Wednesday, 26 February 2014

ದುರ್ಗಸಿಂಹನ "ಕರ್ಣಾಟಕ ಪಂಚತಂತ್ರ" - ಭಾಗ ೧

"ಪಂಚತಂತ್ರ" ಎಂಬ ಹೆಸರನ್ನು ಕೇಳಿದರೆ ಸಾಕು, ನಮಗೆಲ್ಲ ನಮ್ಮ ಬಾಲ್ಯದ ನೆನಪಾಗಿಯೇ ಆಗುತ್ತದೆ. ನಾವೆಲ್ಲ ನಮ್ಮ ಬಾಲ್ಯದಲ್ಲಿ ಒಂದಲ್ಲ ಒಮ್ಮೆ ಪಂಚತಂತ್ರದ ಕತೆಗಳನ್ನು ಓದಿಯೋ ಕೇಳಿಯೋ ಇರುತ್ತೇವೆ. ಪಂಚತಂತ್ರದಲ್ಲಿನ ಬಹುತೇಕ ಕತೆಗಳಲ್ಲಿ ಪ್ರಾಣಿಗಳೇ ಮುಖ್ಯ ಪಾತ್ರಧಾರಿಗಳಾಗಿರುವುದರಿಂದ ಮಕ್ಕಳಿಗೆಲ್ಲ ಕತೆಗಳು ಬಹುಪ್ರಿಯವೆನಿಸಿವೆ - ಅಂದಿಗೂ, ಇಂದಿಗೂ, ಇನ್ನೂ ಮುಂದಕ್ಕೂ..

ಜಗತ್ತಿನ ವಿವಿಧ ದೇಶಗಳಲ್ಲಿ ಸುಮಾರು ೯೦ 'ಪಂಚತಂತ್ರ' ಪರಿಷ್ಕರಣೆಗಳಿವೆಯಂತೆ. ಅಲ್ಲದೆ, ಕತೆಗಳು ಜಗತ್ತಿನ ೨೦೦ ಭಾಷೆಗಳಲ್ಲಿ ಅನುವಾದಗೊಂಡೋ ರೂಪಾಂತರಗೊಂಡೋ ಪ್ರಚಲಿತದಲ್ಲಿವೆಯಂತೆ. ಅಂದಮೇಲೆ ಅದರ ಹಿರಿಮೆಯ ಬಗ್ಗೆ ಹೇಳುವುದಿನ್ನೇನಿದೆ.
ಹಾಗಿದ್ದರೆ, ಕನ್ನಡದಲ್ಲಿಯೂ ಪಂಚತಂತ್ರದ ಅನುವಾದವಿದೆಯೇ? ಹೌದು. ೧೧ನೇ ಶತಮಾನದಲ್ಲಿ ಜೀವಿಸಿದ್ದ ಬ್ರಾಹ್ಮಣಕವಿ ದುರ್ಗಸಿಂಹನು "ಕರ್ಣಾಟಕ ಪಂಚತಂತ್ರ"ವನ್ನು ರಚಿಸಿದ್ದಾನೆ.

ಭಾರತದಲ್ಲಿ ವಿಷ್ಣುಶರ್ಮ ಹಾಗೂ ವಸುಭಾಗಭಟ್ಟ ಸಂಪ್ರದಾಯದ ಪಂಚತಂತ್ರ ಕತೆಗಳು ಇದ್ದವೆಂದು ವಿದ್ವಾಂಸರು ಕಂಡುಕೊಂಡಿದ್ದಾರೆ. ಅವುಗಳಲ್ಲಿ ದುರ್ಗಸಿಂಹನು ಅನುವಾದಿಸಿರುವುದು ವಸುಭಾಗಭಟ್ಟ ಸಂಪ್ರದಾಯದ್ದು. (ಇದು ನೇರ ಅನುವಾದವಾಗಿರದೆ ವಸುಭಾಗಭಟ್ಟನು ಹೇಳಿದುದನ್ನು ತಾನು ಹೊಸತೆನಿಸುವಂತೆ ಹೇಳುತ್ತಿರುವುದಾಗಿ ದುರ್ಗಸಿಂಹ ತಿಳಿಸುತ್ತಾನೆ - "ಪೊಸತಾಗಿರೆ ವಿರಚಿಸುವೆಂ ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ")
ಕೃತಿಯ ವೈಶಿಷ್ಟ್ಯತೆಯೆಂದರೆ - ಪ್ರಪಂಚದಲ್ಲಿಯೇ ವಸುಭಾಗ ಸಂಪ್ರದಾಯದ 'ಪಂಚತಂತ್ರ'ವು ಸಮಗ್ರವಾಗಿ ಸಿಕ್ಕುವುದು ಇಲ್ಲಿ ಮಾತ್ರ.
ಹೀಗಾಗಿ 'ಕರ್ಣಾಟಕ ಪಂಚತಂತ್ರ'ಕ್ಕೆ ಪಂಚತಂತ್ರದ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ.

ಹಳಗನ್ನಡ ಕೃತಿಗಳನ್ನು ಓದುವುದು ಅತಿ ಕಷ್ಟ, ಮಹಾ ಕಷ್ಟ ಎನ್ನುವವರು ಇದನ್ನೊಮ್ಮೆ ಓದಿ ನೋಡಬೇಕು. ತೀರಾ ಸರಳ ಭಾಷೆಯಲ್ಲಿರುವ ಇದನ್ನು ಓದಿದ ನಂತರ ಅವರ ಅಭಿಪ್ರಾಯವು ಬದಲಾಗದೇ ಇರದು. ಯಾವುದಕ್ಕೂ ನೀವೂ ಒಮ್ಮೆ ಪ್ರಯತ್ನಿಸಿ ನೋಡಿ.
ಕವಿಯ ಮಾತು ನೇರವಾಗಿ ಸಹೃದಯರಿಗೆ ತಲುಪಲಿ ಎಂಬ ಉದ್ದೇಶದಿಂದಲೇ, ಎಂದಿನಂತೆ ಹೊಸಗನ್ನಡದ ಅರ್ಥ-ಟೀಕೆಯನ್ನು ಬರೆಯದೆ, ನೇರವಾಗಿ - ಕೃತಿಯಲ್ಲಿರುವಂತೆಯೇ ಲೇಖನದಲ್ಲಿ ಅಳವಡಿಸಲಾಗಿದೆ. ತೀರ ಅನಿವಾರ್ಯವೆನಿಸಿದ ಕಡೆ ಮಾತ್ರ ಸಂಧಿಯನ್ನು ಬಿಡಿಸಿ ಬರೆಯಲಾಗಿದೆ ಅಷ್ಟೇ.

ಪೀಠಿಕೆ

ಒಂದು ದಿವಸಂ ಪರಮೇಶ್ವರನುಂ ಮೇರುಪರ್ವತದ ಮೇಲೆ ಪಿರಿದುಂ(ಹಿರಿದಾದ) ಸಂತೋಷದಿಂ ಎಡದಲ್ಲಿ ಬ್ರಹ್ಮನುಂ, ಬಲದಲ್ಲಿ ವಿಷ್ಣುವುಂ, ಪಿಂದೆ(ಹಿಂದೆ) ಮೂವತ್ತುಮೂಱು ಕೋಟಿ ದೇವತೆಗಳುಂ, ಮುಂದೆ ನಂದಿನಾಥ-ವೀರಭದ್ರಾದಿ ಗಣನಾಥರುಂ, ತೊಡೆಯ ಮೇಲೆ ಗೌರಿಯುಂ, ಜಡೆಯಲ್ಲಿ ಗಂಗೆಯುಂ ಸಹಿತಮಾಗಿಯೊಡ್ಡೋಲಗಂಗೊಟ್ಟು (ಸಹಿತಂ+ಆಗಿ+ಒಡ್ಡೋಲಗಂ+ಕೊಟ್ಟುಕುಳಿತಿರ್ದಂ.

