Friday, 27 March 2015

ಕವಿ ಪರಿಚಯ: ಆಂಡಯ್ಯ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ ಕವಿ ಆಂಡಯ್ಯ. ಈತ 'ಕಬ್ಬಿಗರ ಕಾವ' ಎಂದು ಪ್ರಚಲಿತವಾದ ಕಾವ್ಯದ ಕರ್ತೃ.
ಈತ ತನ್ನ ಸ್ಥಳದ ಬಗೆಗೆ ಕಾವ್ಯದಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿಲ್ಲ.. ಆದರೆ ಅವನು ಬಣ್ಣಿಸಿರುವ 'ಕನ್ನಡಮೆನಿಪ್ಪಾನಾಡು..' ಬನವಾಸಿ ಇರಬೇಕೆಂದು ಊಹಿಸಲಾಗಿದೆ. ಇನ್ನುಳಿದಂತೆ, ಕಾವ್ಯದಲ್ಲಿ ಸಂಕ್ಷಿಪ್ತವಾಗಿ ಕವಿಯು ತನ್ನ ಪ್ರವರವನ್ನು ಹೇಳಿಕೊಳ್ಳುತ್ತಾನೆ : ಪರಮ ಜಿನಭಕ್ತನೂ, ಸದಾಚಾರಿಯೂ, ವಿದ್ವಾಂಸನೂ ಆದ ಆಂಡಯ್ಯನೆಂಬುವವನಿಗೆ ಸಾಂತ, ಗುಮ್ಮಟ ಮತ್ತು ವೈಜಣನೆಂಬ ಮೂವರು ಮಕ್ಕಳಾದರು. ಇವರಲ್ಲಿ ಹಿರಿಯನಾದ ಸಾಂತ ಹಾಗೂ ಅವನ ಹೆಂಡತಿ ಒಲ್ಲವ್ವೆ, ಇವರಿಬ್ಬರ ಮಗನೇ ಕವಿ - ಆಂಡಯ್ಯ.  (ಈತನ ಹೆಸರಿನ ಬಗ್ಗೆ ಕೆಲವು ಚರ್ಚೆಗಳಿದ್ದು, ಈತನ ಹೆಸರು ಬ್ರಹ್ಮಯ್ಯನೆಂದೂ, ಅದಕ್ಕೆ ಸಂವಾದಿಯಾಗಿ ಆಂಡಯ್ಯ ಎಂದಾಗಿರಬೇಕೆಂದೂ ಹೇಳುವವರಿದ್ದಾರೆ. ಆಂಡಿ ಎಂದರೆ ತಮಿಳಿನಲ್ಲಿ ಜೈನ ಸನ್ಯಾಸಿ ಎಂದು ಬಳಕೆಯಾಗುವ ಉದಾಹರಣೆಯನ್ನೂ ಈತನ ಹೆಸರಿಗೆ ಪ್ರಸ್ತಾಪಿಸಲಾಗಿದೆ.)
ಕಾವ್ಯದ ಹಲವು ಭಾಗಗಳಲ್ಲಿ ಜಿನಸ್ತುತಿಯಿರುವುದರಿಂದಲೂ, ಹಾಗೂ ಕಾವ್ಯಾರಂಭದಲ್ಲಿ ರನ್ನ,ಜನ್ನ ಮೊದಲಾದ ಜೈನಕವಿಗಳನ್ನು ನೆನೆದಿರುವುದರಿಂದಲೂ ಈತನು ಜೈನಕವಿಯಿರಬೇಕೆಂದು ಊಹಿಸಬಹುದು.

