿಸಿದ್ದ ವಿಷಯ ಆಗೊಮ್ಮೆ ನೆನಪಾಯಿತಾದರೂ, ‘ ನಿಟ್ಟಿನಲ್ಲಿ ಮತ್ತೊಮ್ಮೆ ಪ್ರಯತ್ನಿಸಿ ನೋಡಿಯೇಬಿಡುವ’ ಎಂದು ಅಷ್ಟರಲ್ಲೇ ನಿಶ್ಚಯಿಸಿದ್ದೆ.

( ದಿನ ರಜೆಯಿದ್ದುದರಿಂದ) ಮುಂದಿನ ಸೋಮವಾರದ ದಿನ ಬೆಳಿಗ್ಗೆ ಐದೂಮುಕ್ಕಾಲಿಗೇ ಎದ್ದು ನನ್ನ ಮೆಚ್ಚಿನ ಜಾಗಕ್ಕೆ ಹೋಗಿ ತಲುಪಿದೆ. ನಾನು ಅಲ್ಲಿಗೆ ತಲುಪಿದಾಗ ಇನ್ನೂ ಬೆಳಕೂ ಹರಿದಿರಲಿಲ್ಲ. ಸರಿ, ನಸುಬೆಳಕು ಮೂಡುವವರೆಗೂ ಕಾದಿದ್ದು ಕೊನೆಗೂ ಮತ್ತೆ ಕೈಯಲ್ಲಿ ಕುಂಚ ಹಿಡಿದು ಬಣ್ಣಗಳ ಲೋಕದಲ್ಲೊಮ್ಮೆ ವಿಹರಿಸಿದೆ. ದಿನದ ಎರಡು ತಾಸಿನ ಪ್ರಯತ್ನ ವಿಫಲವೇನೂ ಆಗಲಿಲ್ಲ.


ಹಲಕೆಲವು ತಪ್ಪುಗಳಿದ್ದಾಗಿಯೂ ಅಂದಿನ ಚಿತ್ರ ಮನಸಿಗೆ ಸಮಾಧಾನವನ್ನು ತಂದಿತು. ನನ್ನಲ್ಲಿನ್ನೂ ಕಲೆಯ ಕುರುಹು ಇನ್ನೂ ಇದೆಯೆಂಬುದು ಖಾತ್ರಿಯಾಯಿತು. (ನನ್ನನ್ನು ಒಬ್ಬ 'ಕಲಾವಿದ'ನೆಂದು ಕರೆದುಕೊಳ್ಳುವ ಧೈರ್ಯ ಮಾಡಲಾರೆ. ಆದರೆ ಕಲೆಯಂತೂ ಕಲೆಯೇ!)
ಹೊಸತೊಂದು ಹುಮ್ಮಸ್ಸು, ಉತ್ಸಾಹ ಮೂಡಿತ್ತು, ಅಂದು. ಸಂತಸವನ್ನು ಹೊತ್ತೇ ಮನೆಗೆ ಮರಳಿದೆ.

ಮತ್ತೆ ಮುಂದಿನ ಎರಡು weekendಗಳು ಕೂಡ ಇದೇ ದಾರಿಯಲ್ಲಿ ಸಾಗಿತು. ಆಗ ನಾನು ರಚಿಸಿದ ಚಿತ್ರಗಳಿವು.

ನಾನುಅರ್ಧನಾರೀಶ್ವರ’ ಚಿತ್ರದ ರಚನೆಯಲ್ಲಿ ತೊಡಗಿದ್ದಾಗಲೇ ಹರಿಹರನ ಕಲ್ಪನೆಯೂ ಮನಸಿನಲ್ಲಿ ಮೂಡಿ ನಿಂತಿತ್ತು. ಹಾಗಾಗಿ, ಸಮಯವಿದ್ದಾಗಲೆಲ್ಲ ಸಿಕ್ಕ ಸಿಕ್ಕ ಕಾಗದಗಳ ಮೇಲೆಲ್ಲ ಹರಿ-ಹರರ ಚಿತ್ರಗಳನ್ನು ಗೀಚುತ್ತಿದ್ದೆ. ನನ್ನ ಮೊಬೈಲಿನಲ್ಲಿನ Autodesk App ಕೂಡ ಇದಕ್ಕೆ ಹೊರತಾಗಲಿಲ್ಲ
ಅಂತೂ ಅರ್ಧನಾರೀಶ್ವರನ ಚಿತ್ರ ಮುಗಿವ ಹೊತ್ತಿಗೆ ಹರಿಹರರ ಚಿತ್ರದ ಕನಸೂ ರೂಪುರೇಖೆ ಪಡೆದುಕೊಂಡು ಕಾಣಿಸಿತು.