ಅಂತಿರ್ದ ಪರಮೇಶ್ವರಂಗೆ ಗಿರಿರಾಜತನೂಜೆ(ಪಾರ್ವತಿ) ಕರಕಮಲಂಗಳಂ ಮುಗಿದುದೇವಾ, ನೀವೆನಗೊಂದಪೂರ್ವಮಪ್ಪ (ನೀವು+ಎನಗೆ+ಒಂದು+ಅಪೂರ್ವಂ+ಅಪ್ಪ) ಕಥೆಯಂ ಪೇಳಲ್ವೇಳ್ಪುದೆನೆ; ಹರಂ ದರಹಸಿತವದನಾರವಿಂದನಾಗಿ ಪಾರ್ವತಿಗಪೂರ್ವಮಪ್ಪ (ಪಾರ್ವತಿಗೆ+ಅಪೂರ್ವಮಪ್ಪ) ಕಥೆಗಳಂ ಪೇಳುತ್ತಿರಲಾ ಕಥಾಗೋಷ್ಠಿಯೊಳ್ ಪುಷ್ಪದಂತನೆಂಬಂ ಗಣಪ್ರಧಾನನಿರ್ದೆಲ್ಲವಂ ಕೆಳ್ದಾತನೇನಾನುಮೊಂದು ಕಾರಣದಿಂ (ಕೇಳ್ದು+ಆತನು+ಏನಾನುಂ+ಒಂದು ಕಾರಣದಿಂ) ಮಾನವಲೋಕದೊಳ್ ಪುಟ್ಟಿ(ಹುಟ್ಟಿ) ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿರ್ದು ಹರಂ ಗಿರಿಸುತೆಗೆ ಪೇಳ್ದಾ ಕಥೆಗಳಂ ಪೈಶಾಚಕ ಭಾಷೆಯೊಳ್ "ಬೃಹತ್ಕಥೆ"ಗಳಂ ಮಾಡಿ ಪೇಳ್ದೊಡವಂ ವಸುಭಾಗ ಭಟ್ಟಂ ಕೇಳ್ದಾ ಕಥಾಸಮುದ್ರದೊಳ್ ಪಂಚರತ್ನಮಪ್ಪೈದು  ಕಥೆಗಳನಾಯ್ದುಕೊಂಡು ಪಂಚತಂತ್ರಮೆಂದು ಪೆಸರಿಟ್ಟು ಸಮಸ್ತಜಗಜ್ಜನೋಪಕಾರಾರ್ಥಂ(ಸಮಸ್ತ+ ಜಗತ್ + ಜನೋಪಕಾರಾರ್ಥಂ) ಪೇಳ್ದನದರಿಂ,

ವಸುಭಾಗಭಟ್ಟ ಕೃತಿಯಂ
ವಸುಧಾಧಿಪಹಿತಮನಖಿಲವಿಬುಧಸ್ತುತಮಂ(ವಸುಧಾಧಿಪ+ಹಿತಂ+ಅಖಿಲ+ವಿಬುಧ+ಸ್ತುತಮಂ)
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ

(ಶಿವನು ಪಾರ್ವತಿಗೆ ಹೇಳಿದ ಕಥೆಗಳನ್ನು ಕೇಳಿದ ಪುಷ್ಪದಂತನೆಂಬ ಗಣಪ್ರಧಾನನು ಮುಂದೆ ಭೂಲೋಕದಲ್ಲಿ ಗುಣಾಢ್ಯನೆಂಬ ಹೆಸರಿನ ಕವಿಯಾಗಿ ಹುಟ್ಟಿ 'ಬೃಹತ್ಕಥೆ' ಎಂಬ ಹೆಸರಿನಿಂದ ಕಥೆಗಳೆಲ್ಲವನ್ನು ಪೈಶಾಚಕ ಭಾಷೆಯಲ್ಲಿ ರಚಿಸಿದನು. ಕಥಾಸಮುದ್ರದಿಂದ ರತ್ನಗಳನ್ನು ಆಯ್ದು ಅವನ್ನು ಪಂಚತಂತ್ರವೆಂಬ ಹೆಸರಿನಿಂದ ವಸುಭಾಗಭಟ್ಟ ಎಂಬ ಕವಿಯು ರಚಿಸಿದನು)
"ವಸುಭಾಗಭಟ್ಟನಿಂದ ರಚಿತವಾದ ಕೃತಿಯನ್ನು ಹೊಸತೆನಿಸುವಂತೆ ಕನ್ನಡದಲ್ಲಿ ರಚಿಸುವೆ" ಎನ್ನುತ್ತ ದುರ್ಗಸಿಂಹನು "ಕರ್ಣಾಟಕ ಪಂಚತಂತ್ರಂ" ಅನ್ನು ರಚಿಸಿದ್ದಾನೆ.

ಕಥಾ ಪ್ರಾರಂಭ

ಕಥಾಪ್ರಪಂಚಮೆಂತೆಂದೊಡೆ (ಕಥಾ+ಪ್ರಪಂಚಂ+ಎಂತು+ಎಂದೊಡೆ) :- ಅನೇಕ ಕರಿಮಕರತಿಮಿತಿಮಿಂಗಿಲಕುಲಕ್ಷೋಭಜನಿತ ಭಂಗುರತರತ್ತರಂಗಸಂಘಾತಮಪ್ಪ ಜಲನಿಧಿವಳಯದಿಂ (ಮೊಸಳೆ, ತಿಮಿಂಗಿಲ ಮುಂತಾದ ಜಲಚರಗಳ ಚಲನದಿಂದ ಉಂಟಾದ ಅಲೆಗಳ ಸಂಘಾತದಿಂದ ಕೂಡಿದ ಸಮುದ್ರದಿಂದ ಆವೃತವಾದ ಜಂಬೂದ್ವೀಪ.) ಪರೀಕ್ಷಿಪ್ತಮಾಗಿ ಸೊಗಯಿಸುವ ಜಂಬೂದ್ವೀಪದ ಭಾರತವರ್ಷದ ಸಕಲಜಗತೀ-ಜನಸ್ತುತ್ಯದಾಕ್ಷಿಣಾತ್ಯವೆಂಬ ಜನಪದಮುಂಟು. ಅಲ್ಲಿ ಮಹಾವಿಭವದಿಂ ಮೆರೆವ ಸೌರೂಪ್ಯಮೆಂಬ ಪುರಮಿರ್ಪುದು.
ಅದನಾಳ್ವರಸನಾರೆಂದೊಡೆ -

ವಿಶದಯಶೋಲತಿಕಾವೃತ (ವಿಶದ+ಯಶೋ ಲತಿಕ+ಆವೃತ)
ದಶದಿಗ್ವಲಯಂ ಬುಧಾಶ್ರಯಂ ಸಕಳಕಳಾ
ಕುಶಲಂ ಪ್ರಭುಮಂತ್ರೋತ್ಸಾ
ಹಶಕ್ತಿಯುತನಮರಶಕ್ತಿಯೆಂಬಂ ಪೆಸರಿಂ
(ಮಂತ್ರೋತ್ಸಾಹ + ಶಕ್ತಿಯುತನ್ + ಅಮರಶಕ್ತಿ+ ಎಂಬಂ ಪೆಸರಿಂ)

ಸಕಲ ಕಲಾ ಕುಶಲನೂ, ಪ್ರಖ್ಯಾತಿವೆತ್ತವನೂ ಆದ ಅಮರಶಕ್ತಿಯೆಂಬವನೇ ಅಲ್ಲಿನ ಅರಸ.
ಅಂತಿರ್ಪಾ ಅರಸಂಗೆ,

ಪ್ರಶಮಿತಗುಣರವಿನಯಕ
ರ್ಕಶಚಿತ್ತೋನ್ಮತ್ತರಖಿಲ ವಿಷಯಕ್ರೀಡಾ
ವಶಗತಸುತರಾದರನೇ
ಕಶಕ್ತಿವಸುಶಕ್ತಿರುದ್ರಶಕ್ತಿಗಳೆಂಬರ್

ಪ್ರಶಮಿತ ಗುಣರ್, ಅವಿನಯ, ಕರ್ಕಶಚಿತ್ತರ್, ಉನ್ಮತ್ತರ್, ಅಖಿಲ ವಿಷಯ ಕ್ರೀಡಾವಶಗತರ್, ಸುತರಾದರ್  - ಏಕಶಕ್ತಿ, ವಸುಶಕ್ತಿ, ರುದ್ರಶಕ್ತಿ ಎಂಬರ್. ( ಅರಸನಿಗೆ ಗುಣಹೀನರಾದ ಏಕಶಕ್ತಿ, ವಸುಶಕ್ತಿ ಹಾಗೂ ರುದ್ರಶಕ್ತಿ ಎಂಬ ಜನ ಮಕ್ಕಳು.)