ಕಥಾವಸ್ತು
ಶಿವನು ಚಂದ್ರನನ್ನು ಅಪಹರಿಸಿದನೆಂದು ತಿಳಿದು ಕಾಮನು ಕ್ರುದ್ಧನಾಗುತ್ತಾನೆ. ತನ್ನ ಸೈನ್ಯದೊಡನೆ ಶಿವನ ಮೇಲೆ ಯುದ್ಧಕ್ಕೆ ಹೊರಡುತ್ತಾನೆ.
ಕಾಮನ ಸೈನ್ಯದೆದುರು ಶಿವನು ಕಳುಹಿಸಿದ ವೀರಭದ್ರನು ಸೋಲುತ್ತಾನೆ. ಮುಂದೆ ಶಿವನೇ ಕಾಮನೊಡನೆ ಹೋರಾಡುತ್ತಾನೆ. ಆದರೆ ಕಾಮನು ಪ್ರಯೋಗಿಸಿದ ಬಾಣಗಳು ತಾಗಿ ಶಿವನು ಅರೆವೆಣ್ಣಾಗುತ್ತಾನೆ. ಇದರಿಂದಾಗಿ ಶಿವನು ಕಾಮನಿಗೆ "ನೀನು ನಿನ್ನ ಪ್ರಿಯೆಯನ್ನು ಆಗಲಿ, ನೀನಾರೆಂದೇ ತಿಳಿಯದೆ ಯಾರಿಗೂ ತಿಳಿಯದ ಜಾಗದಲ್ಲಿ ತಲೆಮರೆಸಿಕೊಂಡಿರು" ಎಂದು ಶಾಪವನ್ನು ಕೊಡುತ್ತಾನೆ.
ಶಾಪದಿಂದ ಕಾಮನು ತಾನು ಯಾರೆಂದೇ ಮರೆತು ಇರುತ್ತಿರುವಾಗ ಒಬ್ಬ ಅಪ್ಸರೆಯು ಬಂದು ಅವನಿಗೆ ಹಿಂದೆ ನಡೆದ ವಿಷಯವನ್ನು ತಿಳಿಸುತ್ತಾಳೆ. ಅಲ್ಲಿಗೆ ಅವನಿಗೆ ಶಾಪವಿಮೋಚನೆಯಾಗಿ ಮುಂಚಿನ ಸಂಗತಿ ನೆನಪಾಗುತ್ತದೆ. ನಂತರದಲ್ಲಿ ಅವನು ತನ್ನ ಹೆಂಡತಿ ಇಚ್ಚೆಗಾರ್ತಿಯನ್ನು ಕೂಡಿಕೊಂಡು ಸುಖವಾಗಿರುತ್ತಾನೆ.

ಕಬ್ಬಿಗರ ಕಾವ
ಇತ್ತ ತೀರ ಸಣ್ಣದೂ ಅಲ್ಲದ, ಅತ್ತ ತೀರ ವಿಸ್ತಾರವಲ್ಲದ (ಮಹಾಕಾವ್ಯದಷ್ಟು) ಕಾವ್ಯವನ್ನು ಖಂಡಕಾವ್ಯವೆಂದೇ ಹೇಳಬಹುದು. ಅಚ್ಚಗನ್ನಡದಲ್ಲಿಯೇ ರಚನೆಯಾಗಿರುವುದು ಕಾವ್ಯದ ಮೊದಲ ವೈಶಿಷ್ಟ್ಯ. ಕಾಮನ ಕುರಿತಾದ ಕಾವ್ಯವಾದರೂ ಜುಗುಪ್ಸೆ ಹುಟ್ಟಿಸುವಂತಹ, ಮಿತಿಮೀರಿದ ಶೃಂಗಾರ ವರ್ಣನೆಯಿರದಿರುವುದೂ ಒಂದು ವಿಶೇಷ. ಅಷ್ಟೇ ಅಲ್ಲ, ತನ್ನ ಆಶ್ರಯದಾತ ರಾಜನ (ಕದಂಬ ಕಾಮದೇವ)ಚರಿತ್ರೆಯನ್ನೂ ಕಾವ್ಯದಲ್ಲಿ ಧ್ವನಿಸಿರುವುದು ಆಂಡಯ್ಯನ ಸ್ವತಂತ್ರ ಪ್ರತಿಭೆಯ ದ್ಯೋತಕವಾಗಿದೆ.
"ಸೊಗಸಾದ ಸಂಸ್ಕೃತವನ್ನು ಬೆರಕೆ ಮಾಡದೆಯೆ ಕನ್ನಡದಲ್ಲಿ ಮನೋಹರವಾಗಿ ಕಾವ್ಯವನ್ನು ಹೇಳುವುದಕ್ಕೆ ಮುಂಚಿನ ದೊಡ್ಡಕವಿಗಳು ಸಮರ್ಥರಾಗಲಿಲ್ಲ. ಮಾತನಾಡಿದ ಹಾಗೆ ಸೊಗಸಾಗಿ ಹೇಳುವ ಸಾಮರ್ಥ್ಯ ಸಂಪೂರ್ಣವಾಗಿ ಈತನಿಗೆ ಲಭಿಸಿದೆ; ಬೇರೆ ಯಾರಿಗೂ ಇಲ್ಲ" ಎಂದು ಸ್ವತಃ ಕವಿಯೇ ತನ್ನ ಬಗೆಗೆ ಹೇಳಿಕೊಳ್ಳುತ್ತಾನೆ.