 
ನಂತರ ಚಿತ್ರದಲ್ಲಿದ್ದ ತಪ್ಪುಗಳನ್ನು ಅಲ್ಪಸ್ವಲ್ಪ ತಿದ್ದುವ ಕೆಲಸವೂ ಸಾಗಿತು.
ನನಗೆ ಬಹಳ ವರ್ಷಗಳ ಹಿಂದೆಯೇ ಹರಿ-ಹರ ತತ್ತ್ವವೂ ಕಲ್ಪನೆಯೂ ಬಹುವಾಗಿ ಮೆಚ್ಚುಗೆಯಾಗಿತ್ತು. ಈಗಂತೂ ಅದು ಸಂಪೂರ್ಣವಾಗಿ ನನ್ನ ಮನಸನ್ನು ಆವರಿಸಿತ್ತು. ಹಾಗಾಗಿ, ಸಾಧ್ಯವಾದಷ್ಟೂ ಮಟ್ಟಿಗೆ ಪ್ರಯತ್ನದಲ್ಲಿ ಯಶಸ್ಸನ್ನು ಗಳಿಸಬೇಕೆಂದು ಬಯಸಿದ್ದೆ. ಆದ್ದರಿಂದ ಚಿತ್ರದ ಪ್ರತಿ ಹಂತದಲ್ಲೂ ಹೆಚ್ಚಿನ ಮುತುವರ್ಜಿ ವಹಿಸಿ ನಡೆಯುತ್ತಿದ್ದೆ.
ಎಲ್ಲಾದರೂ ಏನಾದರೂ ತಪ್ಪುಗಳು ಕಂಡುಬಂದಲ್ಲಿ ಅವನ್ನು ತಿದ್ದಿಕೊಳ್ಳುತ್ತ ಮುಂದುವರೆದೆ.



 
ಮಧ್ಯೆ ಹಲವು ಅನಿವಾರ್ಯ ಕಾರಣಗಳಿಂದ ಎರಡು ವೀಕೆಂಡ್ಗಳಲ್ಲಿ ಚಿತ್ರವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ (ಆಗ ನಾನು ಅಟ್ಲಾಂಟಾದಲ್ಲಿರಲಿಲ್ಲ!). ಕೊರಗು ನನ್ನನ್ನು ಹೆಚ್ಚಿಗೇ ಕಾಡಿತ್ತೆನ್ನಬಹುದು. ಮುಂದಿನ ದಿನಗಳಲ್ಲಿ ಯಾವ ಕಾರಣಕ್ಕೂ ವಿಳಂಬ ಮಾಡುವುದು ಬೇಡವೆಂದು ನಿಶ್ಚಯಿಸಿ ಚಿತ್ರವನ್ನು ಮುಂದುವರೆಸುವುದರಲ್ಲಿ ತೊಡಗಿದೆ.
 

ಕೊನೆಗೊಮ್ಮೆ! ಕೊನೆಗೂ ಒಮ್ಮೆ ನನಗೆ 'ಚಿತ್ರ ಪೂರ್ಣವಾಯಿತು' ಎಂದೆನಿಸಿದ ದಿನ ಬಂದೇ ಬಂತು. ಅಂದು (ಹಲವು ಕೆಲವು ದೋಷಗಳಿದ್ದಾಗಿಯೂ) ನಾನು ಕಂಡುದರ ಬಗ್ಗೆ ಬಹಳವೇ ಸಂತಸವಾಯಿತು, ನನಗೆ. ಕೊನೆಗೂ ನನ್ನ ಶ್ರಮ ಒಳ್ಳೆಯ ಫಲವನ್ನೇ ಕೊಟ್ಟಿತೆಂದು ಮನಸಿಗೆ ತೋರಿತು. ಸಂತಸದಲ್ಲೇ ತೇಲುತೇಲುತ್ತ ಮನೆಗೆ ಮರಳಿದೆ - ಹರಿಹರರೊಡನೆ.