ಒಂದು ದಿವಸಮಾ ಧರಾಧೀಶ್ವರನಾಸ್ಥಾನಭೂಮಿಯೊಳನಂತ ಸಾಮಂತ ಮಂತ್ರಿ ಪುರೋಹಿತಾಂತರ್ವಾಂಶಿಕಶ್ರೀಕರಣ ಸೇನಾನಾಯಕರಸಂಧಿವಿಗ್ರಹಿ ಪ್ರಮುಖ ನಿಖಿಲ ಪರಿವಾರ ಪರಿವೃತನಾಗಿ, ಮಹಾವಿಭೂತಿಯಿಂದೊಡ್ಡೋಲಗಂಗೊಟ್ಟು ಮಹೀಪಾಲನಿರ್ಪುದುಮಾ ಪ್ರಸ್ತಾವದೊಳ್ ಅತ್ಯಂತ ಯೌವನ-ಮದ ವಿಕಾರ-ವಿಕೃತ ವೇಷರುಂನೀತಿಶಾಸ್ತ್ರ-ಸದ್ಭಾವನಾ-ಬಹಿರ್ಮುಖರುಂ, ವೃದ್ಧೋಪಸೇವಾಮೃತಾಸ್ವಾದನಾತಿದೂರರುಂ, ವಿವೇಕವಿಕಳಮತಿಗಳುಮಪ್ಪ ನಿಜತನೂಭವರ್ ಮೂವರುಮೋಲಗಕ್ಕೆ ಬರ್ಪುದಂ ಕಂಡು, ಅರಸಂ - " ಕುಮಾರರಂ ಬಾಲಕಾಲದೊಳ್ ತೊಟ್ಟು ವಿದ್ಯಾಭ್ಯಾಸಂಗೆಯಿಸದೆ ಸ್ವೇಚ್ಛಾವಿಹಾರಿಗಳಂ ಮಾಡಿ ಕಿಡಿಸಿದೆಂ(ಕೆಡಿಸಿದೆ). ಇನ್ನುಂ ಇವಂದಿರನೀಯಂದದೊಳಿರಿಸಿದೆನಪ್ಪೊಡೆ (ಇವಂದಿರನ್++ಅಂದದೊಳ್+ಇರಿಸಿದೆನ್+ಅಪ್ಪೊಡೆ) ಅವಿನೀತರಾಗಿ ಪಗೆವರ್ಗೆ(ಹಗೆಯವರಿಗೆ) ವಶಗತರಪ್ಪರದರಿಂ(ವಶಗತರ್+ಅಪ್ಪರ್+ಅದರಿಂ), ಶ್ರುತವಿನಯಸಂಪನ್ನರಂ ಮಾಡಲ್ವೇಳ್ಪುದು. ಎಂತುಂ ಸುಭಾಷಿತಮಿಂತೆಂಬುದಲ್ತೆ (ಸುಭಾಷಿತವು ಹೀಗೆ ಹೇಳಿದೆ ಅಲ್ಲವೆ)

"ಅತ್ಯಂತ ದುರ್ವಿನೀತನಂ, ಅಂತರವರಿಯದನಂ, ಇಂದ್ರಿಯವಶನಪ್ಪಾತನಂ ಶತ್ರುಗಳ್ ಕಿಡಿಸುವರ್, ಶ್ರುತವಿನಯಸಂಪನ್ನನಪ್ಪಾತಂಗೆತ್ತಲಾನುಂ(ಶ್ರುತವಿನಯ ಸಂಪನ್ನನ್+ಅಪ್ಪ+ಆತಂಗೆ+ಎತ್ತಲಾನುಂ) ಬಡತನಮಾದೊಡಂ ಪರಾಭವಮನೆಯ್ದಲರಿಯಂ"

ಇವರೊಳೊರ್ವನಂ ಮದೀಯಭುಜಬಲಾವಷ್ಟಂಭದಿಂದಂಭೋದಿವರಂ (ಅಂಭೋದಿ = ಸಮುದ್ರ) ನಿಮಿರ್ದ ಸಕಲವಸುಂಧರಾವಳಯಮಂ ರಕ್ಷಿಸುವಂತು ಮಾಳ್ಪೊಡಿವರ್ ಶ್ರುತವಿಹೀನರ್ (ಇವರನ್ನು ಅರಸರನ್ನಾಗಿ ಮಾಡೋಣವೆಂದರೆ ಇವರೋ ಬುದ್ಧಿಹೀನರು!).
ಅದರಿಂ, ಇವರಂ ಶ್ರುತವಿನಯಸಂಪನ್ನರಪ್ಪಂತು ಮಾಳ್ಪೆನೆಂಬವನುಳ್ಳೊಡಾತನೇನಂ (ಮಾಳ್ಪೆನ್+ಎಂಬುವನ್+ಉಳ್ಳೊಡೆ+ಆತನ್+ಏನಂ) ಬೇಡಿದೊಡಂ ಕುಡುವೆನೆಂದಾಸ್ಥಾನಸ್ಥಿತರಪ್ಪ ಪಂಡಿತರ್ಕಳಂ ನೋಳ್ಪುದುಂ, ಅವರೊಳೊರ್ಬಂ ಮುಕ್ತೋಷ್ಠನುಂ, ನಿಕೃಷ್ಟನುಮಪ್ಪ ಭಟ್ಟನಿಂತೆಂದಂ : ನಿಮ್ಮೀ ಕುಮಾರರಪ್ಪೊಡೆ ಯೌವನ ಮದೋನ್ಮತ್ತರುಂ, ದುರ್ಮುಖರುಂ, ಚಂಚಳಚಿತ್ತರುಮಾಗಿರ್ದಪ್ಪರಿವರಂ ನೀತಿವಿದರಪ್ಪಂತು ತಿಳಿಪುವಂದಂ ಮುದುಗುದುರೆಯಂ ತಿರ್ದುವಂತಕ್ಕುಮೆಂದು ಕಷ್ಟನಿಕೃಷ್ಟವಚನಂಗಳಂ ನುಡಿವುದುಮಾತನ ಮಾತಂ ಮಾರ್ಕೊಂಡು (ಹಾಗೆ ನಿಷ್ಠೂರವಾಗಿ ನುಡಿದ ಪಂಡಿತನ ಮಾತಿಗೆ ಉತ್ತರವಾಗಿ) ಸಮಸ್ತಶಾಸ್ತ್ರ ವಿಚಾರಸಾರನುಂ ಚತುರುಪಧಾವಿಶುದ್ಧನುಂ , ಬುದ್ಧಿವೃದ್ಧನುಂ ಅಮನೇಕಶಿಷ್ಯವಿಖ್ಯಾತಕೀರ್ತಿಯುಂ ಭದ್ರಮೂರ್ತಿಯುಮಪ್ಪ ವಸುಭಾಗಭಟ್ಟನಿಂತೆಂದಂ:

“ಎನಿತೋದನೋದಿಯುಂ ಮನ
ದನಿತೆ ವಲಂ ಬುದ್ಧಿಯಕ್ಕುಮೆಂದು ಸಮಸ್ತಾ
ವನಿಯ ಜನಮೊನಕೆವಾಡ*
ಪ್ಪಿನೆಗಂ ಸಲೆ ನುಡಿದ ನುಡಿ ಯಥಾರ್ಥಂ ನಿನ್ನೊಳ್”

(ಎನಿತು+ಓದನ್+ಓದಿಯುಂ ಮನದನಿತೆ ವಲಂ ಬುದ್ಧಿಯಕ್ಕುಂ.
‘ಎಷ್ಟು ಓದಿದರೂ ಮನದಂತೆಯೆ ಬುದ್ಧಿ’ ಎಂದು ಜನ ಹೇಳುವ ಹಾಡು ನಿನ್ನಲ್ಲಿ ನಿಜವಾಯಿತು. *ಒನಕೆವಾಡು ಎಂದರೆ ಭತ್ತ ಕುಟ್ಟುವಾಗ ಜನ ಹಾಡಿಕೊಳ್ಳುತ್ತಿದ್ದ ಪದ)

ಶ್ಲೋಕ: "ಸ್ವಭಾವಮನುವರ್ತಂತೇ ಪಾಂಡಿತ್ಯಂ ಕಿಂ ಕರಿಷ್ಯತಿ"
ಟೀಕೆ: ತನ್ನ ಪ್ರಕೃತಿ ಬಿಡದಿರಲ್ ಅಱಿಕೆಯೇನಂ ಮಾಡುವುದು? (ಪ್ರಕೃತಿ - ಸ್ವಭಾವ, ಅಱಿಕೆ-ತಿಳುವಳಿಕೆ)

ಎಂಬ ಪುರಾಣವಾಕ್ಯಮೇಕೆ ಪುಸಿಯಕ್ಕುಂ. ಅಲ್ಲದೆಯುಂ,

ಶುಕಶಾರಿಕಾದಿಪಕ್ಷಿ
ಪ್ರಕರಂ ಮೊದಲಾಗಿ ಶಿಕ್ಷೆಯಂ ಕೈಕೊಳ್ಗುಂ
ಪ್ರಕಟಂ ತಾನೆನೆ ಮಾನವ
ನಿಕರಂ ಕೈಕೊಳ್ಳದೆಂದು ನುಡಿವರೆ ಮರುಳೇ