ನಿಜ, ಈತನೊಬ್ಬನೇ ನಿಟ್ಟಿನಲ್ಲಿ ಯಶಸ್ವಿಯಾದವನೆಂದು ಹೇಳಬಹುದು. ಕಾವ್ಯವನ್ನು ಅವನು ಸಂಸ್ಕೃತವನ್ನು ಬೆರೆಸದೇ, ಅಚ್ಚಗನ್ನಡದಲ್ಲಿಯೇ ರಚಿಸಿದ್ದಾನೆ (ಕೆಲವು ಮರಾಠಿ ಶಬ್ದಗಳನ್ನು ಬಳಸಿರುವುದುಂಟು. ಸಂಸ್ಕೃತದ ಕೆಲವು ಪದಗಳು ತದ್ಭವ  ರೂಪದಲ್ಲಿ ಬಳಕೆಯಾಗಿವೆ). ಹೀಗೆ ವಿನೂತನ ರೀತಿಯಲ್ಲಿ ಬರೆದವರಲ್ಲಿ ಇವನೇ ಮೊದಲು, ಇವನೇ ಕೊನೆ.!(?)

Sunday, 30 November 2014

ಕನಕದಾಸರ "ರಾಮಧಾನ್ಯ ಚರಿತ್ರೆ" - ೪

'ಅರಸ ಕೇಳ್ಮರುದಿವಸದಲಿ ರಘು
ವರನು ತನ್ನೋಲಗಕೆ ನೃಪರನು
ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು
ತರಣಿಸುತ; ಜಾಂಬವ ವಿಭೀಷಣ
ರಿರದೆ ಬಂದರು ಕೈಮುಗಿದು ಕು
ಳ್ಳಿರಲು ಪರಿತೋಷದಲಿ ನುಡಿದನು ರಾಮ ನಸುನಗುತ'                          -೧೨೩

’ಕೇಳು ಲಕ್ಷ್ಮಣ, ಕೇಳು ಜಾಂಬವ, ಕೇಳು ನಳ ನೀಲಾದಿ ಸುಭಟರೆ ಕೇಳಿರೈ, ನರೆದಲೆಗ-ವ್ರಿಹಿಯರು ಸೆರೆಯೊಳಿರ್ದವರ ಕಾಲ ಸವೆದುದು ದಿವಸವಿಂದಿಗೆ ಏಳು ತಿಂಗಳು ಕಳೆದವವದಿರ ಪಾಲಿಸಲು ಬೇಕು. ಅನಿಲಸುತ, ನೀ ಕರೆದು ತಾ’ ಎಂದ.

ಹನುಮಂತನು ರಾಮನ ಅಪ್ಪಣೆಯನ್ನು ಪಡೆದು ಗೌತಮ ಮಹರ್ಷಿಗಳ ಆಶ್ರಮಕ್ಕೆ ಬಂದನು. ಅವರಿಗೆ ನಮಿಸಿ ಆಶೀರ್ವಾದ ಪಡೆದ ನಂತರ ತಾನು ಬಂದ ವಿಷಯವನ್ನು ತಿಳಿಸಿ, ಕೂಡಲೆ ನರೆದಲೆಗ ಹಾಗೂ ವ್ರಿಹಿಗರನ್ನು ಸೆರೆಮನೆಯಿಂದ ಬಿಡಿಸಿ ತಮ್ಮೊಡನೆ ಕರೆದುಕೊಂಡು ಕೂಡಲೆ ಅಯೋಧ್ಯೆಗೆ ಬರಬೇಕಾಗಿ ಬಿನ್ನವಿಸಿದನು. ಗೌತಮ ಮಹರ್ಷಿಯು ಹನುಮಂತನ ಮಾತಿಗೆ ಒಪ್ಪಿ, ಕೂಡಲೆ ಆಶ್ರಮದ ಇತರ ತಾಪಸಿಗಳನ್ನು ಕರೆಸಿ, ನರೆದಲೆಗ-ವ್ರಿಹಿಗರನ್ನೊಡಗೊಂಡು ಅಯೋಧ್ಯೆಗೆ ಹೊರಟುಬಂದರು.
-----------------------------------------------------------------------------------------------------------
ಅಯೋಧ್ಯೆಗೆ ದಯಮಾಡಿಸಿದ ಗೌತಮ ಮಹರ್ಷಿಗಳನ್ನು ರಾಮನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಸತ್ಕರಿಸಿದನು. ನಂತರದಲ್ಲಿ:

ಇವರ ವ್ಯವಹಾರವನು ಪರಿಹರಿ
ಸುವ ವಿಚಾರವ ಮಾಡಿ ಮನದಲಿ
ರವಿಕುಲಾನ್ವಯ ರಾಮ ನೆನೆದನು ಹೃದಯಶುದ್ಧಿಯಲಿ -
ಶಿವನ ಧ್ಯಾನಿಸಲಾ ಕ್ಷಣವೆ ತ್ರೈ
ಭುವನಕರ್ತರು ಇಂದ್ರ ಮೊದಲಾ
ದವರು ಬಂದರಯೋಧ್ಯಾಪುರಧಾಮನೋಲಗಕೆ                                    -೧೨೯

ವಸುಗಳು, ಅಮರರು, ಭುಜಂಗಾಮರರು, ಅಸುರ, ಕಿನ್ನರ, ಯಕ್ಷ, ರಾಕ್ಷಸ, ಶಶಿ-ರವಿಗಳು, ಆದಿತ್ಯ, ವಿದ್ಯಾಧರರು, ಗುಹ್ಯಕರು, ವಸುಧೆಯಮರರು(ಬ್ರಾಹ್ಮಣರು), ಕ್ಷತ್ರಿಯರು, ಜೋಯಿಸರು, ವೈಶ್ಯ ಚತುರ್ಥರು, ಉನ್ನತ ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ.

ಇಂತೆಸೆವನಾ ಸಭೆಯೊಳಗೆ ಮತಿ
ವಂತ ನುಡಿದನು ಧಾನ್ಯವರ್ಗದ
ಸಂತತಿಯ ಬರಹೇಳಿಯೆನೆ, ಸೆರೆಮನೆಯೊಳಿರ್ದವರು
ನಿಂತು ಕರಗಳ ಮುಗಿದು 'ಧರಣೀ
ಕಾಂತ ರಘುವರನೀ ಸುಬುದ್ಧಿಯ
ನೆಂತು ನಮಗರುಹುವಿಯದ ಪೇಳೆಂದ' ನರೆದಲೆಗ                                   -೧೩೧

ಕೂಡಿದ ಸಭೆಯೊಳಕ್ಕೆ ನರೆದಲೆಗ-ವ್ರಿಹಿಗರನ್ನು ಕರೆಸಲಾಯಿತು. ಆಗ ನರೆದಲೆಗನು "ಅಯ್ಯಾ, ರಘುವರನೇ, ನಮ್ಮಿಬ್ಬರ ನಡುವಿನ ವ್ಯಾಜ್ಯ ಬಗೆಹರಿಸಲು ನೀವು ಯಾವ ನ್ಯಾಯವನ್ನು ತಿಳಿಸಲಿರುವಿರಿ?" ಎಂದು ಕೇಳಿದ.