ಚಿತ್ರಕ್ಕೆ ನಾನು Internetಲ್ಲಿ ನೋಡಿದ್ದ ಹರಿಹರ ಮೂರ್ತಿಯೇ ಸ್ಫೂರ್ತಿ. ಮೂರ್ತಿಯೆದುರು ನನ್ನ ಚಿತ್ರ ಏನೇನೂ ಅಲ್ಲ ಎಂದು ಯಾವ ಸಿಗ್ಗಿಲ್ಲದೆ ಹೇಳಬಲ್ಲೆ. ಅದು ಸತ್ಯವೂ ಕೂಡ. ಅದಾಗಿಯೂ, ಚಿತ್ರವನ್ನು ನೋಡಿ ನನ್ನ ಮನಸ್ಸು ನಲಿದದ್ದು, ಸಾರ್ಥಕ್ಯವನ್ನನುಭವಿಸಿದ್ದು ಸುಳ್ಳಲ್ಲ.
ಅಲ್ಲ, ನನಗೇ ಹೀಗನಿಸಿರಬಹುದಾದರೆ, ನೂರಾರು ವರ್ಷಗಳ ಹಿಂದೆ (ಇದಕ್ಕಿಂತ ನೂರುಪಟ್ಟು ಸುಂದರವಾಗಿ) ಮೂಲಮೂರ್ತಿಯನ್ನು ಕೆತ್ತಿದ ಅಜ್ಞಾತ ಶಿಲ್ಪಿಯು ಅದೆಷ್ಟು ಆನಂದಿಸಿರಬೇಡ! ಅಬ್ಬ! ಅದನ್ನು ನೆನೆದರೇ ರೋಮಾಂಚನವಾಗುತ್ತದೆ.


ಒಟ್ಟಾರೆಯಾಗಿ, ನಾನು ಇಲ್ಲಿಗೆ ಬಂದ ನಂತರದ ದಿನಗಳಲ್ಲಿ ನನ್ನಲ್ಲಿನ್ನೂ ಚಿತ್ರಕಲೆಯ ಬಗೆಗೆ ಆಸಕ್ತಿ, (ಒಂದು ಮಟ್ಟಿಗಿನ) ಹಿಡಿತವಿರುವುದನ್ನೂ ಅರಿತುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಬೇಕಿದೆ ಎಂಬುದನ್ನೂ ಮನಗಂಡಿದ್ದೇನೆ. ತಪ್ಪುಗಳನ್ನು ತಿದ್ದಿಕೊಂಡು, ದೋಷಗಳನ್ನು ನಿವಾರಿಸಿಕೊಂಡು ದಾರಿಯಲ್ಲಿ ಇನ್ನಷ್ಟು ಮುಂದೆ ಕ್ರಮಿಸುವ ಆಶಯವನ್ನು ಹೊಂದಿದ್ದೇನೆ.

4 comments:

  1. ನಿಮ್ಮ ಬರವಣಿಗೆ ಮತ್ತು ಚಿತ್ರಗಳು ಬಹಳ ಮೆಚ್ಚುಗೆಯಾದವು .. ಇವೆರಡನ್ನೂ ಪ್ರೋತ್ಸಾಹಿಸಿದ ಪ್ರಕೃತಿಯೂ ಸುಂದರ! ಬರವಣಿಗೆ - ಚಿತ್ರಕಲೆ ಎರಡನ್ನೂ ಮುಂದುವರೆಸಿ.. ಅಭಿನಂದನೆಗಳು
    ಮಮತಾ

    ReplyDelete
  2. ಧನ್ಯವಾದಗಳು

    ReplyDelete
  3. ನಿಮ್ಮ ನಿಜ ನಾಮ ಮತ್ತು ಈ blogನ ಇರವು ಎರಡೂ ಇಂದೇ ತಿಳಿಯಿತು. ಮೊದಲು ಓದಿದ ಈ postನಿಂದ ನಿಮ್ಮ ಹಾಬೀಸ್ ಪರಿಚಯ ಕೊಂಚಮಟ್ಟಿಗೆ ಆಯಿತು.

    ಮುಂಚಿನ ಬರಹಗಳನ್ನೂ ಓದಲಿದ್ದೇನೆ.

    - ಶ್ರೀಕ್

    ReplyDelete