(ಶುಕ-ಗಿಳಿ, ಶಾರಿಕ-ಮೈನ/ಹೆಣ್ಣು ಗಿಳಿ; ನಿಕರ- ಗುಂಪು) "ಗಿಳಿ ಮೊದಲಾದ ಪಕ್ಷಿಗಳೇ ವಿದ್ಯೆಯನ್ನು ಕಲಿಯಬಹುದಿರುವಾಗ ಮಾನವರು ಕಲಿಯಲಾರರೆ, ಮರುಳೇ"

ಅದಱಿಂ ನಿನ್ನ ಪರಿಜ್ಞಾನದ ತೆಱನಱಿಯಲಾದುದು; ನೀಂ ಮಟ್ಟಮಿರೆಂದಾ ಭಟ್ಟನಂ ಮುಟ್ಟುಗಿಡೆ ನುಡಿದುಂ ಮಾಣದೆ, ವಸುಭಾಗಭಟ್ಟಂ ವಿಭುಗಭಿಮುಖನಾಗಿ

"ದೇವ ಭವದೀಯಸುತರಂ
ಮೂವರುಮಂ ಜಡರನಾಱು ತಿಂಗಳ್ಗೆ ಜಯ
ಶ್ರೀವರ ಸಮಸ್ತನೃಪವಿ
ದ್ಯಾವರಪ್ಪಂತು ಮಾಡುವೆ ಪರಮಾರ್ಥಂ.

ಅಂತು ಮಾಡಲಾಱದಂದು ತಪಂಬಡುವೆನ್" ಎಂದು ವಸುಭಾಗಭಟ್ಟಂ ಪ್ರತಿಜ್ಞಾಪೂರ್ವಕಂ ನುಡಿವುದುಂ, ಅಮರಶಕ್ತಿ ಸಂತಸಂಬಟ್ಟು ಕುಮಾರರಂ ಸಮರ್ಪಿಸಿದಂ.

ವಸುಭಾಗಭಟ್ಟನವರಂ ಕೈಕೊಂಡು ಶುಭದಿನ ಸುಮುಹೂರ್ತದೊಳ್ ವಿದ್ಯಾಗಮೋಕ್ತರಂ ಮಾೞ್ಪುದುಂ(ವಿದ್ಯೆ+ಆಗಮ+ಉಕ್ತರಂ) ;
ಅವಂದಿರ್ ಅತಿವರ್ತಿಯಪ್ಪ ಮತ್ತಗಜಮಂ ಕಂಬಕ್ಕೆ ತರ್ಪಂತೆ ಒತ್ತಂಬದಿಂ (ಒತ್ತಾಯದಿಂದ ಕರೆತಂದ ಮದಿಸಿದ ಆನೆಗಳಂತೆ) ಬಂದುಂ, ಪಿಡಿವೆತ್ತ ಕಳ್ಳರಂತೆ ಸಿಡಿಮಿಡಿಗೊಳ್ಳುತಿರ್ದುಂ, ಅಪಸ್ಮಾರಗ್ರಹ ಗೃಹೀತರಂತೆ ವಕ್ರಗ್ರೀವರಾಗಿಯುಂ (ಗ್ರೀವ=ಕುತ್ತಿಗೆ), ನೆಱೆಗಿವುಡರಂತೆ ಕಿವುಡಂಗೇಳ್ದು, ಪಿಸುಣಂ ಕೇಳ್ದ ಸತ್ಪುರುಷನಂತೆ ಕೇಳ್ದುದನಲ್ಲಿಯೇ ಮಱೆದುಂ.... (ಕಿವುಡರಂತೆ ನಟಿಸುತ್ತ, ಚಾಡಿಮಾತನ್ನು ಕೆಳಿಯೂ ಕೇಳದಂತೆ ನಟಿಸುವ ಸತ್ಪುರುಷನಂತೆ ಇವರು ಕೇಳಿದ ಪಾಠವನ್ನು ಅಲ್ಲಿಂದಲ್ಲಿಯೇ ಮರೆಯುತ್ತಿದ್ದರು).

ಇಂತುಮಿವರು ಶಿಕ್ಷೆಯನೆಂತು ಕೈಕೊಳ್ಳದಿರೆ(ಹೀಗೆ ಇವರು ಯಾವ ರೀತಿಯಲ್ಲೂ ಶಿಕ್ಷಣವನ್ನು ಕೈಕೊಳ್ಳದಿರವುದನ್ನು ಕಂಡು) ವಸುಭಾಗಭಟ್ಟಂ ಚಿಂತಾಕ್ರಾಂತನಾಗಿ ಬೆಱಗಾಗಿರೆ; ಆ ಕುಮಾರರ್ ತಮ್ಮೊಡನಾಡುವ ಧೂರ್ತ ಗೋವಳಕರಂ ಕೂಡಿಕೊಂಡು ಪಾಸದ ನಾಯ್ಗಳಂ ಕರೆಸಿ, ಬಲೆಗಳಂ ತಂದು, ಬೇಂಟೆಗೆ ಪೋಗಲುದ್ಯುಕ್ತರಪ್ಪುದಂ (ಸಾಕು ನಾಯಿಗಳನ್ನು ಕರೆಸಿ, ಬಲೆಗಳನ್ನು ತರಿಸಿ ತಾವು ಬೇಟೆಗೆ ಹೋಗಲು ಉದ್ಯುಕ್ತರಾದ ಆ ಕುಮಾರರನ್ನು ಕಂಡು) ವಸುಭಾಗಭಟ್ಟಂ ಆ ಕುಮಾರಕರ ಇಚ್ಛೆಯನಱಿದು ತಾನುಂ ಅವರೊಳ್ ಒರ್ವನಾಗಿ ಪೊಱಮಡೆ ಆ ಕುಮಾರರ್ ಒಳಿತಾಯ್ತೆಂದು ಪೋಗುತ್ತಿರೆ, ವಸುಭಾಗಭಟ್ಟಂ ತನ್ನ ಮನದೊಳಗೆ "ಈ ಕುಮಾರರ್ಗೆ ಹಾಸ್ಯರಸಮೊಸರ್ವಂತೆ(ಹಾಸ್ಯರಸಂ+ಒಸರ್ವಂತೆ) ಒಂದು ಕತೆಯಂ ಪೇೞಿ ಅವರ ಮನೋಧರ್ಮಮಂ ನೋಡುವೆನೆಂದುಂ ಇಂತೆಂದನ್ –
"ಕುಮಾರರ್ಕಳಿರಾ, ನಾಮೆಲ್ಲಂ ಮುಂದಣ ವನಾಂತರಕೆ ಪೋಪನ್ನಮೊಂದು ನರಿಯ ಕತೆಯಂ ಪೇೞ್ವೆನೇ?" ಎಂದು ಬೆಸಗೊಳೆ ಆ ಕುವರರುಂ ಪೇಳಿಮೆಂದರ್.

ನರಿಯ ಕತೆ

ಸಿರಿವಾಸಿಯೆಂಬ ಪುರದೊಳ್
ಸಿರಿವಂತನೆಂಬನೊರ್ವ ಪಾದಜನಧಿಕಂ (ಪಾದಜ= ಶೂದ್ರ)
ಸ್ಮರಚಾಪನೊಡನೆ ದೊರೆಯೆನೆ
ಧರೆಯೊಳ್ ತಾಂ ಕರ್ವು ವಿತ್ತಿ ಪಾಲಿಸುತಿರ್ದಂ
(ಸಿರಿವಾಸಿಯೆಂಬ ಊರಿನಲ್ಲಿ ಸಿರಿವಂತನೆಂಬ ರೈತ ಕಬ್ಬನ್ನು ಬೆಳೆಯುತ್ತಿದ್ದ)