ಎನಲು ರಾಮನೃಪಾಲ ನೋಡಿದ
ಘನ ತಪೋಮಹಿಮರಿಗೆ ನುಡಿದನು -
’ಮನವ ವಂಚಿಸಲಾಗದೀ ಧರ್ಮವನು ನೆರೆ ತಿಳಿದು
ಅನುನಯದೆ ಪೇಳೆ’ನೆ, ಮುನೀಂದ್ರರು
ಅನಿಮಿಷರನೀಕ್ಷಿಸಿದರಲ್ಲಿಯ (ಅನಿಮಿಷರು-ದೇವತೆಗಳು)
ಘನ ಮಹಾಸಭೆಯೊಳಗೆ ಭಾರ್ಗವ ರಾಮನಿಂತೆಂದ                                  -೧೩೨

’ಆರು ನುಡಿಯರೆ! ನೀವು ಹಿರಿಯರು, ಮೀರಿಸುವರಾರಿವರೊಳಗೆ ಗುಣಸಾರನ್ ಆವನು ಪೇಳ್’ ಎನಲು, ಜಂಭಾರಿ ನಸುನಗುತ "ಸಾರಹೃದಯನು ನರೆದಲೆಗ; ನಿಸ್ಸಾರನೀ ವ್ರಿಹಿ" ಎನಲು, ಮರುತಾತ್ಮಜ ನೋಡಿದನು ಸನ್ನೆಯಲಿ ನಾರದನ. (ಜಂಭಾರಿ - ಜಂಭಾಸುರ ಎಂಬ ರಾಕ್ಷಸನ ವೈರಿ, ಇಂದ್ರ; ಮರುತಾತ್ಮಜ - ಹನುಮಂತ)

"ಅಹುದಹುದು, ಸುರಪನ (ಇಂದ್ರ) ಮಾತು ನಿಶ್ಚಯವಹುದು; ನರೆದಲೆಗನೆ ಸಮರ್ಥನು, ಬಹಳ ಬಲಯುತ. ಸೆರೆಗೆ ತಳ್ಳಲು ಕಾಂತಿಗೆಡಲಿಲ್ಲ. ಸಹಜವಿದು. ಪರಪಕ್ಷವಾದಡೆ (ಪ್ರತಿಪಕ್ಷದವನು - ಭತ್ತ) ವ್ರಿಹಿ ಕರಗಿ ಕಂದಿದನು ಸೆರೆಯಲಿ. ವಿಹಿತವಿದು ಕೇಳ್" ಎಂದು ನಾರದ ನುಡಿದನು ನಸುನಗುತ.

"ಎಲ್ಲ ನವಧಾನ್ಯದಲಿ ಈತನೆ ಬಲ್ಲಿದನು, ಹುಸಿಯಲ್ಲ. ಬಡವರ-ಬಲ್ಲಿದರನಾರೈದು ಸಲಹುವನ್ ಇವಗೆ ಸರಿಯುಂಟೆ? ನೆಲ್ಲಿನಲಿ ಗುಣವೇನು, ಭಾಗ್ಯದಿ ಬಲ್ಲಿದರ ಪತಿಕರಿಸುವನು (ಪತಿಕರಿಸು - ಒಲಿಯುವುದು, ಕೃಪೆ ಮಾಡು). ಅವನಲ್ಲಿ ಸಾರವ ಕಾಣೆ" ಎಂದನು ಕಪಿಲ ಮುನಿ ನಗುತ.
ಹೀಗೆ, ಸುರರೂ ಮುನಿಗಳೂ ಧಾನ್ಯಗಳ ಪೈಕಿ ನರೆದಲೆಗನೇ ಉತ್ತಮನೆಂಬುದನ್ನು ಒಪ್ಪಿ ನುಡಿದರು.

ಸುರಮುನಿಗಳಿಂತೆನಲು, ಭೂಸುರ
ವರರು, ಸಂತೋಷಿಸಲು ಸಭಿಕರು
'ನರೆದಲೆಗ ನೀ ಬಾ'ರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ "ರಾಘವ"ನೆಂಬ ಪೆಸರಾ (ರಾಘವ --> ರಾಗಿ)
ಯ್ತಿರದೆ ವ್ರಿಹಿ ನಾಚಿದನು. ಸಭೆಯಲ್ಲಿ ಶಿರವ ಬಾಗಿಸಿದ.                         -೧೩೬

ಹಾಗೆ ಎಲ್ಲರ ಸಮಕ್ಷಮದಲ್ಲಿ ರಾಮನು ನರೆದಲೆಗನನ್ನು ಉತ್ತಮನೆಂದು ಘೋಷಿಸಿ, ತನ್ನ ಹೆಸರಾದ ’ರಾಘವ’ನೆಂಬ ನಾಮವನ್ನೇ ನರೆದಲೆಗನಿಗೂ ಕೊಟ್ಟನು. "ಹರುಷ ತೋರಿದ ಮನದಿ ನಲಿವುತ ನರೆದಲೆಗನೈತಂದು ರಾಮನ ಸಿರಿಚರಣಕೆ ಅಭಿನಮಿಸೆ, ದೇವಾಸುರರು ಕೊಂಡಾಡೆ, ಹರಸಿ ಮುತ್ತಿನ ಸೇಸೆಯನು ಭೂಸುರರು ಮಂತ್ರಾಕ್ಷತೆಯನ್ ಇತ್ತು ಉಪಚರಿಸಿದರು ರಾಗಿಯನು...." ಹೀಗೆ ರಾಗಿಯು ಸಭೆಯಲ್ಲಿ ಎಲ್ಲರ ಮೆಚ್ಚುಗೆ, ಗೌರವ, ಆಶೀರ್ವಾದಗಳಿಗೆ ಪಾತ್ರವಾಗುತ್ತದೆ.

ನಂತರದಲ್ಲಿ ಬ್ರಹ್ಮ, ಶಿವ, ಇಂದ್ರ, ಯಮ, ಕುಬೇರ ಮೊದಲಾದ ದೇವತೆಗಳು ರಾಗಿಗೆ ವಿವಿಧ ಬಹುಮಾನಗಳನ್ನೂ, ವರಗಳನ್ನೂ ಕೊಟ್ಟು ಹರಸಿದರು.

ಕರೆಸಿದಳು ಶರ್ವಾಣಿ(ಪಾರ್ವತಿ) ತನ್ನಯ ಮರುಳು ಬಳಗವನೆಲ್ಲ - "ನೀವೀ ಧರಣಿಯಲಿ ಸತಿ ರೂಪವಂ ತಾಳ್ದು, ಅಗಣಿತದ ಮನೆಗಳಲಿ ಹುರುಳುಗೆಡಿಸದೆ ಸರ್ವಭೂತಾತ್ಮರಿಗೆ ಪಕ್ವಾನ್ನವನು ನೀಡಿ" ಎಂದು ಉರುತರದ ಪ್ರೇಮದಲಿ ಕಳುಹಿದಳಗಜೆ (ಅಗಜೆ - ಪರ್ವತರಾಜನ ಕುಮಾರಿ, ಪಾರ್ವತಿ) ಕರುಣದಲಿ.
ನಂತರದಲ್ಲಿ ಹರಿಹರಬ್ರಹ್ಮಾದಿಗಳು ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸಿ ತಮ್ಮತಮ್ಮ ಲೋಕಗಳಿಗೆ ತೆರಳಿದರು.

ಸಭೆಗೆ ಆಗಮಿಸಿದ್ದ ದೇವಾಸುರರು, ಬ್ರಾಹ್ಮಣರು ಮುಂತಾದರೆಲ್ಲ ಅನೇಕ ವರಗಳನ್ನು ಕರುಣಿಸಿ ಹರಸಿದ್ದರ ಫಲವಾಗಿ ನರೆದಲೆಗನು ಮುಂದೆ ಭುವಿಯಲ್ಲಿ ರಾಗಿ ಎಂದು ಪ್ರಖ್ಯಾತನಾದನು.
ಹೀಗೆ ಸಭೆಯಲ್ಲಿ ರಾಗಿಯು ಎಲ್ಲರಿಂದ ಪ್ರಶಂಸೆ ಪಡೆದುದನ್ನು ಕಂಡು ತನಗಾದ ಮಾನಭಂಗವನ್ನು ನೆನೆಯುತ್ತ ಚಿಂತೆಗೊಳಗಾಗಿದ್ದ ವ್ರಿಹಿಗನನ್ನು ರಾಮನು ಕರೆದು ಪ್ರೇಮದಿಂದ ಮಾತನಾಡಿಸಿದನು. "ಅಯ್ಯಾ ವ್ರಿಹಿಗ, ಏಕೆ ಕೊರಗುತ್ತೀಯೆ. ನಾವು ಭೂಮಿಯಲ್ಲಿ ನರೆದಲೆಗನೇ ಉತ್ತಮನೆಂದು ಹೇಳಿದ್ದನ್ನು ಕೇಳಿ ಖತಿಗೊಂಡಿರುವೆಯಾ? ಈತನು ಕ್ಷಾಮಕಾಲದಲ್ಲೂ ಜನರನ್ನು ಕರುಣೆಯಿಂದ ಕಾಯುತ್ತಾನೆಯಾದ್ದರಿಂದ ಅವನನ್ನು ಪತಿಕರಿಸಿದೆವು. ಅಷ್ಟೇ ಹೊರತು ನಿನ್ನನ್ನು ಹೀಗಳೆಯುವುದು ನಮ್ಮ ಉದ್ದೇಶವಲ್ಲ."
"...ನಮ್ಮೆಡೆಗೆ ನೀನು ಸುರಧೇನುವಿನ ಸಮ. ನಿನ್ನ ಚಿತ್ತದಿ ಹಾನಿದೋರಲದೇಕೆ, ಬಿಡು ಬಿಡು ಚಿಂತೆ ಯಾಕೆಂ"ದ