ಅಂತಾತಂ ಕರ್ವು ವಿತ್ತಿ ಸುತ್ತಂ ಬೇಲಿಯಂ ಕಟ್ಟಿ ಪಾಲಿಸುತ್ತುಮಿರೆ, ಕೆಲವಾನೊಂದು ದಿವಸಕ್ಕೆ ಕರ್ವು ನೆಱೆದು(ಬಲಿತು) ಗಿಣ್ಣೇಱುವುದುಂ.. ಮೃಗಧೂರ್ತನೆಂಬ ನರಿ ಅದಂ ಕಂಡು ಸಮೀಪಕ್ಕೆ ವಂದು ಬೇಲಿಯಂ ಸುತ್ತಿವಂದು ನೋಡಿ ಒಂದೆಡೆಯೊಳ್ ಒಂದು ಕಳ್ಳದಾರಿಯಂ ಕಂಡು ನಿಚ್ಚನಿಚ್ಚಂ ಬಂದು ಕರ್ವೆಲ್ಲವಂ ತಿಂದು ಬೇಸಱಿಸುತ್ತಿರೆ; ಆ ಶೂದ್ರಂ ನರಿಯ ಕಾಟಕ್ಕೆ ಬೇಸತ್ತು ಒಂದು ದಿವಸಂ ಆ ನರಿಯಂ ಕೊಲಲ್ ಉಪಾಯಮಂ ಕಂಡು ಒಂದು ಮಾರಗಲದ ಬೇಲಿಯಂ ಕಿೞ್ತು ಪೆರ್ಬಟ್ಟೆಯಂ ಮಾಡಿ(ಬಟ್ಟೆ=ದಾರಿ; ಪೆರ್ಬಟ್ಟೆ= ಅಗಲವಾದ ದಾರಿ) ತಾನುಮಾ ಬಟ್ಟೆಯೊಳ್ ಬಯ್ಗಿನ(ಬೈಗು=ಸಂಜೆ) ಸಮಯದೊಳ್ ಒಂದು ಕೈಯೊಳ್ ಕೂೞ ಬುತ್ತಿಯಂ ಪಿಡಿದು, ಮತ್ತೊಂದು ಕೆಯ್ಯೊಳ್ ದೊಡ್ಡಿತಪ್ಪೊಂದು ದಂಡಮಂ ಪಿಡಿದು ತಲೆಯಂ ಕೆದಱಿ ಮುಚ್ಚಿ ಸತ್ತ ಪೆಣನಂತೆ ಬಿೞ್ದಿರ್ಪುದುಂ ಆ ನರಿ ಬಂದು ಸಮೀಪದೊಳ್ ನಿಂದು ನೋಡಿ ತನ್ನ ಮನದೊಳ್ ಸಂಶಯಂ ಪುಟ್ಟಿ ಮತ್ತಂ ಕಿಱಿದಂತರಂ ತೊಲಗಿ ತನ್ನೊಳೆಯಿಂತೆಂದುದು:-
"ನಾಂ ಕಾಣದ ಸಂಗ್ರಾಮರಂಗಮಿಲ್ಲ. ತೊೞಲದ ವಿಷಯಮಿಲ್ಲ, ಪೋಗದ ಪೆರ್ಬಟ್ಟೆಯಿಲ್ಲ. ಆವೆಡೆಯೊಳಂ(ಆವ+ಎಡೆಯೊಳ್) ಇಂತಪ್ಪ ಸಾವಂ ಕಂಡುದಿಲ್ಲ. ಇವನ್ ಏಂ ಕಾರಣಂ ಇಂತು ಬಿೞ್ದಿರ್ಪನೋ? ಎನ್ನಂ ಕೊಲಲ್ಕೆಂದು ಕಪಟಮರಣಮಂ ತಾೞ್ದಿರ್ಪನೋ? ಮೇಣ್ ಇವಂ ಪೋಗುತ್ತುಂ ಬಟ್ಟೆಯೊಳ್ ಪಸಿದು ಬುತ್ತಿಯನ್ ಉಣಲ್ಕೆಂದು ಕುಳ್ಳಿರ್ದು ಉಣುತ್ತುಂ ಗಂಟಲ್ ಸಿಲ್ಕಿ ಸತ್ತನೋ?"
"ಇದನ್ ನಂಬಲು ಬಾರದು. ಪೆಣನುಂ ಮುಟ್ಟಲುಂ ಬಾರದು. ಕರ್ಬಿನ ತೋಟಮಂ ಪುಗಲುಂ ಬಾರದು. ಇದಂ ವಿಚಾರಿಸುವೊಡೆ ಇವಂ ಸತ್ತುದು ಪುಸಿ-ದಿಟಮೆಂದು ಅಱಿವೊಡೆ ಊರ ಸಮೀಪಕ್ಕೆ ಪೋದುದುಂ ಇವಂ ಸತ್ತ ಸಾವುಳ್ಳೊಡೆ ಊರೊಳಗೆ ಹಲುಬುತ್ತುಂ ಅೞುತಿರ್ಕುಂ. ಅಲ್ಲದಾಗಳ್ ಸುಮ್ಮನಿರ್ಕುಂ ಎಂದು ತನ್ನೊಳ್ ತಾನು ನಿಶ್ಚೈಸಿ ಊರ ಸಮೀಪಕ್ಕೆ ಪೋಗಿ ನಾಲ್ಕುಂ ಕಡೆಯನಾರೈದು ಆವ ಕಳಕಳಮಂ ಕಾಣದೆ ಮಗುೞಿ ವಂದು
"ಎನ್ನನ್ ಕೊಲಲ್ಕೆ ಇವಂ ಮಾಡಿದ ಮಾಯಮಿದು" ಎಂದು ನಿಶ್ಚೈಸಿ ತನ್ನ ಬುದ್ಧಿಗೆ ತಾನೆ ಮೆಚ್ಚಿ ನಕ್ಕು ಇಂತೆಂದುದು:-

"ಅಪೂರ್ವಮಪ್ಪ ಸಾವಂ ಕಂಡೆಂ. ಕೈಯೊಳೆರಡರೊಳಂ ಕೂೞ್ಬುತ್ತಿಯೆಂಡಾಣಿಯಂ ಪಿಡಿದುಕೊಂಡಿರ್ಪುದು. ಊರೊಳಗೆ ಆವ ಕಳಕಳಮುಮಿಲ್ಲ" ಎಂದು ತನ್ನ ಬುದ್ಧಿಗೆ ತಾನೆ ಮೆಚ್ಚಿ ಓಡಿಪೋಗಿ ಬರ್ದುಂಕಿತ್ತು.

(ಮುಂದುವರೆಯುವುದು...)

Sunday, 9 February 2014

ರನ್ನನ ’ಗದಾಯುದ್ಧ’ - ಭಾಗ ೧


’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ ರನ್ನನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.
’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು. ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.

ಮುಂಚೆಯೇ ತಿಳಿಸಿದಂತೆ, ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯುತ್ತಿರುವುದಾಗಿ ಹೇಳಿಬಿಡುತ್ತಾನೆ.

ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆಱೆವನಿಱಿವಬೆಡಂಗಂ                                 || ೧.೩೦||

ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ                                    ||೧.೩೧||

ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ                                  ||೧.೩೨||

ಮೊದಲೊಳ್ ಬದ್ಧವಿರೋಧದಿಂ ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್ ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ             ||೧.೩೩||

೩೦. ಬೆಳಗುತ್ತಿರುವ ಒಂದು ದೀಪದಿಂದ ಹಲವಾರು ದೀಪಗಳನ್ನು ಹೊತ್ತಿಸಿಕೊಂಡು ಹೋದರೂ ಅದು ಹೇಗೆ ಕುಗ್ಗದೆ ಪ್ರಕಾಶಿಸುತ್ತಲೇ ಇರುವುದೋ ಹಾಗೆ ಜಗವೆಲ್ಲ ಬಂದು ಬೇಡಿ ಪಡೆದುಕೊಂಡು ಹೋದರೂ ಇರಿವಬೆಡಂಗನ (ಇದು ಸತ್ಯಾಶ್ರಯನಿಗೆ ಇದ್ದ ಬಿರುದು) ಸಂಪತ್ತು ಅಕ್ಷಯವಾಗಿಯೇ ಇರುವುದು.
೩೧. ಹೀಗೆ ಪ್ರಸಿದ್ಧನಾದ ಸತ್ಯಾಶ್ರಯದೇವನನ್ನೇ ಕಥಾನಾಯಕನಾದ ಭೀಮನಿಗೆ ಹೋಲಿಸಿ ಈ ’ಗದಾಯುದ್ಧ’ವೆಂಬ ಕಾವ್ಯವನ್ನು ಕವಿ ರನ್ನನು ರಚಿಸಿದನು.
೩೨. ಕೃತಿಯ ಹೆಸರು ಗದಾಯುದ್ಧ, ಇದಕ್ಕೆ ನಾಯಕ ಸಾಹಸಿಯಾದ ಕಲಿ ಭೀಮ. ಅಲಂಕಾರಯುತವಾದ ಈ ಕೃತಿಯನ್ನು ರಚಿಸಿದವನು ಕವಿರತ್ನ ರನ್ನನೆಂದಮೇಲೆ ಇದರ ಮಹಿಮೆಯನ್ನು ಏನೆಂದು ಬಣ್ಣಿಸುವುದೋ..!
೩೩. ಮೊದಲಿನಿಂದಲೂ ಬದ್ಧವಿರೋಧವನ್ನು ಹೊಂದಿದ್ದ - ಕುಂತೀಪುತ್ರರಲ್ಲಿ ಮಿಗಿಲಾದ ಭೀಮ, ಹಾಗೂ ಗಾಂಧಾರಿಯ ಮಕ್ಕಳಲ್ಲಿ ಮೊದಲನೆಯವನಾದ ದುರ್ಯೋಧನನೂ - ಎದುರೆದುರಾಗಿ ನಡೆಸಿದ ಧರ್ಮಯುದ್ಧದಲ್ಲಿ ಭೀಮಸೇನನು ದುರ್ಯೋಧನನನ್ನು ಹೊಡೆದು ಕೊಂದು ವಿಜಯವನ್ನು ಹೊಂದಿದನು. ಆ ಯುದ್ಧ ಪ್ರಸಂಗವನ್ನೇ ಕಥಾವಸ್ತುವನ್ನಾಗಿಸಿಕೊಂಡು ಈ ’ಗದಾಯುದ್ಧ’ವನ್ನು ಕವಿ ರನ್ನನು ರಚಿಸಿದ್ದಾನೆ.