"ದೇವರಿಗೆ ಪರಮಾನ್ನ ನೀ. ಮನು
ಜಾವಳಿಗೆ ಪಕ್ವಾನ್ನವೀತನು.
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು.
ನಾವು ಕೊಟ್ಟೆವು ವರವ, ಸಲ್ಲುವು
ದಾವ ಕಾಲದಲಿನ್ನು ನೀವೇ ಪಾವನರು ಸುಖಿ"ಯೆಂದುಪಚರಿಸಿದನು ನೃಪತಿ.          - ೧೪೯

ಹೀಗೆ ವ್ರಿಹಿಗನನ್ನು ಸಂತೈಸಿ, ಇತರ ಧಾನ್ಯಗಳನ್ನೂ ಹರಸಿ ಹಲವು ವರಗಳನಿತ್ತು ರಾಮನು ಎಲ್ಲ ಧಾನ್ಯಗಳನ್ನೂ ಕಳುಹಿಸಿದ.

ಶಾಂಡಿಲ್ಯ ಮುನಿಗಳು ಯುಧಿಷ್ಠಿರನಿಗೆ ಈ ಕಥೆಯೆಲ್ಲವನ್ನು ವಿಸ್ತಾರವಾಗಿ ಹೇಳಿದರು. ಯುಧಿಷ್ಠಿರನು ರಾಮಧಾನ್ಯದ ಚರಿತೆಯನ್ನು ಕೇಳುವ ಭಾಗ್ಯ ತನ್ನದಾಯ್ತೆಂದು ಸಂತಸದಿಂದ ಶಾಂಡಿಲ್ಯ ಮುನಿಯ ಪಾದಗಳಿಗೆರಗಿ ವಂದಿಸಿದ.

ಶಾಂಡಿಲ್ಯಮುನಿಯು:
"ಅರಸ, ನೀ ಮನವೊಲಿದು ಕೇಳದ
ಚರಿತೆ ತಾನೊಂದಿಲ್ಲ. ಲೋಕದಿ
ಪರಮ ಪುಣ್ಯದ ರಾಮಕಥೆಯಿದ ಕೇಳ್ದೆ ನೀನಿಂದು
ಕೊರತೆಯುಂಟೇ? ಇಷ್ಟಭೋಗವ
ಹರಿ ಕೊಡುವ ನಿಮಗಿನ್ನು"ಯೆನುತುಪ
ಚರಿಸಿ ಕಳುಹಿಸಿಕೊಂಡು ಮುನಿ ಹೊರವಂಟನಾಶ್ರಮಕೆ.                            -೧೫೭

ಶರಧಿಶಯನ ಮುಕುಂದ ಸಚರಾ
ಚರಭರಿತ ನಿರ್ಗುಣ ನಿರಾಮಯ
ಸುರ ನರೋರಗವಂದ್ಯ ವರಪುರದಾದಿಕೇಶವನ
ಚರಣದಂಕಿತಮಾಗಿ ಪೇಳಿದ
ಪರಮಧಾನ್ಯದ ಚರಿತೆ ಸಂತತ
ಧರೆಯೊಳಿಂತೊಪ್ಪಿಹುದು ಆಚಂದ್ರಾರ್ಕ ಪರಿಯಂತ.                              -೧೫೮


"ಮಂಗಳಂ"