ಹೀಗೆ ರನ್ನನು ತಾನು ಗದಾಯುದ್ಧವನ್ನು ರಚಿಸುತ್ತಿರುವ ಹಿನ್ನೆಲೆಯನ್ನು ವಿವರಿಸುತ್ತಾನೆ.
ರನ್ನನಿಗೆ ತನ್ನ ಕಾವ್ಯರಚನಾ ಸಾಮರ್ಥ್ಯದ ಬಗೆಗೆ ಅಪಾರವಾದ ಹೆಮ್ಮೆಯೂ, ಆತ್ಮವಿಶ್ವಾಸವೂ ಇದೆ. ಅದು ಎಷ್ಟರ ಮಟ್ಟಿಗೆ ಎಂದರೆ,

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪಂಗೆಟೆರ್ದೆಯೇ                                 ||೧.೪೪||

ಕವಿಯು ಹೀಗೆ ಹೇಳುತ್ತಾನೆ "ರತ್ನಪರೀಕ್ಷಕನು ನಾನೆಂದು ಆದಿಶೇಷನ ಹೆಡೆಯ ಮೇಲಿನ ರತ್ನವನ್ನೂ, ಕೃತಿರತ್ನಪರೀಕ್ಷಕನು ನಾನೆಂದು ರನ್ನನ ಕೃತಿರತ್ನವನ್ನೂ ಪರೀಕ್ಷಿಸಿ ಬೆಲೆಗಟ್ಟುವೆನೆಂಬುವವನಿಗೆ ಧೈರ್ಯವೆಂತಹುದು?(ಅಂದರೆ ಯಾರಾದರೂ ಅಂತಹ ಸಾಹಸಕ್ಕೆ ಕೈಹಾಕಿಯಾರೇ..? ಎಂಬ ಅರ್ಥದಲ್ಲಿ)"
ಕೃತಿ ಹಾಗೂ ಕವಿಯ ಬಗೆಗೆ ಇದಿಷ್ಟು ಪರಿಚಯ ಸಾಕು. ಇನ್ನು ಕಥೆಯನ್ನು ಪ್ರಾರಂಭಿಸಬಹುದಲ್ಲವೇ?

=============================================================================================

ಕುರುಕ್ಷೇತ್ರ ಯುದ್ಧದಲ್ಲಿ ಭೀಮನ ಪರಾಕ್ರಮದಿಂದ ಶತ್ರುಸೈನ್ಯವು ನಲುಗಿಹೋಯಿತು. ದುರ್ಯೋಧನನನ್ನುಳಿದು ಕೌರವರೆಲ್ಲರೂ ಹತರಾದರು. ದುರ್ಯೋಧನನ ಕಥೆಯೂ ಮುಗಿಯಿತೆಂದರೆ ಕುರುಕ್ಷೇತ್ರದ ಅಂಕಕ್ಕೆ ತೆರೆಬೀಳುತ್ತದೆಯಷ್ಟೆ.
ಆದರೆ ಆ ಸಮಯಕ್ಕೆ ದ್ರೌಪದಿಗೆ ಒಂದು ಸಂಶಯ ಬರುತ್ತದೆ - ’ಎಲ್ಲಿ ಧೃತರಾಷ್ಟ್ರ, ಭೀಷ್ಮ ಮುಂತಾದವರ ಮಾತಿಗೆ ಒಪ್ಪಿ ಯುಧಿಷ್ಟಿರನು ದುರ್ಯೋಧನನೊಡನೆ ಸಂಧಿ ಮಾಡಿಕೊಂಡುಬಿಡುತ್ತಾನೋ!" ಎಂದು.
ಹಾಗೇನಾದರೂ ಆದರೆ ತನಗಾದ ಹಾನಿಯೆಲ್ಲಕ್ಕೆ ಪ್ರತೀಕಾರವಾದಂತಾಗುವುದಿಲ್ಲ.. ಯಾವುದೇ ಕಾರಣಕ್ಕೂ ಸಂಧಿಯಾಗಕೂಡದು ಎಂದು ಆಕೆಯ ಅಭಿಪ್ರಾಯ. ಅದನ್ನು ತಿಳಿಸಲೆಂದೇ ಆಕೆ ತನ್ನ ಇಬ್ಬರು ಸೇವಕಿಯರೊಡಗೂಡಿ ಭೀಮಸೇನನ ಬಳಿಗೆ ಬರುತ್ತಾಳೆ.

ಖಳದುಶ್ಶಾಸನವಕ್ಷ
ಸ್ಥಳೋಚ್ಚಲತ್ಕೃಷ್ಣರಕ್ತಜಲದಿಂ ಕೋಪಾ
ನಳನಂ ಮೞ್ಗಿಸದಿನ್ನುಂ
ಗಳಗಳಿತಸಕೋಪನಿರ್ಪ ತೆರದಿಂದಿರ್ದಯ್                                   ||೧.೫೭||

"ದುಷ್ಟ ದುಶ್ಶಾಸನನ ಎದೆಯಿಂದ ಚಿಮ್ಮಿದ(ಉಚ್ಚಲ=ಮೇಲಕ್ಕೆ ಚಿಮ್ಮುವ) ರಕ್ತದಿಂದ ನಿನ್ನ ಕೋಪಾಗ್ನಿಯನ್ನೆಲ್ಲ ನಂದಿಸಿಬಿಟ್ಟೆಯಾ? ನೀನಾದರೋ ಕೋಪವೆಲ್ಲ ಇಳಿದುಹೋದವಂತೆ ಇರುವೆ".
"ಒಂದು ವೇಳೆ ಧರ್ಮರಾಯನು ಶತ್ರುಗಳೊಡನೆ ಸಂಧಿ ಮಾಡಿಕೊಳ್ಳಲು ಒಪ್ಪಿಬಿಟ್ಟರೆ ನಿಮಗೆ ಮತ್ತೆ ವನವಾಸವೇ ಗತಿ. ಇನ್ನು ನಾನಾದರೋ ಬೆಂಕಿಯಲ್ಲೇ ಹುಟ್ಟಿದವಳು, ಆದ್ದರಿಂದ ಮತ್ತೆ ಬೆಂಕಿಗೆ ಬೀಳುವುದೊಂದೇ ನನಗೆ ಉಳಿಯುವ ದಾರಿ" ಎಂದು ಮುಂತಾಗಿ ಭೀಮಸೇನನನ್ನು ಮೂದಲಿಸುತ್ತಾಳೆ.
ಹೀಗೆ ದುಃಖದ ಭರದಲ್ಲಿ ನುಡಿಯುತ್ತಿರುವ ದ್ರೌಪದಿಯ ಮಾತುಗಳು ಭೀಮಸೇನನಲ್ಲಿ ಆಕೆಯ ಬಗೆಗೆ ಅನುಕಂಪವನ್ನುಂಟು ಮಾಡುತ್ತವೆ. ಆಕೆ ಹಾಗೆ ನುಡಿಯಲು ಕಾರಣವೇನೆಂದು ಆತ ಬಲ್ಲ. ಅಂದು ದ್ಯೂತದಲ್ಲಿ ತಾವು ಸೋತಾಗ, ತಮ್ಮೆಲ್ಲರ ಕಣ್ಣೆದುರಿನಲ್ಲಿಯೇ ಆಕೆಗಾದ ಅಪಮಾನದ ಉರಿಯು ಇನ್ನೂ ಜೀವಂತವಾಗಿರಲು ಆಕೆಗೆ ಕೋಪವೂ ಮನಸ್ತಾಪವೂ ಕೆರಳದೇ ಇದ್ದೀತೆ?

ಭೀಮನಿಗೂ ಇನ್ನೂ ಕೋಪವು ತೀರಿಲ್ಲ. ತನ್ನ ಬದ್ಧವೈರಿಯಾದ ದುರ್ಯೋಧನನು ಮುಗಿಯುವ ಮುನ್ನ ಆ ಕೋಪವು ಶಮನವಾದೀತೇ?

"ಗಳಿಯಿಸುತಿರೆ ಕಬರಿಭರಂ
ಗಳಿಯಿಸುತಿರೆ ನಯನವಾರಿ ನಿನ್ನಾನನದಿಂ
ನಳಿನಾನನೆ ನೀನಿರೆ ಕುರು
ಕುಳಾಂತಕಂ ಗಳಿತಕೋಪನೇ ಕಲಿಭೀಮಂ"                                 || ೧.೬೩||

"ನೀನಗ್ನಿಪುತ್ರಿಯಯ್ ಪವ
ಮಾನತನೂಭವನೆ ನಾನಣಂ ಕೂಡೆ ಸುಸಂ
ಧಾನಮರಿನೃಪರೊಳೆಂತನ
ಲಾನಿಲಸಂಯೋಗಮುರಿಪದಿರ್ಕುಮೆ ಪಗೆಯಂ"                     || ೧.೬೬||

ಬಿಚ್ಚಿದ ನಿನ್ನ ಮುಡಿಯು ಹೀಗೇ ಇಳಿಬಿದ್ದಿರಲು, ನಿನ್ನ ಕಂಗಳಿಂದ ನಿಲ್ಲದೆ ಕಣ್ಣೀರು ಸುರಿಯುತ್ತಿರಲು, ಓ ಕಮಲಮುಖಿಯೆ, ಕುರುಕುಲಾಂತಕನೆನಿಸಿದ ನಾನು ಗಳಿತ ಕೋಪನೇ ಹೇಳು?(೬೩)
ನೀನು ಅಗ್ನಿಯಲ್ಲಿ ಜನಿಸಿದವಳು, ನಾನು ವಾಯುವಿನ ಪುತ್ರ(ಕುಂತಿಗೆ ವಾಯುವಿನಿಂದ ಜನಿಸಿದವನು). ಹೀಗಿರಲು, ನಾವಿಬ್ಬರೂ ಕೂಡಿರಲು ಶತ್ರುಗಳೊಡನೆ ಸಂಧಾನ ಹೇಗೆ ಸಾಧ್ಯವಾಗುತ್ತದೆ?
(ನಲ+ಅನಿಲ+ಸಂಯೋಗಂ+ಉರಿಪದಿರ್ಕುಮೆ ಪಗೆಯಂ) ಅಗ್ನಿ ಹಾಗು ವಾಯುವಿನ ಸಂಯೋಗವು ಹಗೆಗಳನ್ನು ಸುಡದೇ ಇದ್ದೀತೆ?(ಹಗೆಯು ಸುಟ್ಟು ಬೂದಿಯಾಗದೆ ಇದ್ದೀತೆ) (೬೬)
ಹೀಗೆ ನಾನಾ ಮಾತುಗಳಿಂದ ದ್ರೌಪದಿಯನ್ನು ಸಂತೈಸಿ, ಯಾವುದೇ ಕಾರಣಕ್ಕೂ ಸಂಧಿಯಾಗದಂತೆ, ಒಂದು ವೇಳೆ ಧರ್ಮರಾಯನು ಸಂಧಿಗೆ ಒಪ್ಪಿದರೂ, ಅವನ ಮಾತನ್ನು ಮೀರಿಯಾದರೂ ಆ ದುಷ್ಟ ದುರ್ಯೋಧನನನ್ನು ತಾನು ಕೊಲ್ಲುವುದಾಗಿ ಭೀಮನು ದ್ರೌಪದಿಗೆ ಮಾತುಕೊಡುತ್ತಾನೆ. ಆ ಮಾತುಗಳಿಂದ ಸಮಾಧಾನಗೊಂಡ ದ್ರೌಪದಿಯು ಅಲ್ಲಿಂದ ನಿರ್ಗಮಿಸುತ್ತಾಳೆ.

============================================================================================= 

ಇತ್ತ, ದುರ್ಯೊಧನನು ತನ್ನವರನ್ನೆಲ್ಲ ಕಳೆದುಕೊಂಡು ವ್ಯಾಕುಲಗೊಂಡಿದ್ದಾನೆ. ಹತ್ತಿರದಲ್ಲೇ ಸಂಜಯನೂ ಇದ್ದಾನೆ. ಸಂಜಯನು ರಣರಂಗದಲ್ಲಿ ಭೀಮಾರ್ಜುನರ ಸಾಹಸಗಳನ್ನು ವರ್ಣಿಸಿ ಹೆಳುತ್ತಿದ್ದರೆ ದುರ್ಯೋಧನನಿಗೆ ತಮ್ಮ ಪಕ್ಷದವನೇ ಆದರೂ ಶತ್ರುಗಳನ್ನು ಹಾಡಿ ಹೊಗಳುತ್ತಿದ್ದಾನಲ್ಲ ಎಂದು ಸಂಜಯನ ಮೇಲೆ ಕೋಪವೂ, ಇಷ್ಟೆಲ್ಲ ಹಾನಿಯಾದರೂ ತಾನಿನ್ನೂ ಅದಕ್ಕೆ ಪ್ರತೀಕಾರವನ್ನು ಕೈಗೊಳ್ಳಲಿಲ್ಲವೆಂದು ಪಾಂಡವರ ಬಗೆಗೆ ರೋಷವುಂಟಾಗುತ್ತದೆ. ತನ್ನವರೆಲ್ಲ(ದ್ರೋಣ, ಭೀಷ್ಮ, ಕರ್ಣ, ದುಶ್ಶಾಸನ, ಜಯದ್ರಥ ಮುಂತಾದ ವೀರರು) ತೀರಿಹೋದರೂ ಏನು, ತಾನೊಬ್ಬನೇ ಯುದ್ಧ ಮಾಡಿ ಪಾಂಡವರನ್ನು ಸದೆಬಡಿಯುತ್ತೇನೆಂದು ಹೊರಡುತ್ತಾನೆ.
ಸಂಜಯನು ಅವನನ್ನು ತಡೆದು "ಬಲರಾಮ, ಅಶ್ವತ್ಥಾಮರು ಇನ್ನೂ ಇದ್ದಾರೆ. ಅಲ್ಲದೆ ಕೃಪ, ಕೃತವರ್ಮರೂ ಇದ್ದಾರೆ. ಇವರೆಲ್ಲ ಬರುವವರೆಗೂ ಕಾದು ಈ ನಾಲ್ವರಲ್ಲಿ ಯಾರಾದರೊಬ್ಬರಿಗೆ ವೀರಪಟ್ಟವನ್ನು ಕಟ್ಟಿ ಸೇನಾಪತ್ಯಾಭಿಷೇಕವನ್ನು ಮಾಡಿ ನಂತರ ಯುದ್ಧ ಹೂಡಿ ವೈರಿಗಳನ್ನು ಗೆಲ್ಲು..." ಎಂದು ಸಲಹೆ ಕೊಡುತ್ತಾನೆ. ಅದಕ್ಕೆ ದುರ್ಯೋಧನನು :

ಕಾನೀನಂ ದ್ರೋಣ ನದೀ
ಸೂನುಗಳೞಿದಿಂಬೞಿಕ್ಕೆ ಪೆಱರೆನಗಿಲ್ಲಂ
ದಾನೆ ಗಳಿತಾಶ್ರುಜಲದಿಂ
ಸೇನಾಪತ್ಯಾಭಿಷೇಕಮಂ ಮಾಡಿದಪೆಂ                                      ||೩.೬೬||

"ಕರ್ಣ(ಕಾನೀನ), ದ್ರೋಣ, ಭೀಷ್ಮ(ನದೀ ಸೂನು) ಈ ಮೂವರೂ ಅಳಿದ ಬಳಿಕ ನನಗೆ ಯಾರೂ ಇಲ್ಲವಾದರು. ಈಗಿನ್ನು ನನ್ನ ಕಣ್ಣೀರಿನಿಂದ ನನಗೆ ನಾನೇ ಸೇನಾಪತ್ಯಾಭಿಷೇಕ ಮಾಡಿಕೊಳ್ಳುತ್ತೇನೆ." (ಈ ಎಲ್ಲರ ಸಾವು ದುರ್ಯೋಧನನಿಗೆ ಅತೀವ ನೋವು ಉಂಟು ಮಾಡಿದ್ದುದು ದುರ್ಯೋಧನನ ಮಾತುಗಳಲಲ್ಲಿ ವ್ಯಕ್ತವಾಗುತ್ತದೆ. ಅದರಲ್ಲಿಯೂ ಕರ್ಣ ದುಶ್ಶಾಸನರ ಸಾವು...!)
"ಕರ್ಣ-ದುಶ್ಶಾಸನರಿಬ್ಬರೂ ನನಗೆ ಎರೆಡು ತೋಳು, ಎರೆಡು ಕಣ್ಣುಗಳಂತಿದ್ದರು. ಅವರಿಬ್ಬರೇ ತೀರಿದ ಬಳಿಕ ನಾನಿನ್ನು ಮನುಷ್ಯನಾಗಿ ಬಾಳಬಹುದೇ?" ಎಂದು ಪ್ರಲಾಪಿಸುತ್ತಾನೆ ದುರ್ಯೋಧನ.

"ಎನಗೆ ಮನಮಿಂದು ಶೂನ್ಯಂ
ಮನೆ ಶೂನ್ಯಂ ಬೀಡು ಶೂನ್ಯಮಾದುದು ಸಕಲಾ
ವನಿ ಶೂನ್ಯಮಾಯ್ತು ದುಶ್ಶಾ
ಸನನಿಲ್ಲದೆ ಕರ್ಣನಿಲ್ಲದೆ ನಾನೆಂತಿರ್ಪೆನ್"                                    ||೩.೬೯||

"ನನಗಿಂದು ಮನಸ್ಸು ಶೂನ್ಯ, ಮನೆ ಶೂನ್ಯ, ಪಾಳಯವು ಶೂನ್ಯ.. ಈಗ ಈ ಭೂಮಿಯೆಲ್ಲವೂ ಶೂನ್ಯವಾಗಿದೆ ನನಗೆ. ಕರ್ಣ-ದುಶ್ಶಾಸನರಿಲ್ಲದೆ ಹೇಗಿರಲಿ ನಾನು" ಎಂದು ನಾನಾ ರೀತಿಯಲ್ಲಿ ತನ್ನ ಮನದ ಅಳಲನ್ನು ತೋಡಿಕೊಳ್ಳುತ್ತಾನೆ.

"ಧೃತರಾಷ್ಟ್ರ ಗಾಂಧಾರಿಯರನ್ನು ಒಮ್ಮೆ ಭೇಟಿ ಮಾಡಿ ಅವರನ್ನು ಸಮಾಧಾನಪಡಿಸಬೇಕಾದ ನೀನೇ ಹೀಗೆ ಅಳುತ್ತ ಕೂರುವುದು ಸರಿಯೆ? ಶೀಘ್ರವೇ ಅವರನ್ನೊಮ್ಮೆ ಭೇಟಿ ಮಾಡಬಾರದೇ?" ಎಂದು ಸಂಜಯನು ಹೇಳಿದಾಗ,
ದುರ್ಯೋಧನನು "ಕರ್ಣನನ್ನೂ, ದುಶ್ಶಾಸನನನ್ನೂ, ಇತರ ಬಾಂಧವರನ್ನೂ ಕೊಲ್ಲಿಸಿದ ನಾನು ನಮ್ಮ ಕುರುಡ ತಂದೆಗೆ ಹಾಗೂ ತಾಯಿ ಗಾಂಧಾರಿಗೆ ಹೇಗೆ ನನ್ನ ಮುಖ ತೋರಿಸಲಿ?" ಎಂದು ಇನ್ನಷ್ಟು ದುಃಖಿತನಾಗುತ್ತಾನೆ.
ಹೀಗೆ ಇವರು ಮಾತನಾಡುತ್ತಿರುವಾಗಲೇ ಧೃತರಾಷ್ಟ್ರನೂ ಗಾಂಧಾರಿಯೂ ದುರ್ಯೋಧನನನ್ನು ಹುಡುಕುತ್ತ ಅಲ್ಲಿಗೇ ಬರುತ್ತಾರೆ. ಆ ಸಮಯಕ್ಕೆ ದುಃಖಾತಿರೇಕದಿಂದ ದುರ್ಯೋಧನನು ಧಾರಾಕಾರವಾಗಿ ಕಂಬನಿಗರೆಯುತ್ತ ’ಹಾ ದುಶ್ಶಾಸನ! ಹಾ ಕರ್ಣಾ!’ ಎನ್ನುತ್ತ ಮೂರ್ಛೆ ಹೊಗುತ್ತಾನೆ.
ಇದನ್ನು ಕೇಳಿ ಧೃತರಾಷ್ಟ್ರ-ಗಾಂಧಾರಿಯರು ದುರ್ಯೋಧನನೂ ಅಸುನೀಗಿದನೆಂದೇ ತಿಳಿದು ಅಳಲು ಶುರು ಮಾಡುತ್ತಾರೆ. ಆಗ ಸಂಜಯನು "ಕರ್ಣ ದುಶ್ಶಾಸನಾದಿಗಳ ಸಾವನ್ನು ನೆನೆದು ಶೋಕವುಕ್ಕಿ ನಿಮ್ಮ ಮಗನು ಮೂರ್ಛೆ ಹೊಗಿದ್ದಾನೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅವನು ಎಚ್ಚರಗೊಳ್ಳುವನು. ನಿಮ್ಮ ಪ್ರಲಾಪವನ್ನು ನಿಲ್ಲಿಸಿ ಸಮಾಧಾನ ಹೊಂದಿ.." ಎಂದು ಅವರನ್ನು ಸಮಾಧಾನ ಪಡಿಸುತ್ತಾನೆ.

ಕುರುಕುಲಚೂಡಾಮಣಿ ನಿಜ
ಗುರುಗಳ ನಯನಾಂಬು ತಳಿವ ಜಲಮಾಗಿರೆ ತ
ದ್ಗುರುಜನದೀರ್ಘೋಚ್ಛಾಸಮೆ
ಪರಿವೀಜನಮಾಗೆ ಮೂರ್ಛೆಯಿಂದೆೞ್ಚತ್ತಂ                                    ||೩.೮೪||

ತನ್ನ ತಂದೆ-ತಾಯಿಯರ ಕಣ್ಣೀರೇ ತಳಿವ(ಚಿಮುಕಿಸಿದ) ಜಲವಾಗಿ, ಅವರ ನಿಟ್ಟುಸಿರೇ ಬೀಸಣಿಗೆಯಾಗಿ(ಪರಿವೀಜನ) ಪರಿಣಮಿಸಿ ಅದರಿಂದ ದುರ್ಯೋಧನನು ಎಚ್ಚೆತ್ತನು.


(ಮುಂದುವರೆಯುವುದು...)

Thursday, 2 January 2014

Suneetha(sonnet)

ಅರಸಿನುಡುಗೆಯ ನಡುವೆ, ರನ್ನದೊಡವೆಯ ನಡುವೆ
ಬಂಧಿಸಿಹೆ ಮಗುವನ್ನು- ಸಿರಿಯ ಸೆರೆಯೊಳಗಿರಿಸಿ ;
ಆಡೀತು ಹೇಗೆ ಅದು, ನಲಿದೀತು ಹೇಗೆ ಅದು-
ಪ್ರತಿ ಹೆಜ್ಜೆಗೂ ತಡೆವ - ಹೊನ್ನ ತೆರೆಯನು ಸರಿಸಿ?

ಚಿನ್ನ - ರನ್ನದ ದಿರಿಸು ಅಡಿಗಡಿಗೆ ತಗುಲುವುದು,
ಅದರ ಕಾಟಕೆ ಅವನ ಸಂತೋಷವಳಿಯುವುದು;
ಬಣ್ಣ ಕೆಟ್ಟೀತೆಂಬ, ಧೂಳು ಮೆತ್ತೀತೆಂಬ -
ಭಯದಲ್ಲಿ ಆ ಮಗುವು ಸರಿಯಲೂ ಹೆದರುವುದು.

ನ್ಯಾಯವೇ ಇದು ನಿನಗೆ? ಈ ಬಂಧ ಲೇಸಹುದೆ? -
ತನ್ನ ಪ್ರೇಮವು ಮಗುವ ಸ್ವಾತಂತ್ರ್ಯ ಕಸಿಯುವೆಡೆ,
ಧೂಳಿನೊಳಗಾಡುವS ಆನಂದ ಕದಿಯುವೆಡೆ,
ಜಗದ ಸಿರಿಜಾತ್ರೆಯಾ ದ್ವಾರದೊಳು ನಿಲುಹುವೆಡೆ.

ಬಂಧ ಸಡಿಲಿಸು ತಾಯೆ, ಬಾಳ ಸವಿಯಲಿ ಅವನು;
ಭುವಿಯ ಸಿರಿಮಡಿಲಿನೊಳು ಬಾಲ್ಯ ಪಡೆಯಲಿ ಅವನು.